ಗುರುವಾರ, 19–9–1963
ರಾಜ್ಯ ಹೈಕೋರ್ಟ್ ನ್ಯಾಯಮೂರ್ತಿಗಳಾಗಿ ಗೋಪಿವಲ್ಲಭ ಅಯ್ಯಂಗಾರ್ ಮತ್ತು ಚಂದ್ರಶೇಖರ್
ನವದೆಹಲಿ, ಸೆ. 18 – ನ್ಯಾಯವಾದಿ ಶ್ರೀ ಕೆ.ಆರ್. ಗೋಪಿವಲ್ಲಭ ಐಯ್ಯಂಗಾರ್ ಮತ್ತು ಅಸಿಸ್ಟೆಂಟ್ ಅಡ್ವೊಕೇಟ್ ಜನರಲ್ ಶ್ರೀ ಡಿ.ಎಂ. ಚಂದ್ರಶೇಖರ್ ಅವರನ್ನು ಎರಡು ವರ್ಷಗಳ ಅವಧಿಗೆ ಮೈಸೂರು ಮುಖ್ಯ ನ್ಯಾಯಾಲಯದ ಅಡಿಷನಲ್ ನ್ಯಾಯಾಧೀಶರಾಗಿ ನೇಮಕ ಮಾಡಲಾಗಿದೆ ಎಂದು ಗೃಹಸಚಿವ ಶಾಖೆ ನಿನ್ನೆ ಇಲ್ಲಿ ಅಧಿಕೃತ ಪ್ರಕಟಣೆ ಹೊರಡಿಸಿತು.
‘ನಾಟಕ ಕಲೆಯ ಕೊಲೆ’ ವಿಧಾನ ಸಭೆಯಲ್ಲಿ ಮಸೂದೆಗೆ ತೀವ್ರ ವಿರೋಧ
ಬೆಂಗಳೂರು, ಸೆ. 18 – ನಾಟಕ ಪ್ರದರ್ಶನ ಮಸೂದೆಯನ್ನು ‘ನಾಟಕ ಕಲೆಯ ಕೊಲೆ’ ಎಂದು ಕರೆದ ವಿರೋಧ ಪಕ್ಷದ ನಾಯಕರಾದ ಶ್ರೀ ಎಸ್. ಶಿವಪ್ಪ ಅವರು ಮಸೂದೆಯ ವಾಪಸಾತಿಗೆ ಒತ್ತಾಯ ಮಾಡಿದರು.
ಕನ್ನಡ ಕಲಾವಿದ ಅವಿಧೇಯನೆ? ಆತ ದಂಗೆಕೋರನೆ? ಎಂದು ಪ್ರಶ್ನಿಸಿ ಕನ್ನಡ ನಾಟಕ ಕಲೆಯ ಬಗ್ಗೆ ಜನರಲ್ಲಿ ಅಭಿಮಾನ ಮೂಡಿ ಅದು ಅಭಿವೃದ್ಧಿಗೆ ಬರುತ್ತಿರುವಾಗ ಸರ್ಕಾರ ಇಂಥಾ ಮಸೂದೆಯನ್ನು ತಂದಿರುವುದಕ್ಕಾಗಿ ವಿಷಾದಿಸಿದರು.