ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೊಂದಲದ ನಡುವೆ ಪ್ರೊ ಫೆಸರ್ ಅಂತ್ಯಕ್ರಿಯೆ

Last Updated 21 ಡಿಸೆಂಬರ್ 2012, 19:34 IST
ಅಕ್ಷರ ಗಾತ್ರ

ಮೈಸೂರು: ನೇಣು ಹಾಕಿಕೊಂಡು ಗುರುವಾರ ಆತ್ಮಹತ್ಯೆಗೆ ಶರಣಾದ ಮೈಸೂರು ವಿಶ್ವವಿದ್ಯಾನಿಲಯದ ಸಂಜೆ ಕಾಲೇಜಿನ ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ. ಯು.ಬಿ.ಅಶೋಕ್ ಕುಮಾರ್ (56) ಅವರ ಅಂತ್ಯಕ್ರಿಯೆ ಜಯನಗರದ ರುದ್ರಭೂಮಿಯಲ್ಲಿ ಶುಕ್ರವಾರ ಗೊಂದಲದ ನಡುವೆ ನೆರವೇರಿತು.

ಮೂಲತಃ ದಾವಣಗೆರೆ ಜಿಲ್ಲೆ ಚನ್ನಗಿರಿಯವರಾದ ಅಶೋಕ್ ಕುಮಾರ್ ಅವರ ಅಂತ್ಯಕ್ರಿಯೆ ತವರಿನಲ್ಲೇ ನಡೆಯಬೇಕು ಎಂದು ಅಶೋಕ್ ಕುಮಾರ್ ತಾಯಿ ಮತ್ತು ಸಹೋದರರು ಪಟ್ಟು ಹಿಡಿದರು. ಇದಕ್ಕೆ ಅಶೋಕ್ ಕುಮಾರ್ ಪತ್ನಿ ಚಲುವಾಂಬಿಕ ಮತ್ತು ಸಂಬಂಧಿಕರು ಆಕ್ಷೇಪ ವ್ಯಕ್ತಪಡಿಸಿ, ಶವವನ್ನು ಚನ್ನಗಿರಿಗೆ ತೆಗೆದುಕೊಂಡು ಹೋಗಲು ಸುತಾರಾಂ ಒಪ್ಪಲಿಲ್ಲ. ಇದರಿಂದ ಸರಸ್ವತಿಪುರಂನಲ್ಲಿರುವ ಅಶೋಕ್ ಕುಮಾರ್ ಅವರ ಮನೆಯ ಮುಂದೆ ಗೊಂದಲದ ವಾತಾವರಣ ನಿರ್ಮಾಣವಾಯಿತು.

ಕೊನೆಗೆ ನಗರದಲ್ಲೇ ಅಂತ್ಯಸಂಸ್ಕಾರ ನಡೆಸಲು ಅಶೋಕ್ ಕುಮಾರ್ ತಾಯಿ ಒಪ್ಪಿದರು. ಶವವನ್ನು ಜಯನಗರದ ರುದ್ರಭೂಮಿಗೆ ತೆಗೆದುಕೊಂಡು ಹೋದ ನಂತರ ಅಂತ್ಯಕ್ರಿಯೆ ವಿಧಾನ ಬಗ್ಗೆ ವಿವಾದ ಶುರುವಾಯಿತು. ಶವವನ್ನು ಹೂಳಬೇಕೆಂದು ಅಶೋಕ್ ಕುಮಾರ್ ತಾಯಿ ,  ಅಲ್ಲ ಸುಡಬೇಕು ಪತ್ನಿ ಕಡೆಯವರು ಒತ್ತಾಯಿಸಿದ್ದರಿಂದ ಎರಡೂ ಕುಟುಂಬದವರ ನಡುವೆ ಮತ್ತೆ ಕಲಹ ಏರ್ಪಟ್ಟಿತು. ಕೊನೆಗೆ ಶವವನ್ನು ಚಿತಾಗಾರದಲ್ಲಿ ಸುಡಲಾಯಿತು.

ಸಾಂತ್ವನ: ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎ. ರಾಮದಾಸ್ ಅಶೋಕ್ ಕುಮಾರ್ ಕುಟುಂಬದವರನ್ನು ಭೇಟಿಯಾಗಿ ಸಾಂತ್ವನ ಹೇಳಿದರು.

