ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೋಕುಲ್ ಎತ್ತಂಗಡಿಗೆ ಕಲ್ಲುಗಣಿ ಲಾಬಿ

Last Updated 20 ಜನವರಿ 2011, 20:05 IST
ಅಕ್ಷರ ಗಾತ್ರ

ಬೆಂಗಳೂರು: ಅಕ್ರಮ ಅದಿರು ರಫ್ತು ಹಗರಣದ ತನಿಖಾ ತಂಡದಲ್ಲಿರುವ ಕಾರವಾರದ ಉಪ ಅರಣ್ಯ ಸಂರಕ್ಷಣಾಧಿಕಾರಿ (ಡಿಸಿಎಫ್) ಆರ್.ಗೋಕುಲ್ ಅವರ ವರ್ಗಾವಣೆಗೆ ಮತ್ತೊಮ್ಮೆ ಪ್ರಯತ್ನ ಆರಂಭವಾಗಿದೆ. ಸೀಬರ್ಡ್ ನೌಕಾ ನೆಲೆಯ ಅಸ್ತಿತ್ವಕ್ಕೆ ಸವಾಲಾಗಿದ್ದ ಕಲ್ಲು ಗಣಿಗಳ ವಿರುದ್ಧ ಸಮರ ಸಾರಿರುವ ಕಾರಣಕ್ಕಾಗಿ ಈಗ ‘ಕಲ್ಲು ಗಣಿ ಲಾಬಿ’ ಅವರನ್ನು ಎತ್ತಂಗಡಿ ಮಾಡಿಸುವ ಪ್ರಯತ್ನಕ್ಕೆ ಕೈಹಾಕಿದೆ.

ಪ್ರಭಾವಿ ಕಲ್ಲು ಗಣಿ ಮಾಲೀಕರು ಮತ್ತು ಸಚಿವರೊಬ್ಬರು ಈಗ ಗೋಕುಲ್ ಅವರನ್ನು ಕಾರವಾರದಿಂದ ವರ್ಗಾವಣೆ ಮಾಡುವಂತೆ ಸರ್ಕಾರದ ಮೇಲೆ ಒತ್ತಡ ಹಾಕುತ್ತಿದ್ದಾರೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಅರಣ್ಯ ಸಚಿವ ಸಿ.ಎಚ್.ವಿಜಯಶಂಕರ್ ಮತ್ತು ಮುಖ್ಯ ಕಾರ್ಯದರ್ಶಿ ಎಸ್.ವಿ.ರಂಗನಾಥ್ ಅವರು ಒಮ್ಮೆ ಈ ಅಧಿಕಾರಿಯ ವರ್ಗಾವಣೆ ಪ್ರಸ್ತಾವವನ್ನು ನೇರವಾಗಿ ತಿರಸ್ಕರಿಸಿದ್ದಾರೆ.

ನೌಕಾಪಡೆ ಆತಂಕ: ‘ಕಾರವಾರದ ದಕ್ಷಿಣ ಭಾಗದಿಂದ ಅಂಕೋಲಾವರೆಗೆ ನಡೆಯುತ್ತಿರುವ ಕಲ್ಲು ಗಣಿಗಾರಿಕೆಯಿಂದ ನೌಕಾನೆಲೆ ಅಪಾಯದಲ್ಲಿದೆ. ಇಲ್ಲಿ ದೊಡ್ಡ ಸಂಖ್ಯೆಯಲ್ಲಿ ಸೂಕ್ಷ್ಮ ಮತ್ತು ಅತಿಸೂಕ್ಷ್ಮ ಸೇನಾ ಯಂತ್ರೋಪಕರಣಗಳನ್ನು ಅಳವಡಿಸಲಾಗಿದೆ. ಬೃಹತ್ ಪ್ರಮಾಣದಲ್ಲಿ ಸ್ಫೋಟಕಗಳನ್ನು ಸಿಡಿಸುತ್ತಿರುವುದರಿಂದ ಕಂಪನದ ಪ್ರಮಾಣ ಹೆಚ್ಚಿದೆ. ಇದರಿಂದ ನೌಕಾ ನೆಲೆ ಮತ್ತು ಅಲ್ಲಿನ ಯಂತ್ರೋಪಕರಣಗಳಿಗೆ ಹಾನಿಯಾಗುವ ಸಂಭವವಿದೆ’ ಎಂದು 2010ರ ನವೆಂಬರ್ 26ರಂದು ಕಾರವಾರ ಜಿಲ್ಲಾಧಿಕಾರಿಗೆ ಪತ್ರ ಬರೆದಿದ್ದ ಸೀಬರ್ಡ್ ನೌಕಾನೆಲೆಯ ಮುಖ್ಯಸ್ಥ ಕ್ಯಾಪ್ಟನ್ ಎಸ್.ಕೆ.ಗುಡಿ ಆತಂಕ ವ್ಯಕ್ತಪಡಿಸಿದ್ದರು.

