ಬೆಂಗಳೂರು: ನಗರದ ಎಚ್ಎಎಲ್ ವಿಮಾನ ನಿಲ್ದಾಣದ ಬಳಿಯ ಬಿ.ನಾಗಸಂದ್ರದಲ್ಲಿ ಜಲಮಂಡಳಿಯು ಕೈಗೊಂಡಿರುವ ಕುಡಿಯುವ ನೀರಿನ ಕೊಳವೆ ಅಳವಡಿಕೆ ಕಾಮಗಾರಿಯ ಗುತ್ತಿಗೆದಾರ ಎಂ.ಶಿವರಾಜ್ ಮತ್ತು ಅವರ ಸಂಬಂಧಿಕರಾದ ದೇವರಾಜ್ ಎಂಬುವರ ಮೇಲೆ ದುಷ್ಕರ್ಮಿಗಳು ಹಲ್ಲೆ ನಡೆಸಿ ಚಿನ್ನಾಭರಣ ಹಾಗೂ ಹಣ ದರೋಡೆ ಮಾಡಿದ್ದಾರೆ.
ಈ ಸಂಬಂಧ ದೇವರಾಜ್ ಅವರು ಏರ್ಪೋರ್ಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. `ಶಿವರಾಜ್ ಮತ್ತು ನಾನು ಅ.8ರಂದು ಕಾಮಗಾರಿಯ ಸ್ಥಳದಲ್ಲಿದ್ದೆವು. ಈ ವೇಳೆ ಕಾಮಗಾರಿಯ ಸ್ಥಳಕ್ಕೆ ಬಂದ ಭರತ್ಗೌಡ, ವೆಂಕಿ, ಕೃಷ್ಣಮೂರ್ತಿ ಮತ್ತು ಸೀನ ಎಂಬುವರು ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ನಡೆಸಿದರು.
ಅಲ್ಲದೇ 15 ಸಾವಿರ ನಗದು, 15 ಗ್ರಾಂ ತೂಕದ ಚಿನ್ನದ ಸರ ಮತ್ತು ಎರಡು ಮೊಬೈಲ್ಗಳನ್ನು ಕಿತ್ತುಕೊಂಡು ಪರಾರಿಯಾದರು~ ಎಂದು ದೇವರಾಜ್ ದೂರಿನಲ್ಲಿ ತಿಳಿಸಿದ್ದಾರೆ. ಘಟನೆ ಸಂಬಂಧ ಹಲ್ಲೆ, ಬೆದರಿಕೆ ಹಾಗೂ ದರೋಡೆ ಆರೋಪದ ಮೇಲೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಆರೋಪಿಗಳು ತಲೆಮರೆಸಿಕೊಂಡಿದ್ದು, ಅವರ ಪತ್ತೆ ಕಾರ್ಯ ಮುಂದುವರಿದಿದೆ ಎಂದು ಪೊಲೀಸರು ಹೇಳಿದ್ದಾರೆ.