ನವದೆಹಲಿ: ~ಭೂ ಹಗರಣ~ದ ಹಿನ್ನೆಲೆಯಲ್ಲಿ ಕ್ರಿಮಿನಲ್ ಮೊಕದ್ದಮೆ ಎದುರಿಸುತ್ತಿರುವ ಗೃಹ ಸಚಿವ ಆರ್. ಅಶೋಕ್ ಅವರಿಂದ ಸದ್ಯಕ್ಕೆ ರಾಜೀನಾಮೆ ಪಡೆಯದೆ ಇರಲು ತೀರ್ಮಾನಿಸಿರುವ ಮುಖ್ಯಮಂತ್ರಿ ಡಿ. ವಿ. ಸದಾನಂದಗೌಡ, ಲೋಕಾಯುಕ್ತ ಪೊಲೀಸರ ತನಿಖೆ ಮುಗಿಯುವವರೆಗೂ ಕಾಯುವುದಾಗಿ ಹೇಳಿದ್ದಾರೆ.
`ಮಾಜಿ ಮುಖ್ಯಮಂತ್ರಿ ಹಾಗೂ ಮಂತ್ರಿಗಳ ವಿರುದ್ಧ ಬಂದಿರುವ ಆರೋಪಗಳಿಂದ ಪಕ್ಷಕ್ಕೆ ಮುಜುಗರವಾಗಿದೆ. ಇದರಿಂದ ಸ್ವಲ್ಪ ಮಟ್ಟಿಗೆ ವರ್ಚಸ್ಸೂ ಕುಗ್ಗಿದೆ. ಆದರೆ, ಸರ್ಕಾರಕ್ಕೆ ಧಕ್ಕೆ ಆಗಿಲ್ಲ~ ಎಂದು ಸದಾನಂದಗೌಡ ಶನಿವಾರ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡುತ್ತಾ ಒಪ್ಪಿಕೊಂಡರು.
ಕೆಲವು ಕಿಡಿಗೇಡಿಗಳು `ನಿರ್ದಿಷ್ಟ ಕಾರ್ಯಸೂಚಿ~ ಇಟ್ಟುಕೊಂಡು ರಾಜ್ಯ ಸರ್ಕಾರದ ವಿರುದ್ಧ ನಿರಂತರ ದಾಳಿ ನಡೆಸಿದ್ದಾರೆ. ಇಂಥ ಆರೋಪಗಳಿಗೆ ಬೆಲೆ ಕೊಟ್ಟು ಪಕ್ಷದ ನಾಯಕರನ್ನು ಬಲಿ ಕೊಡುವುದು ಸರಿಯಾದ ಕ್ರಮ ಅಲ್ಲ ಎಂದರು.
ಗೃಹ ಸಚಿವರ ಮೇಲೆ ಮೊಕದ್ದಮೆ ಹೂಡಲು ಹಿಂದೆಯೂ ರಾಜ್ಯಪಾಲರ ಅನುಮತಿ ಕೇಳಲಾಗಿತ್ತು. ಈ ಮನವಿಯನ್ನು ಅವರು ತಿರಸ್ಕರಿಸಿದ್ದರು. ಹೈಕೋರ್ಟ್ ಕೂಡಾ ಅನುಮತಿ ಕೊಡಲಿಲ್ಲ. ಇಷ್ಟಾದ ಮೇಲೂ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗಿದೆ ಎಂದು ಸದಾನಂದಗೌಡ ಟೀಕಿಸಿದರು.
`ಲೋಕಾಯುಕ್ತ ಪೊಲೀಸರ ತನಿಖೆಯಲ್ಲಿ ಗೃಹ ಸಚಿವರು ಹಸ್ತಕ್ಷೇಪ ಮಾಡುವುದಿಲ್ಲ. ಆ ಬಗ್ಗೆ ಆತಂಕ ಬೇಡ. ಲೋಕಾಯುಕ್ತ ಪೊಲೀಸರು ಸರ್ಕಾರದ ಅಧೀನದಲ್ಲಿ ಇರುವುದಿಲ್ಲ. ಪೊಲೀಸರು ಒಮ್ಮೆ ಲೋಕಾಯುಕ್ತಕ್ಕೆ ವರ್ಗವಾದರೆ ಮುಗಿಯಿತು. ನಮ್ಮ ಪಾತ್ರ ಏನೂ ಇರುವುದಿಲ್ಲ~ ಎಂದರು.