ದೇಸಾಯ್ ಅವಾರ್ಡಿಗೆ ಕೇಂದ್ರದ ಪೂರ್ಣ ಒಪ್ಪಿಗೆ
ನವದೆಹಲಿ, ಜುಲೈ 4 - ಈಗಿರುವ ತುಟ್ಟಿಭತ್ಯದ ಅಧಿಕಾಂಶವನ್ನು ಮೂಲವೇತನದೊಂದಿಗೆ ಸೇರ್ಪಡೆ ಮಾಡುವುದು, ವೇತನ ಪ್ರಮಾಣದಲ್ಲಿ ಅಧಿಕ್ಯ ಮತ್ತು ಮೂರು ವರ್ಗಗಳಾಗಿ ಬ್ಯಾಂಕುಗಳ ವರ್ಗೀಕರಣ - ಇವು ಮೂರು ಪ್ರಮುಖ ಶಿಫಾರಸುಗಳನ್ನು ಮಾಡಿದ್ದ ದೇಸಾಯಿ ಬ್ಯಾಂಕ್ ಅವಾರ್ಡ್ ಅನ್ನು ಕೇಂದ್ರ ಸರಕಾರ ಪೂರ್ಣವಾಗಿ ಒಪ್ಪಿಕೊಂಡಿದೆ.
ಚಿನ್ನದ ಗಣಿಗಳ ವರ್ಗಾವಣೆ
ಬೆಂಗಳೂರು, ಜುಲೈ 4 - ಪರಿಹಾರ ಹಾಗೂ ಚಿನ್ನದ ಮೇಲಿನ ರಾಜ್ಯ ಧನದ ಪ್ರಶ್ನೆಗಳು ಇತ್ಯರ್ಥವಾದ ಮೇಲೆ ಮಾತ್ರ ಕೋಲಾರದ ಚಿನ್ನದ ಗಣಿಗಳನ್ನು ಕೇಂದ್ರಕ್ಕೆ ವರ್ಗಾಯಿಸುವುದಾಗಿ ಕೈಗಾರಿಕೆ ಸಚಿವ ಶ್ರೀ ಕೆ. ಮಲ್ಲಪ್ಪನವರು ಇಂದು ವಿಧಾನ ಸಭೆಯಲ್ಲಿ ತಿಳಿಸಿದರು.
ವರ್ಗಾವಣೆಯ ಷರತ್ತುಗಳನ್ನು ಕುರಿತು ಕೇಂದ್ರದೊಡನೆ ಸಂಧಾನ ನಡೆಸಲು ಸಂಪುಟದ ಸಮಿತಿಯೊಂದನ್ನು ರಾಜ್ಯ ಸರಕಾರ ನೇಮಿಸಿದೆಯೆಂದೂ ಸಚಿವರು ತಿಳಿಸಿದರು.
ಶ್ರೀ ಬಿ. ವಿ. ಕದಂ ಅವರು ಕಳುಹಿಸಿದ್ದ ಮೂಲ ಪ್ರಶ್ನೆಯ ಮೇಲೆ ಸಭೆಯಲ್ಲಿ ವಿಫುಲ ಪ್ರಶ್ನೋತ್ತರಗಳಾದವು.
ಚಿನ್ನದ ಗಣಿಗಳನ್ನು ಕೇಂದ್ರ ಸರ್ಕಾರಕ್ಕೆ ವರ್ಗಾಯಿಸಲು ರಾಜ್ಯ ಸರ್ಕಾರ ಒಪ್ಪಿಕೊಂಡಿದೆಯೆಂದು ಸಚಿವರು ಶ್ರೀ ಕದಂ ಅವರಿಗೆ ತಿಳಿಸಿದರು.