‘ಸ್ಫೋಟಕಗಳ ಅತಿಯಾದ ಬಳಕೆಯಿಂದ ನೌಕಾನೆಲೆಯ ಪರಿಸರವೂ ಕೆಟ್ಟು ಹೋಗುತ್ತಿದೆ. ಮಳೆಗಾಲದಲ್ಲಿ ಭಾರಿ ಭೂ ಕುಸಿತಕ್ಕೂ ಕಾರಣವಾಗುತ್ತಿದೆ. ನೌಕಾಪಡೆ ಸಿಬ್ಬಂದಿಯ ವಸತಿ ಪ್ರದೇಶದ ಸಮೀಪದಲ್ಲೇ ನಿರಂತರ ಸ್ಫೋಟ ನಡೆಸಲಾಗುತ್ತಿದೆ. ಇದರಿಂದ ಅಲ್ಲಿ ವಾಸಿಸುವ ಕುಟುಂಬಗಳು ಮತ್ತು ಮಕ್ಕಳಿಗೆ ತೊಂದರೆ ಆಗುತ್ತಿದೆ. ತಕ್ಷಣವೇ ನೌಕಾನೆಲೆಯ ಸಮೀಪದಲ್ಲಿ ಕಲ್ಲು ಗಣಿಗಾರಿಕೆಯನ್ನು ನಿಷೇಧಿಸಬೇಕು’ ಎಂದು ಪತ್ರದಲ್ಲಿ ಕೋರಿದ್ದರು.

ಕಾರ್ಯಾಚರಣೆ ಆರಂಭ: ನೌಕಾ ನೆಲೆಯ ಮುಖ್ಯಸ್ಥರ ಪತ್ರದ ಹಿನ್ನೆಲೆಯಲ್ಲಿ ಕಾರವಾರದ ಜಿಲ್ಲಾಧಿಕಾರಿ ಡಿಸೆಂಬರ್ 20ರಂದು ಎಸ್‌ಪಿ, ಡಿಸಿಎಫ್, ಅರಣ್ಯ ಇಲಾಖೆಯ ವಿಶೇಷ ಅಧಿಕಾರಿ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ (ಎಸಿಎಫ್), ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಉಪನಿರ್ದೇಶಕರ ಸಭೆ ನಡೆಸಿದ್ದರು. ನೌಕಾನೆಲೆಯ ಸಮೀಪ ನಡೆಯುತ್ತಿರುವ ಕಲ್ಲು ಗಣಿಗಾರಿಕೆ ಕುರಿತು ಡಿ. 21ರಂದು ಜಂಟಿ ಪರಿಶೀಲನೆ ನಡೆಸಲು ನಿರ್ಧರಿಸಿ ಈ ಸಂಬಂಧ ಕಾರ್ಯಪಡೆ   ಯೊಂದನ್ನು ನೇಮಿಸಲಾಗಿತ್ತು.

ವಿವಿಧ ಇಲಾಖೆಗಳ ಅಧಿಕಾರಿಗಳನ್ನು ಒಳಗೊಂಡ ಕಾರ್ಯಪಡೆ ಜಂಟಿ ತಪಾಸಣೆ ನಡೆಸಿದ ಬಳಿಕ, ಅರಣ್ಯ ಇಲಾಖೆಯು ಅಕ್ರಮ ಕಲ್ಲು ಗಣಿಗಳನ್ನು ಸ್ಥಗಿತಗೊಳಿಸಿತ್ತು. ಅಕ್ರಮ ಗಣಿಗಾರಿಕೆ ನಡೆಸುತ್ತಿರುವವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗಿತ್ತು.

ಅರಣ್ಯ ಇಲಾಖೆಯ ಬಿಗಿ ಕ್ರಮದಿಂದ ವಿಚಲಿತರಾದ ಗಣಿ ಉದ್ಯಮಿಗಳು ಇಲಾಖೆಯ ಕೆಳ ಹಂತದ ಅಧಿಕಾರಿಗಳು ಮತ್ತು ನೌಕರರ ಮೇಲೆ ಒತ್ತಡ ಹೇರುವ ಪ್ರಯತ್ನವನ್ನೂ ನಡೆಸಿದ್ದರು. ಅರಣ್ಯ ಇಲಾಖೆಯ ಕೆಲ ನೌಕರರ ಮೇಲೆ ದೈಹಿಕ ಹಲ್ಲೆಯ ಪ್ರಯತ್ನವೂ ನಡೆದಿತ್ತು. ಈ ಬಗ್ಗೆಯೂ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗಿದೆ.

