ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುರು ಬ್ರಹ್ಮ, ಗುರು ವಿಷ್ಣು, ಗುರುದೇವ ಮಹೇಶ್ವರ...

Last Updated 6 ಸೆಪ್ಟೆಂಬರ್ 2011, 8:30 IST
ಅಕ್ಷರ ಗಾತ್ರ

ಪಾಂಡವಪುರ: ಶಿಕ್ಷಕರೇ ದಯಮಾಡಿ ರಾಜಕಾರಣದಿಂದ ದೂರವಿದ್ದು, ನಿರಂತರ ಅಧ್ಯಯನ ಶೀಲರಾಗಿ ಮಕ್ಕಳನ್ನು ಸತ್ಪ್ರಜೆಗಳನ್ನಾಗಿ ರೂಪಿಸಲು ಶ್ರಮವಹಿಸಿ ಎಂದು ವಿಮರ್ಶಕ ಪ್ರೊ. ಶಿವರಾಮು ಕಾಡನಕುಪ್ಪೆ ಕರೆ ನೀಡಿದರು.

ಪಟ್ಟಣದ ಟಿಎಪಿಸಿಎಂಎಸ್ ರೈತ ಸಭಾ ಭವನದಲ್ಲಿ ಸೋಮವಾರ ಸಾರ್ವಜನಿಕ ಶಿಕ್ಷಣ ಇಲಾಖೆ ಆಯೋಜಿಸಿದ್ದ ಶಿಕ್ಷಕರ ದಿನಾಚರಣೆಯಲ್ಲಿ ಡಾ.ರಾಧಕೃಷ್ಣನ್ ಭಾವಚಿತ್ರ ಅನಾವರಣ ಮಾಡಿ ಮಾತನಾಡಿದರು.

ಬಹುತೇಕ ಶಿಕ್ಷಕರು ಅಧ್ಯಯನ ಪ್ರವೃತಿಯಿಂದ ದೂರ ಉಳಿದಿದ್ದಾರೆ. ಎಂದೊ ಓದಿದ ಪಠ್ಯ ಪುಸ್ತಕವನ್ನಿಟ್ಟುಕೊಂಡು ವರ್ತಮಾನದ ವಿಚಾರಗಳನ್ನು ಗ್ರಹಿಸದೆ ಮಕ್ಕಳಿಗೆ ಪಾಠ ಮಾಡುತ್ತಿದ್ದಾರೆ. ಅಲ್ಲದೆ ರಾಜಕಾರಣಿಗಳ ಹಿಂದೆ ಓಡಾಡಿಕೊಂಡು ಪುಡಾರಿಗಳಂತೆ ವರ್ತಿಸುತ್ತಿದ್ದಾರೆ. ರಾಜಕಾರಣಿಗಳು ಕೂಡ ಶಿಕ್ಷಕರನ್ನು ತಮ್ಮ ಹಿಂಬಾಲಕರನ್ನಾಗಿ ಮಾಡಿಕೊಂಡಿರುವುದು ದುರಂತದ ಸಂಗತಿ ಎಂದು ನೊಂದು ನುಡಿದರು.

ನಾ ಫೇಲ್ ಬಿಇಓ ಪಾಸ್: ಶಿಕ್ಷಕರಲ್ಲಿರುವ ಗುಂಪುಗಾರಿಕೆಯಿಂದ ಪ್ರತಿ ವರ್ಷ ಶಿಕ್ಷಕರ ದಿನಾಚರಣೆಗೆ ಎಲ್ಲ ಶಿಕ್ಷಕರನ್ನು ಭಾಗವಹಿಸುವಂತೆ ಮಾಡಲು ಎಷ್ಟೆ ಪ್ರಯತ್ನ ಪಟ್ಟರು ಸಾಧ್ಯವಾಗಿರಲಿಲ್ಲ. ಆದರೆ, ಈ ಸಾಲಿನ ದಿನಾಚರಣೆಗೆ ಬಿಇಓ ಸ್ವಾಮಿ ಅವರ ಪರಿಶ್ರಮದಿಂದಾಗಿ ಪ್ರತಿಯೊಬ್ಬ ಶಿಕ್ಷಕರು ಭಾಗವಹಿಸಿದ್ದಾರೆ ಹಾಗಾಗಿ ನಾ ಫೇಲ್ ಬಿಇಓ ಪಾಸ್ ಎಂದು ಅಧ್ಯಕ್ಷತೆ ವಹಿಸಿದ್ದ ಶಾಸಕ ಸಿ.ಎಸ್. ಪುಟ್ಟರಾಜು ಮಾರ್ಮಿಕವಾಗಿ ಹೇಳಿದರು.

