ಹುಬ್ಬಳ್ಳಿ: ಬೆಂಗಳೂರಿನಿಂದ ಹೊರಗೆ ರಣಜಿ ಪಂದ್ಯಗಳನ್ನು ನಡೆಸುತ್ತಿರುವುದು ಉತ್ತಮ ಬೆಳವಣಿಗೆ. ಮೈಸೂರಿನಲ್ಲಿ ಮತ್ತು ಹುಬ್ಬಳ್ಳಿಯಲ್ಲಿ ಒಂದೇ ತರಹದ ಪೆವಿಲಿಯನ್ ಇದೆ. ಉತ್ತಮ ಕ್ರೀಡಾಂಗಣವೂ ಇದೆ. ಪಿಚ್ ಬಗ್ಗೆ ಈಗಲೇ ಏನೂ ಹೇಳಲು ಸಾಧ್ಯವಿಲ್ಲ. ಆದರೆ ಮೈದಾನ ಮಾತ್ರ ಸುಂದರವಾಗಿದೆ ಎಂದು ಕರ್ನಾಟಕ ತಂಡದ ನಾಯಕ ಸ್ಟುವರ್ಟ್ ಬಿನ್ನಿ ಶ್ಲಾಘಿಸಿದರು.
ಅಭ್ಯಾಸದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, `ಈ ಪಂದ್ಯದ ಗೆಲುವು ನಮಗೆ ಅತಿ ಅವಶ್ಯಕ. ಪುಣೆಯಲ್ಲಿ ಪರಿಸ್ಥಿತಿ ಹೇಗಿರುತ್ತದೆ ಗೊತ್ತಿಲ್ಲ. ಪಿಚ್ ಬಗ್ಗೆ ಹೆಚ್ಚು ಹೇಳುವದೇನು ಇಲ್ಲ. ಮೈಸೂರಿನಲ್ಲಿ ಬೌಲಿಂಗ್ ಪಿಚ್ ಎಂದುಕೊಂಡಿದ್ದು, ರನ್ನುಗಳ ಹೊಳೆಯೇ ಹರಿಯಿತು. ಒಂದು ಸಾವಿರಕ್ಕೂ ಹೆಚ್ಚು ರನ್ಗಳು ದಾಖಲಾದವು. ಹುಬ್ಬಳ್ಳಿಯದ್ದು ಹೊಸ ಪಿಚ್. ಹೇಗೆ ವರ್ತಿಸುತ್ತದೆ ಎಂದು ನೋಡಬೇಕು. ಇಬ್ಬರು ಪ್ರಮುಖ ಬೌಲರ್ಗಳು ಇಲ್ಲ. ಆದರೆ ಶರತ್, ಅಕ್ಷಯ್ ಉತ್ತಮ ಫಾರ್ಮ್ನಲ್ಲಿದ್ದಾರೆ. ಏನೇ ಆದರೂ ಈ ಪಂದ್ಯದಲ್ಲಿ ಗೆಲ್ಲುವುದೇ ನಮ್ಮ ಗುರಿ' ಎಂದು ಸ್ಪಷ್ಟಪಡಿಸಿದರು.
ಇನಿಂಗ್ಸ್ ಮುನ್ನಡೆ ಗುರಿ: ನಮ್ಮ ತಂಡದ ಆತ್ಮವಿಶ್ವಾಸ ಮತ್ತು ಪಾಯಿಂಟ್ ಪಟ್ಟಿಯಲ್ಲಿ ನಮ್ಮ ಸ್ಥಾನ ಕಾಯ್ದುಕೊಳ್ಳಲು ಈ ಪಂದ್ಯದಲ್ಲಿ ಕನಿಷ್ಟ ಪಕ್ಷ ಇನಿಂಗ್ಸ್ ಮುನ್ನಡೆಗೆ ನಾವು ಹೋರಾಡುತ್ತೇವೆ ಎಂದು ಹರಿಯಾಣ ತಂಡದ ನಾಯಕ ಅಮಿತ್ ಮಿಶ್ರಾ ಹೇಳಿದರು.