ಬೆಂಗಳೂರು: `ಗುಜರಾತ್ನಲ್ಲಿ ಮತ್ತೆ ಅಧಿಕಾರ ಹಿಡಿದಿರುವುದು ಬಿಜೆಪಿಯ ಗೆಲುವು ಅಲ್ಲ. ಅದು ಮೋದಿ ಬ್ರಾಂಡ್ನ ಗೆಲುವು' ಎಂದು ಕೆಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಪ್ರತಿಕ್ರಿಯಿಸಿದರು.
ಚುನಾವಣಾ ಫಲಿತಾಂಶ ಪ್ರಕಟವಾದ ಬಳಿಕ ಪ್ರತಿಕ್ರಿಯೆ ನೀಡಿದ ಅವರು, `ಅದು ಬಿಜೆಪಿಯ ಗೆಲುವು ಆಗಿದ್ದರೆ ಹಿಮಾಚಲ ಪ್ರದೇಶದಲ್ಲೂ ಬಹುಮತ ಪಡೆಯಬೇಕಿತ್ತಲ್ಲವೇ' ಎಂದು ಪ್ರಶ್ನಿಸಿದರು.
ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರನ್ನೇ ಬಿಜೆಪಿಯ ಪ್ರಧಾನಿ ಅಭ್ಯರ್ಥಿಯನ್ನಾಗಿ ಘೋಷಿಸಬೇಕು ಎಂದು ಯಡಿಯೂರಪ್ಪ ಈ ವರ್ಷದ ಮೇ 24ರಂದು ಬಹಿರಂಗವಾಗಿ ಒತ್ತಾಯಿಸಿದ್ದರು. ಈ ಕುರಿತು ಗುರುವಾರ ಗಮನ ಸೆಳೆದಾಗ, `ಮೋದಿ ಪ್ರಧಾನಿ ಅಭ್ಯರ್ಥಿ ಆಗಬೇಕು ಎಂಬ ಹಿಂದಿನ ಹೇಳಿಕೆ ಕುರಿತು ಈಗ ಏನನ್ನೂ ಹೇಳುವುದಿಲ್ಲ. ಈಗ ನಾನು ಬಿಜೆಪಿಯಲ್ಲಿ ಇಲ್ಲ. ಆದ್ದರಿಂದ ಆ ಬಗ್ಗೆ ಏನನ್ನೂ ಹೇಳುವುದಿಲ್ಲ. ರಾಜಕೀಯಕ್ಕೂ ಗೆಳೆತನಕ್ಕೂ ವ್ಯತ್ಯಾಸವಿದೆ' ಎಂದರು.
ದಿಕ್ಸೂಚಿ: ಶೆಟ್ಟರ್
`ಗುಜರಾತ್ ಚುನಾವಣೆ ಫಲಿತಾಂಶವು ರಾಷ್ಟ್ರ ರಾಜಕಾರಣದ ದಿಕ್ಸೂಚಿಯಾಗಿದೆ' ಎಂದು ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಅಭಿಪ್ರಾಯಪಟ್ಟರು. ಓಕಳಿಪುರದಲ್ಲಿ ಸಿಗ್ನಲ್ರಹಿತ ಕಾರಿಡಾರ್ ನಿರ್ಮಾಣ ಯೋಜನೆಗೆ ಗುರುವಾರ ಚಾಲನೆ ನೀಡಿದ ಬಳಿಕ ಅವರು ವರದಿಗಾರರೊಂದಿಗೆ ಮಾತನಾಡಿದರು.
`ಗುಜರಾತ್ನಲ್ಲಿ ಬಿಜೆಪಿ ಜಯ ನಿರೀಕ್ಷಿತ. ಅಲ್ಲಿನ ಫಲಿತಾಂಶವು ರಾಜ್ಯದ ಮೇಲೂ ಪ್ರಭಾವ ಬೀರಲಿದೆ. ಕರ್ನಾಟಕದ ಹಳ್ಳಿ ಹಳ್ಳಿಗಳಲ್ಲೂ ಬಿಜೆಪಿ ಸಂಘಟನೆ ಬೇರು ಬಿಟ್ಟಿದೆ. ಮುಂದೆ ಬರುವ ಚುನಾವಣೆಗಳಲ್ಲಿ ರಾಜ್ಯ ಸೇರಿದಂತೆ ದೇಶದೆಲ್ಲೆಡೆ ಬಿಜೆಪಿ ಗೆಲುವು ಸಾಧಿಸಲಿದೆ' ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
`ನರೇಂದ್ರ ಮೋದಿ ಅವರು ದೇಶದ ಪ್ರಧಾನಿ ಆಗಬೇಕೆಂದು ಜನರು ಬಯಸುತ್ತಿದ್ದಾರೆ. ಮೋದಿ ಪ್ರಧಾನಿ ಆಗಲಿ. ಅವರನ್ನು ಸತತ ಮೂರನೇ ಬಾರಿಗೆ ಬೆಂಬಲಿಸಿದ ಗುಜರಾತ್ ಜನರನ್ನು ನಾನು ಅಭಿನಂದಿಸುತ್ತೇನೆ' ಎಂದು ಅವರು ನುಡಿದರು.
`ಗುಜರಾತ್ನಲ್ಲಿ ಮೂರು ಅವಧಿಗೆ ಒಬ್ಬರೇ ಮುಖ್ಯಮಂತ್ರಿ. ರಾಜ್ಯದಲ್ಲಿ ಒಂದೇ ಅವಧಿಗೆ ಮೂವರು ಮುಖ್ಯಮಂತ್ರಿಗಳಾಗಿರುವುದು ಪರಿಣಾಮ ಬೀರುವುದಿಲ್ಲವೇ?' ಎಂಬ ವರದಿಗಾರರ ಪ್ರಶ್ನೆಗೆ, `ಅದು ಕರ್ನಾಟಕದ ಬಿಜೆಪಿ ವೈಶಿಷ್ಟ್ಯ' ಎಂದು ನಕ್ಕರು.
`ಮೋದಿ ಅವರದ್ದು ಸೀಮಿತ ಪ್ರಭಾವ'
ಗುಜರಾತ್ನಲ್ಲಿ ಕಾಂಗ್ರೆಸ್ಗೆ ಹಿಂದಿಗಿಂತಲೂ ಹೆಚ್ಚಿನ ಸ್ಥಾನಗಳು ದೊರೆತಿವೆ. ನರೇಂದ್ರ ಮೋದಿ ಅವರದ್ದು ಗುಜರಾತ್ಗೆ ಸೀಮಿತವಾದ ಪ್ರಭಾವ. ಅವರು ಹಿಮಾಚಲ ಪ್ರದೇಶದಲ್ಲೂ ಪ್ರಚಾರ ನಡೆಸಿದ್ದರು. ಆದರೆ, ಅದರಿಂದ ಬಿಜೆಪಿಗೆ ಹಿನ್ನಡೆಯೇ ಆಗಿದೆ