ಗೌರಿಬಿದನೂರು: ತಾಲ್ಲೂಕಿನ ಇಡಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಶಂಭುಕನಗರ ಗ್ರಾಮದ ಮುಖ್ಯರಸ್ತೆ ಕಾಮಗಾರಿ ಆರು ತಿಂಗಳಾದರೂ ಮುಗಿದಿಲ್ಲ. ಇದರಿಂದ ರಸ್ತೆಗೆ ಸುರಿದಿದ್ದ ಜಲ್ಲಿ ಕಲ್ಲು ಈಗ ಕಿತ್ತು ರಸ್ತೆ ಬದಿಯಲ್ಲಿ ಹರಡಿಕೊಂಡಿದೆ.
ಇದಕ್ಕೆ ಕಾರಣ ಗುತ್ತಿಗೆದಾರರ, ಅಧಿಕಾರಿಗಳ ನಿರ್ಲಕ್ಷ್ಯ ಎನ್ನುತ್ತಾರೆ ಗ್ರಾಮಸ್ಥರು. ಗ್ರಾಮದ ಪ್ರಮುಖ ರಸ್ತೆಯಾಗಿದ್ದು, ಬಹುಪಾಲು ಜನರು ಈ ಮಾರ್ಗದಲ್ಲಿಯೇ ಸಂಚರಿಸುತ್ತಾರೆ. ಕಾಮಗಾರಿ ಕುಂಟುತ್ತಾ ಸಾಗಿರುವುದರಿಂದ ಇಲ್ಲಿನ ಸಂಚಾರ ಪ್ರತಿದಿನ ಹರಸಾಹಸ.
ಹಲವು ಸಾರಿ ದ್ವಿಚಕ್ರ ವಾಹನ ಸವಾರರು ಈ ರಸ್ತೆಯಲ್ಲಿ ಬಿದ್ದು ಗಾಯಗೊಂಡಿದ್ದಾರೆ. ಇಡೀ ಗ್ರಾಮದ ಜನರು ಪ್ರತಿನಿತ್ಯ ರಸ್ತೆಯಲ್ಲಿ ಓಡಾಡುವಾಗ ಗುತ್ತಿಗೆದಾರನಿಗೆ ಶಾಪಹಾಕುತ್ತಿದ್ದಾರೆ. ಕನಿಷ್ಠ ಜಲ್ಲಿ ಕಲ್ಲುಗಳ ಮೇಲೆ ಮಣ್ಣು ಹಾಕಿ ಜನರು ಓಡಾಡಲು ಅನುಕೂಲಮಾಡದೆ ನಿರ್ಲಕ್ಷ್ಯ ತಾಳಿದ್ದಾರೆ. ಗ್ರಾಮದ ಜನರು ಹಲವು ಬಾರಿ ಜನಪ್ರತಿನಿಧಿಗಳಿಗೆ, ಗ್ರಾಮ ಪಂಚಾಯಿತಿ ಅಧಿಕಾರಿಗಳಿಗೆ ದೂರು ನೀಡಿದರು ಪ್ರಯೋಜನವಾಗಿಲ್ಲ ಎಂದು ಗ್ರಾಮಸ್ಥರು ಅಸಹಾಯಕತೆ ವ್ಯಕ್ತಪಡಿಸುತ್ತಾರೆ.
ಯಾವಾಗ ಈ ರಸ್ತೆಗೆ ಮೋಕ್ಷ ಸಿಗುತ್ತದೋ ಕಾದು ನೋಡಬೇಕಾಗಿದೆ. ಗುತ್ತಿಗೆದಾರರು ಇಲ್ಲವೇ ಅಧಿಕಾರಿಗಳು ತ್ವರಿತವಾಗಿ ರಸ್ತೆಯ ಕಾಮಗಾರಿ ಪೂರ್ಣಗೊಳಿಸಿ ಜನರು ಓಡಾಡಲು ಅನುಕೂಲ ಮಾಡಿಕೊಡಬೇಕು.ಇಲ್ಲದೇ ಹೋದರೆ ಗ್ರಾಮ ಪಂಚಾಯಿತಿ ಎದುರು ಪ್ರತಿಭಟನೆ ಅನಿವಾರ್ಯ ಎಂದು ಗ್ರಾಮಸ್ಥರು ಎಚ್ಚರಿಕೆ ನೀಡುತ್ತಾರೆ.