ಜಿ.ಪಂ.ಸದಸ್ಯರಾದ ವಿ.ವಸಂತಪ್ರಕಾಶ್, ಮಂಜುಳಪರಮೇಶ್, ಎ.ಎಲ್.ಕೆಂಪೂಗೌಡ, ಪ.ಪಂ.ಅಧ್ಯಕ್ಷ ಎಸ್.ಸಿದ್ದೇಗೌಡ, ತಾ.ಪಂ.ಅಧ್ಯಕ್ಷೆ ಮಹಾಲಕ್ಷ್ಮಿ, ಉಪಾಧ್ಯಕ್ಷ ಶಾಮಣ್ಣ, ಸದಸ್ಯರಾದ ಕೆ.ಗೌಡೇಗೌಡ, ರಾಮಕೃಷ್ಣ, ಪುಟ್ಟೇಗೌಡ, ಎಪಿಎಂಸಿ ಅಧ್ಯಕ್ಷ ಸಿ.ಎಸ್.ಗೋಪಾಲಗೌಡ, ಟಿಎಪಿಸಿಎಂಎಸ್ ಅಧ್ಯಕ್ಷ ವಿಜಯೇಂದ್ರ, ನ್ಯಾಯವಾದಿ ಅರವಿಂದ ರಾಘವನ್, ಕಸಾಪ ಅಧ್ಯಕ್ಷ ಚಲುವೇಗೌಡ, ತಹಶೀಲ್ದಾರ್ ಬಿ.ಸಿ.ಶಿವಾನಂದಮೂರ್ತಿ, ಇಓ ಡಾ.ವೆಂಕಟೇಶಪ್ಪ, ಎಸ್‌ಸಿ/ಎಸ್‌ಟಿ ನೌಕರರ ಸಂಘದ ಎಸ್.ಟಿ.ದೊಡ್ಡವೆಂಕಟಯ್ಯ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಹರೀಶ್, ಶಿಕ್ಷಕರಾದ ನಾರಾಯಣಗೌಡ, ಯುವರಾಜ್, ಧರ್ಮೇಗೌಡ, ಕೆ.ಕೆಂಪೇಗೌಡ, ಗೋಪಾಲಗೌಡ, ಬಿ.ಕಾಳಪ್ಪ, ಪಾರ್ಥೇಗೌಡ ಉಪಸ್ಥಿತರಿದ್ದರು.

ಶಿಕ್ಷಕ ವೃತ್ತಿ ಗೌರವಯುತ: ಶಾಸಕಿ ಕಲ್ಪನಾ ಅಭಿಪ್ರಾಯ
ಮದ್ದೂರು:
ಸಮಾಜದಲ್ಲಿ ಶಿಕ್ಷಕ ವೃತ್ತಿ ಅತ್ಯಂತ ಗೌರವಯುತ ವೃತ್ತಿಯಾಗಿದ್ದು, ಶಿಕ್ಷಕರು ತಮ್ಮ ವೃತ್ತಿ ಗೌರವಕ್ಕೆ ಚ್ಯುತಿ ಬರದಂತೆ ಎಚ್ಚರವಹಿಸಬೇಕು ಎಂದು ಶಾಸಕಿ ಕಲ್ಪನ ಸಿದ್ದರಾಜು ಸೋಮವಾರ ಸಲಹೆ ನೀಡಿದರು.

