ಬೆಂಗಳೂರು: ಮಲ್ಲೇಶ್ವರ ಒಂಬತ್ತನೇ ಅಡ್ಡರಸ್ತೆ ನಿವಾಸಿ ಎಂ.ಎ.ಕುಮಾರ್ ಎಂಬುವರ ಮನೆಯಲ್ಲಿ ದುಷ್ಕರ್ಮಿಗಳು ಮಂಗಳವಾರ ಸುಮಾರು ಅರ್ಧ ಕೆ.ಜಿ ಚಿನ್ನಾಭರಣ ಮತ್ತು ವಜ್ರದ ಆಭರಣಗಳನ್ನು ಕಳವು ಮಾಡಿದ್ದಾರೆ.
ಸಿವಿಲ್ ಗುತ್ತಿಗೆದಾರ ಕುಮಾರ್ ಅವರು ಮನೆಗೆ ಸಂಜೆ ಬೀಗ ಹಾಕಿ-ಕೊಂಡು ಕುಟುಂಬ ಸದಸ್ಯರೊಂದಿಗೆ ವಿ.ವಿ.ಪುರದಲ್ಲಿನ ಸಂಬಂಧಿಕರ ಮನೆಗೆ ಹೋಗಿದ್ದಾಗ ಈ ಘಟನೆ ನಡೆದಿದೆ.
ಮನೆಯ ಹಿಂಬಾಗಿಲ ಬೀಗ ಮುರಿದು ಒಳ ನುಗ್ಗಿರುವ ಕಳ್ಳರು ಅಲ್ಮೇರಾದಲ್ಲಿದ್ದ ಆಭರಣಗಳನ್ನು ತೆಗೆದುಕೊಂಡು ಪರಾರಿಯಾಗಿದ್ದಾರೆ.
ಕುಮಾರ್ ಮತ್ತು ಕುಟುಂಬ ಸದಸ್ಯರು ರಾತ್ರಿ ಮನೆಗೆ ಹಿಂದಿರುಗಿದಾಗ ಕಳವು ನಡೆದಿರುವುದು ಗೊತ್ತಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. 538 ಗ್ರಾಂ ಚಿನ್ನಾಭರಣ, ವಜ್ರದ ಸರ ಮತ್ತು ಓಲೆಗಳು ಕಳವಾಗಿವೆ. ಅವುಗಳ ಮೌಲ್ಯ ಸುಮಾರು ₨ 25 ಲಕ್ಷ ಎಂದು ಪೊಲೀಸರು ಹೇಳಿದ್ದಾರೆ. ಮಲ್ಲೇಶ್ವರ ಠಾಣೆಯಲ್ಲಿ ದೂರು ದಾಖಲಾಗಿದೆ.