ಸಂಬಂಧಿಕರ ವಿವಾಹ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಕುಟುಂಬ ಸಮೇತರಾಗಿ ಹಾಸನಕ್ಕೆ ಬುಧವಾರ ತೆರಳಿದ್ದ ಅಶೋಕ್ ಕುಮಾರ್ ಅವರು ರಾತ್ರಿ ಒಬ್ಬರೇ ಮೈಸೂರಿಗೆ ವಾಪಸ್ಸಾಗಿದ್ದರು. ಪತ್ನಿ ಚಲುವಾಂಬಿಕ, ಇಬ್ಬರು ಪುತ್ರಿಯರು ಗುರುವಾರ ಬೆಳಿಗ್ಗೆ 8.30 ರ ಸುಮಾರಿಗೆ ಮನೆಗೆ ಬಂದು ನೋಡಿದಾಗ ಅಶೋಕ್ ಕುಮಾರ್ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂತು.

ಅಶೋಕ್ ಕುಮಾರ್ ಆತ್ಮಹತ್ಯೆಗೂ ಮುನ್ನ ಎರಡು ಪತ್ರಗಳನ್ನು ಬರೆದಿಟ್ಟ್ದ್ದಿದರು. ಎರಡೂ ಪತ್ರಗಳು ಪೊಲೀಸರ ಕೈ ಸೇರಿವೆ. ಒಂದು ಪತ್ರದಲ್ಲಿ `ಗುರುಗಳಾದ ಪಾರ್ವತಮ್ಮ ಅವರ ಧ್ಯೇಯೋದ್ದೇಶಗಳಿಗೆ ಅನುಗುಣವಾಗಿ ಪಾರ್ವತಮ್ಮ ಟ್ರಸ್ಟ್ ನಡೆಯುತ್ತಿಲ್ಲ. ಇದರಿಂದ ಅಸಮಾಧಾನವಾಗಿದೆ. ಸರಿಪಡಿಸಬೇಕು' ಎಂಬ ಒಕ್ಕಣೆ ಇತ್ತು.

ರಾಷ್ಟ್ರಪತಿಗೆ ಬರೆದ ಪತ್ರದ ಸಾರಾಂಶ...
ಗೌರವಾನ್ವಿತ ರಾಷ್ಟ್ರಪತಿಗಳಿಗೆ ಸವಿನಯ ವಂದನೆಗಳು,

ಸನ್ಮಾನ್ಯರೆ,
ದೇಶದಲ್ಲಿ ವ್ಯಾಪಾಕವಾಗಿ ಹಬ್ಬುತ್ತಿರುವ ಭ್ರಷ್ಟಾಚಾರ, ಜಾತೀಯತೆ, ಅತ್ಯಾಚಾರ, ನೀತಿಹೀನ ರಾಜಕೀಯ ವ್ಯವಸ್ಥೆಗಳು ಭರವಸೆಯನ್ನು ನುಂಗಿ ನೀರು ಕುಡಿದಿವೆ. ಬದುಕನ್ನು ಅಸಹನೀಯಗೊಳಿಸಿವೆ.

ಮುಂದಿನ ಜನಾಂಗವನ್ನು ರೂಪಿಸಬೇಕಾದ ವಿಶ್ವವಿದ್ಯಾನಿಲಯಗಳಲ್ಲೇ ಕುಲಪತಿ ಮೊದಲಾದ ಹುದ್ದೆಗಳಿಗೆ ಕೋಟ್ಯಂತರ ರೂಪಾಯಿಗಳ ವಹಿವಾಟು ನಡೆದಿವೆ, ನಡೆಯುತ್ತಿವೆ ಎಂಬ ವಿಚಾರಗಳು ಸಜ್ಜನರಲ್ಲಿ ತಲ್ಲಣ ತಂದಿವೆ. ಇಂತಹ ವ್ಯವಸ್ಥೆಗಳ ನಡುವೆ ವಿದ್ಯಾರ್ಥಿಗಳಿಗೆ ಯಾವ ಸಮಾಜಶಾಸ್ತ್ರ ಬೋಧಿಸಲಿ? ಎಂತಹ ಸಮಾಜ ರೂಪಿಸೋಣ ಎಂಬ ಸಂಗತಿಗಳಿಗೆ ಪರಿಹಾರ ತೋರುವಿರಾ?
-ವಂದನೆಗಳೊಂದಿಗೆ
ಪ್ರೊ.ಯು.ಬಿ.ಅಶೋಕ್‌ಕುಮಾರ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT