ಚಿನ್ನದ ಆಭರಣಗಳ ಮೇಲೆ ಕಡಿಮೆ ಮಿತಿ ವಿಧಿಸುವ
ಸಲಹೆಗೆ ತಿರಸ್ಕಾರ
ನವದೆಹಲಿ, ಡಿ. 4 – ಚಿನ್ನದ ಒಡವೆಗಳ ಶುದ್ಧತೆಯ ಬಗ್ಗೆ ಆಲೋಚಿಸದೆ ಒಬ್ಬ ವ್ಯಕ್ತಿ ಹೊಂದಿರಬಹುದಾದ ಆಭರಣಗಳ ಮೇಲೆ ಸರ್ಕಾರವು ಕಡಿಮೆ ಪ್ರಮಾಣದ ಮಿತಿಯೊಂದನ್ನು ವಿಧಿಸಬೇಕೆಂದೂ, ಆಭರಣಗಳ ಬೇಡಿಕೆಯನ್ನು ಕಡಿಮೆ ಮಾಡಲು ಅದೇ ಅತ್ಯುತ್ತಮ ಮಾರ್ಗವೆಂದೂ ಸೂಚಿಸುವ ಸಲಹೆಯೊಂದನ್ನು ಸುವರ್ಣ ನಿಯಂತ್ರಣ ಆಜ್ಞೆಯ ಕಾರ್ಯ ರೀತಿಯನ್ನು ಕೂಲಂಕುಷವಾಗಿ ಪರಾಮರ್ಶಿಸಲು ಕೇಂದ್ರ ಹಣಕಾಸಿನ ಸಚಿವರು ರಚಿಸಿದ್ದ ಅಧಿಕಾರಿಗಳ ಅನೌಪಚಾರಿಕ ತಂಡವು ತಿರಸ್ಕರಿಸಿದೆ.
ಕಬ್ಬಿನ ಬೆಲೆ ಹೆಚ್ಚಿಸಲು
ಪ್ರಮುಖ ಗಮನ
ನವದೆಹಲಿ, ಡಿ. 4 – ದೇಶದಾದ್ಯಂತ ಕಬ್ಬಿನ ಬೆಲೆಯನ್ನು ಮಣಕ್ಕೆ 2 ರೂ. ಗಳಿಗೆ ಹೆಚ್ಚಿಸಬೇಕೆಂಬ ಕೇಳಿಕೆಗೆ ಸರ್ಕಾರ ಪ್ರಮುಖ ಗಮನ ಕೊಡುತ್ತದೆಯೆಂದು ಕೇಂದ್ರ ಆಹಾರ ಮತ್ತು ವ್ಯವಸಾಯ ಸಚಿವ ಶ್ರೀ ಸ್ವರಣ್ಸಿಂಗ್ ಇಂದು ಲೋಕ ಸಭೆಗೆ ತಿಳಿಸಿದರು.
ಈ ಬಗ್ಗೆ ಇನ್ನು ಕೆಲ ದಿನಗಳಲ್ಲೇ ನಿರ್ಧಾರ ಕೈಗೊಳ್ಳುವ ಸಾಧ್ಯವಾದೀತೆಂದೂ ಅವರು ನಿರೀಕ್ಷಿಸಿದರು.