ಶಿರಸಂಗಿ: `ಜೆಡಿಎಸ್ ಅನ್ನು ಗೆಲ್ಲಿಸಿದರೆ, ವಿಶ್ವಪ್ರಸಿದ್ದ ಏಳುಕೊಳ್ಳದ ಯಲ್ಲಮ್ಮ ದೇವಿಯ ಗುಡ್ಡದ ಸಂರಕ್ಷಿಸುವದರೊಂದಿಗೆ ಶ್ರೀ ಕ್ಷೇತ್ರವನ್ನು ತಿರುಪತಿ ಮಾದರಿಯಲ್ಲಿ ಅಭಿವೃದ್ಧಿ ಪಡಿಸಲಾಗುವುದು' ಎಂದು ಸವದತ್ತಿ ಯಲ್ಲಮ್ಮ ಮತಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಡಿ.ಬಿ,ನಾಯಕ ಆಶ್ವಾಸನೆ ನೀಡಿದರು.
`ತಾಲ್ಲೂಕಿನ ಎಲ್ಲ ಗ್ರಾಮಗಳಿಗೆ ನಿರಂತರ ಕುಡಿಯುವ ನೀರು ಪೂರೈಕೆ ಹಾಗೂ ಮಹಿಳೆಯರಿಗೆ ಪ್ರತ್ಯೇಕ ಸುಲಭ ಶೌಚಾಯ ನಿರ್ಮಿಸಲಾಗುವುದು' ಎಂದರು. ಶಿರಸಂಗಿ, ಕಲ್ಲಾಪುರ ಹಾಗೂ ಇನಾಂ ಗೋವನಕೊಪ್ಪ ಗ್ರಾಮಗಳಲ್ಲಿ ಮನೆ ಮನೆಗಳಿಗೆ ತೆರಳಿ ಬಿರುಸಿನ ಪ್ರಚಾರ ನಡೆಸಿದರು. ಗ್ರಾ.ಪಂ.ಮಾಜಿ ಅಧ್ಯಕ್ಷ ಮಾರುತಿ ಪೋತರಾಜ, ಈರಣ್ಣ ಪಟ್ಟಣಶೆಟ್ಟಿ, ಎಫ್ ಡಿ ಬಿಜಲೀಖಾನ್, ಎ ಆರ್ ನದಾಫ್, ಪಿ. ಎಸ್. ಮಾನಗಾಂವ, ಆರ್. ಎಮ್. ಬಿರಾದಾರಗೌಡರ, ಹೋರಕೇರಿ ಸೇರಿದಂತೆ ಹಲವಾರು ಕಾರ್ಯಕರ್ತರು ಪ್ರಚಾರದಲ್ಲಿ ಭಾಗವಹಿಸಿದ್ದರು.
ಕಾಂಗ್ರೆಸ್, ಬಿಜೆಪಿ ಕಾರ್ಯಕರ್ತರು ಜೆಡಿಎಸ್ ಸೇರ್ಪಡೆ
ರಾಮದುರ್ಗ: `ಕ್ಷೇತ್ರದಲ್ಲಿ ಜೆಡಿಎಸ್ಗೆ ಉತ್ತಮ ಬೆಂಬಲ ವ್ಯಕ್ತವಾಗುತ್ತಿದ್ದು, ಪಿ. ಎಫ್. ಪಾಟೀಲರ ಆಯ್ಕೆ ಖಚಿತ' ಎಂದು ತಾಲ್ಲೂಕು ಅಧ್ಯಕ್ಷ ಶಿವಪ್ಪ ಹಂಪಿಹೋಳಿ ಹೇಳಿದರು.
ವಿವಿಧ ಪಕ್ಷದ ಕಾರ್ಯಕರ್ತರನ್ನು ಪಕ್ಷಕ್ಕೆ ಸ್ವಾಗತಿಸಿ ಮಾತನಾಡಿದ ಅವರು, `ಕ್ಷೇತ್ರದ ಜನತೆ ಬದಲಾವಣೆ ಬಯಸಿದ್ದು ಜೆಡಿಎಸ್ ಅಭ್ಯರ್ಥಿ ಸುಲಭವಾಗಿ ಆಯ್ಕೆಯಾಗಲಿದ್ದಾರೆ' ಎಂದು ಹೇಳಿದರು. ಇದೇ ಸಂದರ್ಭದಲ್ಲಿ ಜಿ. ಪಂ. ಮಾಜಿ ಸದಸ್ಯ ಪಾಂಡಪ್ಪ ಲಮಾಣಿ, ವಿಠ್ಠಲ ಲಮಾಣಿ, ಸೋಮಪ್ಪ ಲಮಾಣಿ, ತುಕ್ಕಪ್ಪ ಲಮಾಣಿ, ಗುಲಾಬ್ ಸಿಂಗ್ ಕಿಲ್ಲೆದಾರ, ಯಲ್ಲಪ್ಪ ಜಾಲಿಕಟ್ಟಿ, ಬಿ. ಬಿ. ಗಾಣಿಗೇರ, ಜಿಲಾಣಿ ಮಹಾತ, ದಾದಾಪೀರ್ ಬೈರಕದಾರ ಸೇರಿದಂತೆ ಹಲವರು ಜೆಡಿಎಸ್ ಸೇರಿದರು.