ಪಟ್ಟಣದ ಸರ್ಕಾರಿ ಮಹಿಳಾ ಕಾಲೇಜಿನಲ್ಲಿ ಸೋಮವಾರ ಏರ್ಪಡಿಸಿದ್ದ ಶಿಕ್ಷಕರ ದಿನಾಚರಣೆ ಹಾಗೂ ಎನ್‌ಎಸ್‌ಎಸ್ ಕಾರ್ಯ ಚಟುವಟಿಕೆಗಳ ಉದ್ಘಾಟನೆ ನೆರವೇರಿಸಿ ಮಾತನಾಡಿದರು. ಬದಲಾಗುತ್ತಿರುವ ಕಾಲಘಟ್ಟಕ್ಕೆ ಅನುಗುಣವಾಗಿ ಶಿಕ್ಷಕರು ತಮ್ಮ ವೃತ್ತಿಯ ಕೌಶಲ್ಯತೆಯನ್ನು ಹೆಚ್ಚಿಸಿಕೊಳ್ಳುವತ್ತ ಹೆಚ್ಚಿನ ಅಸ್ಥೆ ವಹಿಸಬೇಕು ಎಂದರು.

ಬೆಂಗಳೂರಿನ ಎಸ್‌ಎಸ್‌ಎಂಆರ್‌ವಿ ಕಾಲೇಜಿನ ಪ್ರಾಧ್ಯಾಪಕ ಡಾ.ಶ್ರೀರಾಮ್‌ಭಟ್ ಗುರುವಂದನೆ ಸ್ವೀಕರಿಸಿ ಮಾತನಾಡಿದರು. ಪ್ರಾಂಶುಪಾಲರಾದ ಡಾ.ಲೀಲಾ ಅಪ್ಪಾಜಿ ಅಧ್ಯಕ್ಷತೆ ವಹಿಸಿದ್ದರು. ಕಾಲೇಜಿನ ಅಧ್ಯಾಪಕ ಕಾರ್ಯದರ್ಶಿ ಕೆ.ಶಿಲ್ಪ, ಖಜಾಂಚಿ,  ರವೀಶ್, ದೈಹಿಕ ಶಿಕ್ಷಣ ನಿರ್ದೇಶಕ ಸುರೇಶಬಾಬು, ಎನ್‌ಎಸ್‌ಎಸ್ ಅಧಿಕಾರಿ ರೂಪ, ವಿದ್ಯಾರ್ಥಿ ಸಂಘದ ಅಧ್ಯಕೆ ಅನಿತಾ, ಉಪಾಧ್ಯಕ್ಷೆ ಸಹನಾ, ಕಾರ್ಯದರ್ಶಿ ಸುನೀತಾ, ಸಂಪಾದಕಿ ವಿದ್ಯಾಶ್ರೀ ಸೇರಿದಂತೆ ಉಪನ್ಯಾಸಕರು ಪಾಲ್ಗೊಂಡಿದ್ದರು.

ಮಹಿಳಾ ಮೋರ್ಚಾ: ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಸೋಮವಾರ ಬಿಜೆಪಿ ಮಹಿಳಾ ಮೋರ್ಚಾ ವತಿಯಿಂದ ಶಿಕ್ಷಕರ ದಿನಾಚರಣೆ ಅಚರಿಸಲಾಯಿತು. ಬಿಜೆಪಿ ಜಿಲ್ಲಾ ಸಹಕಾರ ಮೋರ್ಚಾ ಕಾರ್ಯದರ್ಶಿ ಪ್ರೇಮ ಪುಟ್ಟ ಸ್ವಾಮಿ ಉದ್ಘಾಟಿಸಿದರು. ಆಲೂರು ಗ್ರಾಮದ ಅಂಗನವಾಡಿ ನಿವೃತ್ತ ಶಿಕ್ಷಕಿ ಸಾವಿತ್ರಮ್ಮ ಅವರನ್ನು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಲಲಿತಾ ಸಿದ್ದರಾಜು ಸನ್ಮಾನಿಸಿದರು.

`ನಿರಂತರ ಕಲಿಕೆಯಿಂದ ಲಾಭ~
ಹಲಗೂರು:
ಅಧ್ಯಾಪಕರು ನಿರಂತರ ವಿದ್ಯಾರ್ಥಿಗಳಾಗಬೇಕು. ಪಠ್ಯ, ಪಠ್ಯೇತರ ಚಟುವಟಿಕೆಗಳ ಜತೆಗೆ ದೇಶದ ಸರ್ವೋತೋಮುಖ ಪ್ರಜೆಯನ್ನಾಗಿ ರೂಪಿಸುವಲ್ಲಿ ನಿರಂತರ ಕಲಿಕೆ ಸಹಕಾರಿ ಎಂದು ಪ್ರಾಂಶುಪಾಲರಾದ ಪ್ರೊ.ಬಿ.ಶ್ರೀಕುಮಾರಿ ಹೇಳಿದರು.

