ಯಳಂದೂರು: ಮಂಗಳವಾರದಿಂದ ನವರಾತ್ರಿ ಆರಂಭಗೊಂಡ ಹಿನ್ನೆಲೆಯಲ್ಲಿ ಪಟ್ಟಣದ ಬಹುತೇಕ ಬೀದಿ, ಸಾರ್ವಜನಿಕರು ತಮ್ಮ ಮನೆಗಳಲ್ಲಿ ಗೊಂಬೆ ಕೂರಿಸಿ ವಿಶೇಷ ಪೂಜೆ ಮಾಡಿ ಸಂಭ್ರಮಿಸಿದರು.
ಪ್ರಮುಖ ಬೀದಿಗಳ ಬಹುತೇಕ ಮನೆಗಳಲ್ಲಿ ಗೊಂಬೆ ಕೂರಿಸಿ ಹೆಂಗಸರು ಹಾಗೂ ಚಿಣ್ಣರು ಪೂಜೆ ಮಾಡಿ, ದೇವನಾಮ ಹಾಡಿ ಸಂಭ್ರಮಿಸಿದರು.
`ನಾಡ ಹಬ್ಬ ದಸರಾ ಹಿನ್ನೆಲೆಯಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಗೊಂಬೆಯನ್ನು ಕೂರಿಸಿದ್ದೇವೆ ಈ ಸಂಪ್ರದಾಯ ಅನಾದಿ ಕಾಲದಿಂದಲೂ ಇದೆ. ಆದರೆ, ಈಚೆಗೆ ಮರ ಹಾಗೂ ಮಣ್ಣಿನ ಗೊಂಬೆಗಳ ಸ್ಥಾನವನ್ನು ಪ್ಲಾಸ್ಟಿಕ್ ಹಾಗೂ ಪ್ಲಾಸ್ಟರ್ ಆಫ್ ಪ್ಯಾರಿಸ್ ಆವರಿಸಿಕೊಂಡಿದೆ. ಆದರೂ ರಾಜ, ರಾಣಿ ಸೇರಿಂದಂತೆ ಹಲವು ಪ್ರಮುಖ ಬೊಂಬೆಗಳು ಮರದ್ದೇ ಆಗಿರುತ್ತವೆ.
ಇದರ ಜೊತೆಗೆ ಕಳಶವನ್ನಿಟ್ಟು ಹೂವು, ದೀಪಗಳಿಂದ ಅಲಂಕರಿಸಿ ಪೂಜೆ ಮಾಡುವ ವಾಡಿಕೆಯನ್ನು ಮುಂದು ವರೆಸಿಕೊಂಡು ಬಂದಿದ್ದೇವೆ~ ಎಂದು ದೇವಾಂಗ ಬೀದಿಯ ರಾಧಾಗೋಪಾಲಕೃಷ್ಣ `ಪ್ರಜಾವಾಣಿ~ಗೆ ತಿಳಿಸಿದರು.