ಗುಲ್ಬರ್ಗ: ಗುಲ್ಬರ್ಗ ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ಸ್ಥಾನಕ್ಕೆ ಹರ್ಷಾನಂದ ಗುತ್ತೇದಾರ ಬುಧವಾರ ರಾಜೀನಾಮೆ ನೀಡಿದರು.
ಜಿಲ್ಲಾ ಪಂಚಾಯಿತಿಯಲ್ಲಿ ಯಾರಿಗೂ ಬಹುಮತ ಸಿಗದೇ ಅತಂತ್ರ ಸ್ಥಿತಿ ಉಂಟಾಗಿದ್ದ ಸಂದರ್ಭದಲ್ಲಿ ಜೆಡಿಎಸ್ನ ಹರ್ಷಾನಂದ ಹಾಗೂ ಇನ್ನಿಬ್ಬರು ಸದಸ್ಯರು ಬಿಜೆಪಿಗೆ ಬೆಂಬಲ ನೀಡಿದ್ದರು. ಇದರಿಂದಾಗಿ ಹರ್ಷಾನಂದ ಗುತ್ತೇದಾರ ಅವರಿಗೆ ಉಪಾಧ್ಯಕ್ಷ ಸ್ಥಾನ ಕೊಟ್ಟು, ಅಧ್ಯಕ್ಷ ಸ್ಥಾನವನ್ನು ಬಿಜೆಪಿ ಪಡೆದಿತ್ತು.
ಎಂಟು ತಿಂಗಳುಗಳ ಅವಧಿಯಲ್ಲಿ ಕೆಲಸ ಮಾಡಲು ತಮಗೆ ಮುಕ್ತ ವಾತಾವರಣವೇ ಇರಲಿಲ್ಲ ಎಂದು ಆಪಾದಿಸಿರುವ ಹರ್ಷಾನಂದ, ತಾವು ಕೊಟ್ಟ ಬೆಂಬಲಕ್ಕೆ ಪ್ರತಿಯಾಗಿ ಬಿಜೆಪಿ ತಮಗೆ ದ್ರೋಹ ಎಸಗಿತು ಎಂದು ಕಿಡಿ ಕಾರಿದ್ದಾರೆ.
ಜೆಡಿಎಸ್ನ ಮೂವರು ಸದಸ್ಯರ ಪೈಕಿ ಇಬ್ಬರು ಬಿಜೆಪಿಗೆ ಬೆಂಬಲ ವಾಪಸು ಪಡೆಯುವುದಾಗಿ ಪತ್ರದಲ್ಲಿ ತಿಳಿಸಿದ್ದಾರೆ. ಬಿಜೆಪಿ ಅಧಿಕಾರ ಪಡೆಯುವುದನ್ನು ವಿರೋಧಿಸುವುದಾಗಿ ಹೇಳಿದ ಅವರು, ಕಾಂಗ್ರೆಸ್ ಜತೆ ಸೇರುವ ಬಗ್ಗೆ ಇನ್ನೂ ನಿರ್ಧರಿಸಿಲ್ಲ ಎಂದು ಸ್ಪಷ್ಟಪಡಿಸಿದರು.
ಪ್ರಸ್ತುತ 43 ಸದಸ್ಯ ಬಲದ ಜಿಲ್ಲಾ ಪಂಚಾಯಿತಿಯಲ್ಲಿ ಬಿಜೆಪಿಯ 20, ಕಾಂಗ್ರೆಸ್ 19, ಜೆಡಿಎಸ್ ಮೂವರು ಹಾಗೂ ಒಬ್ಬ ಪಕ್ಷೇತರ ಸದಸ್ಯೆ ಇದ್ದಾರೆ. ಜೆಡಿಎಸ್ ಬೆಂಬಲದೊಂದಿಗೆ ಈವರೆಗೆ ಅಧಿಕಾರ ನಡೆಸಿದ ಬಿಜೆಪಿ, ಈಗ ಮತ್ತೆ ತೊಂದರೆಗೆ ಸಿಲುಕಿದಂತಾಗಿದೆ.