ವಿಶಾಖಪಟ್ಟಣ (ಪಿಟಿಐ): ಪ್ರಮುಖ ಆಟಗಾರರನ್ನು ಒಳಗೊಂಡಿರುವ ದಕ್ಷಿಣ ವಲಯ ತಂಡ ಭಾನುವಾರ ಇಲ್ಲಿ ಆರಂಭವಾಗುವ ಪೂರ್ವ ವಲಯ ವಿರುದ್ಧದ ದುಲೀಪ್ ಟ್ರೋಫಿ ಕ್ರಿಕೆಟ್ ಟೂರ್ನಿಯ ಸೆಮಿಫೈನಲ್ ಪಂದ್ಯದಲ್ಲಿ ಗೆಲುವು ಪಡೆಯುವ ವಿಶ್ವಾಸದಲ್ಲಿದೆ.
ಕರ್ನಾಟಕದ ಆರ್. ವಿನಯ್ ಕುಮಾರ್ ದಕ್ಷಿಣ ವಲಯ ತಂಡವನ್ನು ಮುನ್ನಡೆಸುತ್ತಿದ್ದಾರೆ. ಇಲ್ಲಿನ ವಿಡಿಸಿಎ ಕ್ರೀಡಾಂಗಣದ ಪಿಚ್ ಬ್ಯಾಟ್ಸ್ಮನ್ಗಳಿಗೆ ನೆರವು ನೀಡುವ ಸಾಧ್ಯತೆಯಿದ್ದು, ರನ್ಗಳ ಮಳೆಯನ್ನೇ ನಿರೀಕ್ಷಿಸಲಾಗಿದೆ. ಅಭಿನವ್ ಮುಕುಂದ್, ರಾಬಿನ್ ಉತ್ತಪ್ಪ ಮತ್ತು ಮನೀಷ್ ಪಾಂಡೆ ಅವರನ್ನೊಳಗೊಂಡ ತಂಡ ಬ್ಯಾಟಿಂಗ್ನಲ್ಲಿ ಬಲಿಷ್ಠವಾಗಿದೆ.
ದಕ್ಷಿಣ ವಲಯ ತಂಡ ಸಮತೋಲನದಿಂದ ಕೂಡಿದೆ. ವಿನಯ್ ಕುಮಾರ್, ಅಭಿಮನ್ಯು ಮಿಥುನ್ ಮತ್ತು ಕೆ.ಪಿ. ಅಪ್ಪಣ್ಣ ಅವರು ಬೌಲಿಂಗ್ ವಿಭಾಗಕ್ಕೆ ಶಕ್ತಿ ತುಂಬಲಿದ್ದಾರೆ. ಪೂರ್ವ ವಲಯದ ಬೌಲಿಂಗ್ ದುರ್ಬಲವಾಗಿದೆ. ಈ ತಂಡ ಬೌಲಿಂಗ್ನಲ್ಲಿ ಅಶೋಕ್ ದಿಂಡಾ ಮೇಲೆ ಹೆಚ್ಚಿನ ಭರವಸೆಯಿಟ್ಟಿದೆ.
ದಕ್ಷಿಣ ಆಫ್ರಿಕಾದಲ್ಲಿ ಚಾಂಪಿಯನ್ಸ್ ಲೀಗ್ ಟ್ವೆಂಟಿ-20 ಟೂರ್ನಿ ನಡೆಯುತ್ತಿರುವ ಕಾರಣ ಎರಡೂ ತಂಡಗಳು ಕೆಲವು ಪ್ರಮುಖ ಆಟಗಾರರನ್ನು ಕಳೆದುಕೊಂಡಿದೆ. ಎಸ್. ಬದರೀನಾಥ್, ಮುರಳಿ ವಿಜಯ್, ಆರ್. ಅಶ್ವಿನ್, ದಿನೇಶ್ ಕಾರ್ತಿಕ್, ಮನೋಜ್ ತಿವಾರಿ ಮತ್ತು ವೃದ್ಧಿಮನ್ ಸಹಾ ಚಾಂಪಿಯನ್ಸ್ ಲೀಗ್ನಲ್ಲಿ ವಿವಿಧ ತಂಡಗಳನ್ನು ಪ್ರತಿನಿಧಿಸುತ್ತಿದ್ದಾರೆ. ಇವರ ಅನುಪಸ್ಥಿತಿ ಯುವ ಆಟಗಾರರಿಗೆ ಉತ್ತಮ ಅವಕಾಶ ಕಲ್ಪಿಸಿಕೊಟ್ಟಿದೆ.
ದಕ್ಷಿಣ ವಲಯ ತಂಡ: ಆರ್. ವಿನಯ್ ಕುಮಾರ್ (ನಾಯಕ), ಅಭಿನವ್ ಮುಕುಂದ್, ರಾಬಿನ್ ಉತ್ತಪ್ಪ, ಅಕ್ಷತ್ ರೆಡ್ಡಿ, ಮನೀಷ್ ಪಾಂಡೆ, ಆರ್. ಪ್ರಸನ್ನ, ಅಮಿತ್ ವರ್ಮಾ, ಸ್ಟುವರ್ಟ್ ಬಿನ್ನಿ, ಕೆ. ಶ್ರೀವಾಸುದೇವ ದಾಸ್, ಸಿ.ಎಂ. ಗೌತಮ್ (ವಿಕೆಟ್ಕೀಪರ್), ಎ. ಮಿಥುನ್, ಕೆ.ಪಿ. ಅಪ್ಪಣ್ಣ, ಆರ್. ಔಶಿಕ್ ಶ್ರೀನಿವಾಸ್, ಜೆ. ಕೌಶಿಕ್, ಸೋನಿ ಚೆರುವತ್ತೂರ್, ಎ.ಜಿ. ಪ್ರದೀಪ್; ಕೋಚ್: ಆರ್. ಮಾಧವನ್, ಮ್ಯಾನೇಜರ್: ವಿ.ವಿ. ಸಂಕಪಾಣಿ