ಹಲಗೂರಿನ ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಸೋಮವಾರ ನಡೆದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಶಿಕ್ಷಕರ ದಿನಾಚರಣೆ ಅಂಗವಾಗಿ ನಡೆದ ಕ್ರೀಡಾ ಸ್ಪರ್ಧೆಗಳಲ್ಲಿ ವಿಜೇತರಾದ ಜಗದೀಶ್, ಮೂರ್ತಿ, ಶ್ವೇತಾ, ಲತಾ ಅವರಿಗೆ ಬಹುಮಾನ ವಿತರಿಸಲಾಯಿತು. ವಿಜೇತ ವಿದ್ಯಾರ್ಥಿಗಳಿಗೂ ಬಹುಮಾನ ನೀಡಲಾಯಿತು. ಉಪನ್ಯಾಸ ವೃಂದಕ್ಕೂ ಹಾಗೂ ಪ್ರಥಮ ಪದವಿಗೆ ಪ್ರವೇಶ ಪಡೆದ ವಿದ್ಯಾರ್ಥಿಗಳಿಗೆ ನೆನಪಿನ ಕಾಣಿಕೆ ನೀಡಲಾಯಿತು.

ಉಪನ್ಯಾಸಕ ಡಿ.ಉಮೇಶ್, ಅನಿಲ್‌ಕುಮಾರ್, ಪಿ.ಸತೀಶ್, ವೇದಾವತಿ ವಿದ್ಯಾರ್ಥಿಗಳಾದ ನಟರಾಜು, ಹರಿಣಿ, ಪವಿತ್ರ, ಪುಟ್ಟಮಾದಯ್ಯ ಮಾತನಾಡಿದರು. ಸಹಪ್ರಾಧ್ಯಾಪಕರು, ಅತಿಥಿ ಉಪನ್ಯಾಸಕರು, ಬೋಧಕೇತರರು, ಕಾಲೇಜು ವಿದ್ಯಾರ್ಥಿಗಳು ಭಾಗವಹಿಸಿದ್ದರು. ತೇಜಸ್ವಿನಿ ಕಾರ್ಯಕ್ರಮ ನಿರೂಪಿಸಿದರು. ವೇದಾವತಿ ವಂದಿಸಿದರು.

`ಉತ್ತಮ ಶಿಕ್ಷಣದಿಂದ ಭ್ರಷ್ಟಾಚಾರ ಕುಸಿತ~
ಮಳವಳ್ಳಿ:
ಭ್ರಷ್ಠಾಚಾರ ತೊಲಗಿಸಲು ಅಣ್ಣಹಜಾರೆ ಅವರ ಹೋರಾಟಕ್ಕಿಂತ ಪ್ರಾಥಮಿಕ ಶಿಕ್ಷಣ ವ್ಯವಸ್ಥೆಯಲ್ಲೇ ಮಕ್ಕಳಿಗೆ ಶಿಕ್ಷಕರು ಉತ್ತಮ ಶಿಕ್ಷಣ ನೀಡಿ ಭ್ರಷ್ಠಾಚಾರ ತೊಲಗಿಸಲು ಮನದಟ್ಟುಮಾಡಬೇಕೆಂದು ಶಾಸಕ ಪಿ.ಎಂ.ನರೇಂದ್ರಸ್ವಾಮಿ ಕರೆ ನೀಡಿದರು.

