ಯಲ್ಲಾಪುರ (ಉತ್ತರ ಕನ್ನಡ): ವಿದ್ಯಾರ್ಥಿಯೊಬ್ಬ ಉಪನ್ಯಾಸಕರೊಬ್ಬರಿಗೆ ಥಳಿಸಿದ ಘಟನೆ ಇಲ್ಲಿಯು ಪ್ರಥಮ ದರ್ಜೆ ಸರ್ಕಾರಿ ಕಾಲೇಜಿನಲ್ಲಿ ಶಿಕ್ಷಕರ ದಿನಾಚರಣೆ ಮುನ್ನದಿನವಾದ ಬುಧವಾರ ನಡೆದಿದೆ. ಈ ಸಂಬಂಧ ವಿದ್ಯಾರ್ಥಿ ಕೃಷ್ಣ ಹನುಮಂತಪ್ಪ ಭೋವಿವಡ್ಡರನನ್ನು ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ಉಪನ್ಯಾಸಕ ಜಂಬುಲಿಂಗೇಶ್ವರ ಶಿರೂರ ಅವರು ಕಲಾ ವಿಭಾಗದ (ಬಿ.ಎ) 5ನೇ ಸೆಮಿಸ್ಟರ್ ತರಗತಿಯಲ್ಲಿ ಪಾಠ ಮಾಡುತ್ತಿರುವ ಸಂದರ್ಭದಲ್ಲಿ ಆ ತರಗತಿಗೆ ಸಂಬಂಧವಿಲ್ಲದ ಕೃಷ್ಣ ಭೋವಿವಡ್ಡರ ನುಗ್ಗಿದ. ಇದನ್ನು ಉಪನ್ಯಾಸಕರು ಪ್ರಶ್ನಿಸಿದರು. ಇದರಿಂದ ಕುಪಿತನಾದ ಆತ ಅವಾಚ್ಯ ಶಬ್ದಗಳಿಂದ ಬೈದು, ಕುರ್ಚಿಯಿಂದ ಥಳಿಸಿದ ಎನ್ನಲಾಗಿದೆ.
ಶಿರೂರ ಅವರು ಪ್ರಾಂಶುಪಾಲರ ಬಳಿ ದೂರಲು ಹೋಗುತ್ತಿದ್ದಾಗ ಮತ್ತೆ ಬಂದ ಕೃಷ್ಣ ಹಾಗೂ ನಾಲ್ಕು ವಿದ್ಯಾರ್ಥಿಗಳ ಗುಂಪು ಅವರನ್ನು ಕೆಡವಿ ಒದ್ದು, ಥಳಿಸಿದ್ದಾರೆ ಎಂದು ಆರೋಪಿಸಲಾಗಿದೆ. ಪೊಲೀಸರು ವಿದ್ಯಾರ್ಥಿಯನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಥಳಿಸುವುದನ್ನು ಬಿಡಿಸಲು ಹೋದ ಸಹೋದ್ಯೊಗಿಗಳಿಗೂ ಏಟು ಬಿದ್ದಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಉಪನ್ಯಾಸಕ ಶಿರೂರ ಅವರು ಪೊಲೀಸರಿಗೆ ದೂರು ನೀಡಿದ್ದಾರೆ.