ಕನಕಪುರ: ದುಷ್ಕರ್ಮಿಗಳ ಗುಂಪೊಂದು ಗೂಡ್ಸ್ ಆಟೋವನ್ನು ತಡೆದು ಅದರೊಳಗಿದ್ದ ವ್ಯಕ್ತಿಯ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಗ್ರಾಮಾಂತರ ಪೋಲಿಸ್ ಠಾಣಾ ವ್ಯಾಪ್ತಿಯ ವರಗೇರಹಳ್ಳಿ ಗೇಟ್ ಬಳಿ ಮಂಗಳವಾರ ರಾತ್ರಿ ನಡೆದಿದೆ.
ತಾಲ್ಲೂಕಿನ ಕೀರಣಗೆರೆ ಗ್ರಾಮದ ಜೈಕುಮಾರ್ (26) ಹಲೆಗ್ಲೊಳಗಾಗಿರುವ ವ್ಯಕ್ತಿಯೆಂದು ಗುರುತಿಸಲಾಗಿದೆ. ಇವರು ಮಂಗಳವಾರ ರಾತ್ರಿ ರಾಮನಗರದಿಂದ ತನ್ನ ಸ್ವಗ್ರಾಮ ಕೀರಣಗೆರೆಗೆ ತೆರಳುವ ಮಾರ್ಗಮಧ್ಯೆ ವರಗೇರಹಳ್ಳಿ ಗೇಟ್ ಬಳಿ ದ್ವಿಚಕ್ರವಾಹನಗಳಲ್ಲಿ ಬಂದ ಗುಂಪು ಆಟೊವನ್ನು ಅಡ್ಡಗಟ್ಟಿ ಕೈಯಲ್ಲಿದ್ದ ಬೀರು ಬಾಟಲ್ಗಳಿಂದ ಏಕಾ-ಏಕಿ ದಾಳಿ ನಡೆಸಿ ಮನಬಂದಂತೆ ತಲೆ, ಕೈ, ಬೆನ್ನು ಸೇರಿದಂತೆ ದೇಹದ ಹಲವಡೆ ಮಾರಣಾಂತಿಕವಾಗಿ ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ.
ತೀವ್ರ ರಕ್ತಸ್ರಾವದಿಂದ ಪೆಟ್ಟುಬಿದ್ದು ರಸ್ತೆಯಲ್ಲಿ ಒದ್ದಾಡುತ್ತಾದಾಗ ಬೆಂಗಳೂರಿನಿಂದ ಕನಕಪುರದ ಕಡೆಗೆ ಬರುತ್ತಿದ್ದ ಜಯಕರ್ನಾಟಕ ಸಂಘಟನೆಯ ಜಿಲ್ಲಾ ಪ್ರಧಾನಕಾರ್ಯದರ್ಶಿ ಎ.ಪಿ. ಕೃಷ್ಣಪ್ಪ ಮಾನವೀಯತೆ ದೃಷ್ಟಿಯಿಂದ ಕಾರನ್ನು ನಿಲ್ಲಿಸಿ ಆತನನ್ನು ತಮ್ಮ ವಾಹನದಲ್ಲೇ ಕರೆತಂದು ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಗ್ರಾಮಾಂತರ ಪೋಲಿಸ್ ಠಾಣೆಗೆ ದೂರು ನೀಡಿರುವ ಜೈಕುಮಾರ್ ತಮ್ಮ ಸೋದರ ಸಂಬಂಧಿ ಕೀರಣಗೆರೆ ರಾಮು ಮತ್ತವರ ಪತ್ನಿ ಮಂಜುಳರವರು ಸೇರಿ ನನ್ನ ಮೇಲೆ ಹಳೇ ವೈಷಮ್ಯದಿಂದ ಹಿನ್ನಲೆಯಲ್ಲಿ ಅಪರಿಚಿತ ದುಷ್ಕರ್ಮಿಗಳಿಂದ ಈ ರೀತಿ ಹಲ್ಲೆ ಮಾಡಿಸಿದ್ದಾರೆ, ಅವರ ವಿರುದ್ದ ಕ್ರಮಕೈಗೊಳ್ಳುವಂತೆ ದೂರಿನಲ್ಲಿ ತಿಳಿಸಿದ್ದಾರೆ.