ಪಟ್ಟಣದ ಬಾಲಕಿಯರ ಸರ್ಕಾರಿ ಬಾಲಕಿಯರ ಪ್ರೌಢಶಾಲೆ ಆವರಣದಲ್ಲಿ ಸೋಮವಾರ ನಡೆದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ದೇಶದಲ್ಲಿ ಭ್ರಷ್ಠಾಚಾರ ನಿಗ್ರಹ ಕಾಯಿದೆ ಜಾರಿಗೆ ತರಲು ಅಣ್ಣಾಹಜಾರೆ  ಹೋರಾಟ ಮಾಡಿರುವುದರ ಗೌರವವಿದ್ದು, ಇದರ ಜೊತೆಗೆ ಶೋಷಣೆ, ಮೇಳುಕೀಳು, ಭಾಷ ಸಂಸ್ಕೃತಿ, ಜಾತಿಯ ದಳ್ಳುರಿ, ದೌರ್ಜನ್ಯಗಳು ನಡೆಯುತ್ತಲ್ಲೇ ಇದ್ದು ಇವುಗಳನ್ನು ಹೋಗಲಾಡಿಸುವ ನಿಟ್ಟಿನಲ್ಲಿ ಪ್ರಾಥಮಿಕ ಶಿಕ್ಷಣ ಹಂತದಲ್ಲೇ ಮಕ್ಕಳಿಗೆ ಶಿಕ್ಷಕರು ಶಿಕ್ಷಣವನ್ನು ನೀಡುವ ಪ್ರಯತ್ನ ಮಾಡಬೇಕೆಂದು ಹೇಳಿದರು.

ನಿವೃತ್ತಿಯಾಗಿದ್ದ ಶಿಕ್ಷಕ/ಕಿಯರು ಹಾಗೂ ಆಕಸ್ಮಿಕ ಮೃತಪಟ್ಟಕುಟುಂಬ ಸದಸ್ಯರು ಒಟ್ಟು 31 ಮಂದಿಗೆ ಸನ್ಮಾನ ಮಾಡಿ  ಗೌರವಿಸಲಾಯಿತು.

ಶಿಕ್ಷಣ ಅಭಿವೃದ್ಧಿಗೆ ರೂ.10 ಲಕ್ಷ ರೂ.ದಾನ ನೀಡಿರುವ ಟಿ.ಜಿ.ರಂಗನಾಥ, 5 ಲಕ್ಷ ರೂ.ದಾನ ನೀಡಿರುವ ಲಿಂಗೇಗೌಡ, ಅಗತ್ಯ ಮಕ್ಕಳಿಗೆ ತರಬೇತಿ ನೀಡಲು ಸಂಪನ್ಮೂಲ ಕ್ಷೇಂದ್ರ ಪ್ರಾರಂಭಿಸಿರುವ ಶಿಕ್ಷಕ ಸುಂದ್ರಪ್ಪ ಅವರನ್ನು ಸನ್ಮಾನಿಸಲಾಯಿತು.

ಮಂಡ್ಯ ಶಂಕರೇಗೌಡ ಶಿಕ್ಷಣ ಮಹಾ ವಿದ್ಯಾಲಯ, ಪಿ.ಇ.ಟಿ. ಸ್ನಾತಕೋತ್ತರ ಶಿಕ್ಷಣ ಕೇಂದ್ರದ ಪ್ರಾಂಶುಪಾಲ ಡಾ.ವಿ.ಕೆ.ಕೃಷ್ಣಪ್ಪ ಶಿಕ್ಷಕರ ದಿನಾಚರಣೆ ಕುರಿತು ಮಾತನಾಡಿದರು.

ಜಿಲ್ಲಾ ಪಂಚಾಯಿತಿ ಸದಸ್ಯರಾದ ಸತೀಶ್, ಆರ್.ಎನ್.ವಿಶ್ವಾಸ್, ಸುಜಾತನಾಗೇಂದ್ರ, ದಿವ್ಯಶ್ರೀ, ಶಿವಮ್ಮ, ಜಕ್ರಿಯಾಖಾನ್, ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಸುಮಿತ್ರ ಶಿವಮಾದೇಗೌಡ, ಉಪಾಧ್ಯಕ್ಷೆ ನಾಗಮಣಿ, ಪುರಸಭೆ ಅಧ್ಯಕ್ಷೆ ರಶ್ಮಿರಮೇಶ್, ತಾಪಂ ಸದಸ್ಯರಾದ ಚಿಕ್ಕಲಿಂಗಯ್ಯ,ರಾಧ, ಮಾದೇವು, ಸರ್ಕಾರಿ ನೌಕರರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಮಲ್ಲಿಕಾರ್ಜುನಸ್ವಾಮಿ, ತಾಲ್ಲೂಕು  ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಮಹೇಶ್,ಪ್ರೌಢಶಾಲೆ ಮುಖ್ಯಶಿಕ್ಷಕರ ಸಂಘದ ಅಧ್ಯಕ್ಷ ಆರ್.ಕೆ.ಪುಟ್ಟಸ್ವಾಮಿ, ಸಹಶಿಕ್ಷಕರ ಸಂಘದ ಅಧ್ಯಕ್ಷ ಶಿವಲಿಂಗಯ್ಯ, ಬಿಇಓ ಎನ್.ಎಂ.ರಾಮು, ತಹಶೀಲ್ದಾರ್ ಬಿ.ವಾಣಿ, ತಾಲ್ಲೂಕು ಪಂಚಾಯಿತಿ ಇಓ ಮಹದೇವಯ್ಯ, ಎಚ್.ಆರ್.ಅಶೋಕ್‌ಕುಮಾರ್ ಅವರು ಇದ್ದರು.

`ಪರಿಣಾಮಕಾರಿಯಾಗಿ ಬೋಧಿಸಿ~
ಕೃಷ್ಣರಾಜಪೇಟೆ:
ಬೋಧನೆಯನ್ನು ಪರಿಣಾಮಕಾರಿಯಾಗಿ ಮಾಡುವುದರ ಮೂಲಕ ವಿದ್ಯಾರ್ಥಿಗಳ ಮನಸ್ಸಿನಲ್ಲಿ ಶಾಶ್ವತ ಸ್ಥಾನ ಪಡೆಯಬೇಕು ಎಂದು ತಾಲ್ಲೂಕಿನ ಕಾಪನಹಳ್ಳಿ ಗವಿಮಠದ ಸ್ವತಂತ್ರ ಸಿದ್ದಲಿಂಗ ಶಿವಯೋಗಿ ಸ್ವಾಮೀಜಿ ಹೇಳಿದರು.

ಪಟ್ಟಣದ ಮಹಿಳಾ ಸರ್ಕಾರಿ ಪದವಿ ಕಾಲೇಜಿನಲ್ಲಿ ಸೊಮವಾರ ಏರ್ಪಡಿಸಿದ್ದ ಶಿಕ್ಷಕರ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.

ಕಡುಕಷ್ಟದ ಸಂದರ್ಭದಲ್ಲೂ ಸತ್ಯ, ಪ್ರಾಮಾಣಿಕತೆಗಳಿಗೆ ಬೆನ್ನು ತಿರುಗಿಸದಂತೆ ವಿದ್ಯಾರ್ಥಿಗಳನ್ನು ರೂಪಿಸಬೇಕು. ಕೀರ್ತಿ ಮತ್ತು ಪ್ರಶಂಸೆಗಳ ಬೆನ್ನು ಹತ್ತದೆ, ತಮ್ಮ ಸಾಧನೆಗಳ ಮೂಲಕ ಸಾಮಾಜಿಕ ಬದ್ದತೆಯನ್ನು ಪ್ರದರ್ಶಿಸಬೇಕು ಎಂದು ನುಡಿದರು.

ಕಾಲೇಜಿನ ಪ್ರಾಚಾರ್ಯ ಪ್ರೊ. ಗೋವಿಂದಪ್ಪ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಅಧೀಕ್ಷಕ ಬಿಎ.ಮಂಜುನಾಥ್, ಪುರಸಭಾಸದಸ್ಯ ಕೆ.ಆರ್.ನೀಲಕಂಠ, ಪ್ರಾಧ್ಯಾ ಪಕರಾದ ಪ್ರೊ.ದೇವರಾಜ್, ಡಾ. ಮುನಿವೆಂಕಟಪ್ಪ, ಅನುಸೂಯಮ್ಮ ಮತ್ತಿತರರು ಉಪಸ್ಥಿತರಿದ್ದರು. ವಿದ್ಯಾರ್ಥಿ ಸಂಘದ ಅಧ್ಯಕ್ಷೆ ಎಂ.ಸಿ.ಅಪೂರ್ವ ಸ್ವಾಗತಿಸಿ, ಕಾರ್ಯದರ್ಶಿ ಮಧುಶ್ರೀ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT