ಹಿರಿಯೂರು: ತಾಲ್ಲೂಕಿನ ಗುಯಿಲಾಳು ಗ್ರಾಮದ ಸಮೀಪ ರಾಷ್ಟ್ರೀಯ ಹೆದ್ದಾರಿ ನಾಲ್ಕರ ಸೇವಾ ಶುಲ್ಕ ವಸೂಲಾತಿ ಕೇಂದ್ರದಿಂದ ಉಂಟಾಗುತ್ತಿರುವ ಪರಿಸರ ಮಾಲಿನ್ಯದಿಂದ ಪಕ್ಕದ ಜಮೀನುಗಳಲ್ಲಿ ಕಳೆದ ಎರಡು ವರ್ಷದಿಂದ ಯಾವುದೇ ಬೆಳೆ ಕೈಗೆ ಸಿಗುತ್ತಿಲ್ಲ ಎಂದು ರೈತರು ಆರೋಪಿಸಿದ್ದಾರೆ.
ರಸ್ತೆಯಲ್ಲಿ ಶುಲ್ಕ ಪಾವತಿಸುವ ನೆಪದಲ್ಲಿ ಪ್ರತಿ ವಾಹನವೂ ಕೆಲವು ಸಮಯ ನಿಂತು ಸಾಗುವ ಕಾರಣ, ವಾಹನಗಳಿಂದ ಹೊರ ಬರುವ ಹೊಗೆ ಹೆಚ್ಚಾಗಿ ಬೆಳೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದ್ದರೆ, ಶುಲ್ಕ ಕೇಂದ್ರದ ಸಮೀಪ ಇರುವ ಹೋಟೆಲ್ಗಳಲ್ಲಿ ವಿಶ್ರಾಂತಿಗೆಂದು ವಾಹನಗಳನ್ನು ನಿಲ್ಲಿಸುವವರು ಬಿಸಾಡುವ ಪ್ಲಾಸ್ಟಿಕ್ ಬಾಟಲ್ಗಳು, ಗುಟ್ಕಾ ಹಾಗೂ ಕ್ಯಾರಿ ಬ್ಯಾಗ್ಗಳು ಹೊಲದ ತುಂಬಾ ಹರಡುವ ಕಾರಣ ಬೆಳೆ ಹಾಳಾಗುತ್ತಿದೆ. ಕೆಲವು ಹೋಟೆಲ್ನವರು ವಾರದಲ್ಲಿ ಒಂದೆರಡು ಬಾರಿ ತ್ಯಾಜ್ಯ ವಸ್ತುಗಳಿಗೆ ಬೆಂಕಿ ಹಚ್ಚುವ ಕಾರಣದಿಂದಲೂ ತೊಂದರೆ ಆಗುತ್ತಿದೆ ಎಂದು ರೈತ ಎನ್. ವಿಶ್ವನಾಥ್ ನೋವು ತೋಡಿಕೊಂಡಿದ್ದಾರೆ.
ಇಲ್ಲಿರುವ ರೈತರ ಜೀವನೋಪಾಯಕ್ಕೆ ಕೃಷಿಯೇ ಆಧಾರವಾಗಿದ್ದು, ಶುಲ್ಕ ಕೇಂದ್ರ ಪ್ರಾರಂಭವಾದ ನಂತರ ಬೆಳೆ ಕೈಗೆ ಸಿಗದೆ ತೀವ್ರ ತೊಂದರೆ ಆಗಿದೆ. ಜಿಲ್ಲಾಧಿಕಾರಿ ಒಮ್ಮೆ ಬಿಡುವು ಮಾಡಿಕೊಂಡು ಸ್ಥಳ ಪರಿಶೀಲನೆ ನಡೆಸಲು ಎಂದು ರೈತರು ಒತ್ತಾಯ.