ಗುಲ್ಬರ್ಗ: ಗುಲ್ಬರ್ಗ ಆಕಾಶವಾಣಿ ಕೇಂದ್ರವು ಅತ್ಯುತ್ತಮ ಕಾರ್ಯಕ್ರಮಗಳ ಮೂಲಕ ಆದಾಯದ ಜೊತೆಗೆ ತನ್ನದೇ ಆದ ಪಾವಿತ್ರ್ಯ ಉಳಿಸಿಕೊಂಡು ಬಂದಿದೆ ಎಂದು ಗುಲ್ಬರ್ಗ ದೂರದರ್ಶನ ಕೇಂದ್ರದ ಸಹಾಯಕ ನಿರ್ದೇಶಕ ಎಂ.ಬಿ. ಪಾಟೀಲ ಅಭಿಪ್ರಾಯಪಟ್ಟರು.
ನಗರದ ಎಸ್.ಎಂ. ಪಂಡಿತ ರಂಗಮಂದಿರದಲ್ಲಿ ಸೋಮವಾರ ಆಯೋಜಿಸಿದ್ದ ಆಕಾಶವಾಣಿ ಹಬ್ಬ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಶಿಕ್ಷಣ, ಮಾಹಿತಿ ಹಾಗೂ ಮನರಂಜನೆಯಂತಹ ಉತ್ತಮ ಕಾರ್ಯಕ್ರಮಗಳನ್ನು ಪ್ರಸಾರ ಮಾಡುತ್ತಿರುವ ಆಕಾಶವಾಣಿ ಕೇಂದ್ರವು ಈ ಭಾಗದ ಸರ್ವತೋಮುಖ ಬೆಳವಣಿಗೆಗೆ ಶ್ರಮಿಸುತ್ತಿದೆಂದು ಮೆಚ್ಚುಗೆ ವ್ಯಕ್ತಪಡಿಸಿ ದರು.
ಮಾಹಿತಿ ತಂತ್ರಜ್ಞಾನದ ಕೆಟ್ಟ ಪರಿಣಾಮಗಳ ಮಧ್ಯೆಯೂ ಮಕ್ಕಳ ಮತ್ತು ಯುವಕರ ದಿಕ್ಕು ಬದಲಾಗದಂತೆ ಅವರಿಗೆ ಉತ್ತಮ ಸಂಸ್ಕಾರ ನೀಡುತ್ತಿರುವುದು ಶ್ಲಾಘನೀಯ. `ಮಾಹಿತಿ ಇದ್ದವನೇ ಮಹಾದೇವ~ ಎನ್ನುವಂತಿರುವ ಈಗಿನ ಕಾಲದಲ್ಲಿ ಶ್ರಾವ್ಯ ಪರಂಪರೆಯ ಮೂಲಕ ಗುಣಮಟ್ಟದ ಕಾರ್ಯಕ್ರಮ ಬಿತ್ತರಿಸುತ್ತಿರುವುದು ಶ್ಲಾಘನೀಯ ಎಂದರು. ಎಂ.ಆರ್. ಮೆಡಿಕಲ್ ಕಾಲೇಜಿನ ನಿರ್ದೇಶಕ ಡಾ. ಪಿ.ಎಸ್. ಶಂಕರ, ಎನ್.ವಿ. ಪದವಿ ಮಹಾವಿದ್ಯಾಲಯದ ಡಾ. ಸ್ವಾಮಿರಾವ ಕುಲಕರ್ಣಿ ಮನದ ಮಾತುಗಳನ್ನು ಹಂಚಿಕೊಳ್ಳುವ ಮೂಲಕ ಗುಲ್ಬರ್ಗ ಆಕಾಶವಾಣಿ ಕೇಂದ್ರದೊಂದಿಗಿನ ತಮ್ಮ ನಂಟಿನ ಗಂಟನ್ನು ಬಿಚ್ಚಿಟ್ಟರು.
ಶಾರದಾ ಜಂಬಲದಿನ್ನಿ ಕಾರ್ಯಕ್ರಮ ನಿರೂಪಿಸಿದರು. ಸುನಂದಾಮೂರ್ತಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ರಾಜೇಂದ್ರ ಕುಲಕರ್ಣಿ ಸ್ವಾಗತಿಸಿದರು. ಜಿ. ಶಿವಶಂಕರ ವೇದಿಕೆಯಲ್ಲಿದ್ದರು. ಕಾರ್ಯಕ್ರಮದ ನಂತರ ನೃತ್ಯ, ಶಾಸ್ತ್ರೀಯ ಗಾಯನ, ಕೊಳಲು ವಾದನ, ವಯೋಲಿನ್ ವಾದನ ಮುಂತಾದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.