ಹುಬ್ಬಳ್ಳಿ: ತಾರಿಹಾಳಕ್ಕೆ ಸಂಪರ್ಕ ಕಲ್ಪಿಸುವ ಹಳೆಯ ರಸ್ತೆಯನ್ನು ವಿಮಾನ ನಿಲ್ದಾಣದ ರನ್ವೇ ವಿಸ್ತರಣೆಗಾಗಿ ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರವು ವಶಪಡಿಸಿಕೊಂಡಿರುವ ಕಾರಣ ಪರ್ಯಾಯ ರಸ್ತೆ ನಿರ್ಮಾಣ ಕಾಮಗಾರಿಯು ಭರದಿಂದ ಸಾಗಿದೆ.
ಗೋಕುಲ ಗ್ರಾಮದಿಂದ ತಾರಿಹಾಳ ಬೈಪಾಸ್ವರೆಗೆ ಹೊಸದಾಗಿ ಜೋಡಿ ರಸ್ತೆ ನಿರ್ಮಿಸಲಾಗುತ್ತಿದೆ. ಜನವರಿ ಅಂತ್ಯಕ್ಕೆ ಕಾಮಗಾರಿ ಮುಕ್ತಾಯಗೊಳ್ಳುವ ನಿರೀಕ್ಷೆ ಇದೆ. ಒಟ್ಟು 4.2 ಕಿ.ಮೀ. ಉದ್ದದ ಈ ರಸ್ತೆ ಕಾಮಗಾರಿಯನ್ನು ಕಳೆದ ಎರಡು ವರ್ಷಗಳ ಹಿಂದೆ ಕೈಗೆತ್ತಿಕೊಳ್ಳಲಾಗಿದ್ದು, ಇದಕ್ಕಾಗಿ ₨27.95 ಕೋಟಿ ವ್ಯಯಿಸಲಾಗಿದೆ. ಚತುಷ್ಪಥ ಹಾಗೂ ಷಟ್ಪಥದ ಮಿಶ್ರಣವಾಗಿರುವ ಈ ರಸ್ತೆ ಈಗಿನ ಗೋಕುಲ ರಸ್ತೆಯ ಮುಂದುವರಿದ ಭಾಗವಾಗಿ ಮಾರ್ಪಾಡುಗೊಂಡು ತಾರಿಹಾಳ ಬೈಪಾಸ್ಗೆ ಸಂಪರ್ಕ ಕಲ್ಪಿಸಲಿದೆ.
ಒಟ್ಟು 2.7 ಕಿ.ಮೀ. ಉದ್ದದಲ್ಲಿ 21 ಮೀಟರ್ ಅಗಲದ ಷಟ್ಪಥ ಹಾಗೂ ಉಳಿದ 1.5 ಕಿ.ಮೀ ನಲ್ಲಿ 15 ಮೀಟರ್ ಅಗಲದ ಚತುಷ್ಪಥ ರಸ್ತೆ ನಿರ್ಮಾಣವಾಗಲಿದೆ. ‘ವಿಮಾನನಿಲ್ದಾಣಕ್ಕಾಗಿ ಭೂಸ್ವಾಧಿೀನ ಮಾಡಿಕೊಂಡ ನಂತರ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ನಿಗಮವು ಒಟ್ಟು 29 ಎಕರೆ ಭೂಮಿಯನ್ನು ಈ ರಸ್ತೆ ನಿರ್ಮಾಣಕ್ಕಾಗಿ ಬಿಟ್ಟುಕೊಟ್ಟಿದೆ. ಕಾಮಗಾರಿಯು ಅಂತಿಮ ಹಂತ ತಲುಪಿದ್ದು, ಗೋಕುಲ ಗ್ರಾಮದ ರಸ್ತೆಗೆ ಸಂಪರ್ಕ ಕಲ್ಪಿಸುವ ವಿದ್ಯುತ್ ಕಂಬಗಳ ಸ್ಥಳಾಂತರ ಕಾಮಗಾರಿ ಬಾಕಿ ಉಳಿದಿದೆ. ಅದು ಶೀಘ್ರದಲ್ಲಿಯೇ ಮುಕ್ತಾಯಗೊಳ್ಳಲಿದೆ. ಜನವರಿ ಅಂತ್ಯಕ್ಕೆ ರಸ್ತೆಯು ಸಂಚಾರಕ್ಕೆ ಮುಕ್ತಗೊಳ್ಳಲಿದೆ’ ಎಂದು ಲೋಕೋಪಯೋಗಿ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದರು.
ಈಗಾಗಲೇ ಈ ರಸ್ತೆಯಲ್ಲಿ ವಾಹನಗಳು ಓಡಾಡಲು ಆರಂಭಿಸಿವೆ. ಅಲ್ಲದೆ. ವಿಮಾನ ನಿಲ್ದಾಣದಿಂದ ಈ ರಸ್ತೆಯವರೆಗೆ 300 ಮೀಟರ್ ಉದ್ದದ ಫುಟ್ಪಾತ್ ನಿರ್ಮಿಸುವ ಯೋಜನೆಯೂ ಇದೆ. ಕಾಮಗಾರಿ ಪೂರ್ಣಗೊಂಡಲ್ಲಿ, ಹುಬ್ಬಳ್ಳಿ ನಗರದಿಂದ ಬೈಪಾಸ್ ತಲುಪುವ ವಾಹನಗಳ ಸುಗಮ ಸಂಚಾರಕ್ಕೆ ರಸ್ತೆ ಮುಕ್ತವಾಗಲಿದೆ.
ಉಳಿದ ರಸ್ತೆಗಳ ಅಭಿವೃದ್ಧಿ:
ಲೋಕೋಪಯೋಗಿ ಇಲಾಖೆಯ ನಿರ್ವಹಣೆಯಲ್ಲಿರುವ ಗೋಕುಲ ರಸ್ತೆ ಹಾಗೂ ಚನ್ನಮ್ಮ ವೃತ್ತದಿಂದ ಬಿಡ್ನಾಳ ಕ್ರಾಸ್ವರೆಗಿನ ರಸ್ತೆಗಳು ಸಹ ಸದ್ಯದಲ್ಲಿಯೇ ಅಭಿವೃದ್ಧಿ ಹೊಂದಲಿವೆ. ‘ಗೋಕುಲ ರಸ್ತೆಯ ಅಭಿವೃದ್ಧಿಗಾಗಿ ₨7 ಕೋಟಿ ಹಾಗೂ ಬಂಕಾಪುರ ಚೌಕದಿಂದ ಬಿಡ್ನಾಳ ಕ್ರಾಸ್ವರೆಗಿನ ರಸ್ತೆ ಅಭಿವೃದ್ಧಿಗೆ ₨4 ಕೋಟಿ ಅನುದಾನ ದೊರೆತಿದೆ. ಈ ಕುರಿತು ಟೆಂಡರ್ ಪ್ರಕ್ರಿಯೆ ನಡೆದಿದ್ದು, ಮುಂದಿನ ಮಳೆಗಾಲಕ್ಕೆ ಮುನ್ನ ಕಾಮಗಾರಿ ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ’ ಎಂದು ಲೋಕೋಪಯೋಗಿ ಇಲಾಖೆ ಅಧಿಕಾರಿಯೊಬ್ಬರು ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.