ಕೋಲಾಹಲಕ್ಕೆ ಕಾರಣ
ಅಕ್ರಮ ಅದಿರು ರಫ್ತು ಹಗರಣದ ತನಿಖೆಯಲ್ಲಿ ಗೋಕುಲ್ ಲೋಕಾಯುಕ್ತ ತನಿಖಾ ತಂಡಕ್ಕೆ ನೆರವು ನೀಡುತ್ತಿದ್ದರು. ಇದು ಗಣಿ ಉದ್ಯಮಿಗಳ ಕೆಂಗಣ್ಣಿಗೆ ಕಾರಣವಾಯಿತು. ಸಚಿವರೊಬ್ಬರ ಮೂಲಕ ಅವರನ್ನು ಸೇವೆಯಿಂದ ಅಮಾನತು ಮಾಡುವ ಪ್ರಯತ್ನ 2010ರ ಜೂನ್‌ನಲ್ಲಿ ನಡೆದಿತ್ತು. ಗೋಕುಲ್ ಅವರ ಅಮಾನತು ಪ್ರಯತ್ನ ನಡೆಯುತ್ತಿರುವುದು ತಿಳಿದ ಲೋಕಾಯುಕ್ತ ನ್ಯಾಯಮೂರ್ತಿ ಎನ್.ಸಂತೋಷ್ ಹೆಗ್ಡೆ ಅವರು ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದರು. ಇದು ರಾಜ್ಯ ರಾಜಕಾರಣದಲ್ಲಿ ಭಾರಿ ಕೋಲಾಹಲವನ್ನೇ ಎಬ್ಬಿಸಿತ್ತು.

ವರ್ಗಾವಣೆಗೆ ಸಂಚು: ಕಾರವಾರ ಮತ್ತು ಕಲ್ಲುಗಣಿಬಂದರಿನಲ್ಲಿ ಅದಿರು ರಫ್ತು ನಿಷೇಧ ಹೇರಿದ ಬಳಿಕ ಅಲ್ಲಿನ ಪ್ರಭಾವಿ ಗಣಿ ಉದ್ಯಮಿಗಳು ಕಲ್ಲು ಗಣಿಗಾರಿಕೆಯತ್ತ ವಾಲಿದ್ದರು. ಅಕ್ರಮ ಕಲ್ಲು ಗಣಿಗಳ ಮೇಲೆ ಅರಣ್ಯ ಇಲಾಖೆ ಪ್ರಹಾರ ನಡೆಸುತ್ತಿರುವುದು ಅವರಿಗೆ ನುಂಗಲಾರದ ತುಪ್ಪವಾಯಿತು. ಇಡೀ ಕಾರ್ಯಾಚರಣೆಯ ನೇತೃತ್ವ ವಹಿಸಿರುವ ಉಪ ಅರಣ್ಯ ಸಂರಕ್ಷಣಾಧಿಕಾರಿ ಆರ್.ಗೋಕುಲ್ ಅವರನ್ನೇ ಎತ್ತಂಗಡಿ ಮಾಡಿಸುವ ಮೂಲಕ ಸೇಡು ತೀರಿಕೊಳ್ಳಲು   ಮುಂದಾಗಿದ್ದರು.

‘ಆ ಭಾಗದ ಪ್ರಭಾವಿ ಸಚಿವರೊಬ್ಬರ ಮೂಲಕ ಮುಖ್ಯಮಂತ್ರಿಯವರ ಮೇಲೆ ಒತ್ತಡ ಹೇರಿ ಗೋಕುಲ್ ಅವರನ್ನು ವರ್ಗಾವಣೆ ಮಾಡಿಸಲು ಪ್ರಯತ್ನಿಸಿದ್ದರು. ಆದರೆ ಪ್ರಕರಣದ ಪೂರ್ಣ ಮಾಹಿತಿ ಪಡೆದ ಮುಖ್ಯಮಂತ್ರಿ, ಅರಣ್ಯ ಸಚಿವ ಮತ್ತು ಮುಖ್ಯ ಕಾರ್ಯದರ್ಶಿ ವರ್ಗಾವಣೆಯ ಪ್ರಸ್ತಾವವನ್ನು ನೇರವಾಗಿ ತಿರಸ್ಕರಿಸಿದ್ದಾರೆ’ ಎಂದು ಮೂಲಗಳು ತಿಳಿಸಿವೆ.

ಈ ಮಧ್ಯೆ ಮುಖ್ಯ ಕಾರ್ಯದರ್ಶಿಯವರನ್ನು ಭೇಟಿ ಮಾಡಿರುವ ಗೋಕುಲ್, ಪ್ರಕರಣದ ಸಂಪೂರ್ಣ ವಿವರವನ್ನು ನೀಡಿದ್ದಾರೆ. ಕಲ್ಲು ಗಣಿಗಾರಿಕೆ ನಿಷೇಧಿಸುವಂತೆ ಕೋರಿ ನೌಕಾನೆಲೆಯ ಮುಖ್ಯಸ್ಥರು ಬರೆದ ಪತ್ರ ಸೇರಿದಂತೆ ಹಲವು ದಾಖಲೆಗಳನ್ನೂ ನೀಡಿದ್ದಾರೆ. ಆದರೆ ಪಟ್ಟು ಬದಲಿಸದ ‘ಕಲ್ಲು ಗಣಿ ಲಾಬಿ’ ಡಿಸಿಎಫ್ ವರ್ಗಾವಣೆಗೆ ಪ್ರಯತ್ನಿಸುತ್ತಲೇ ಇದೆ ಎಂದು ತಿಳಿದುಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT