ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೋಡೆ ಕುಸಿದು ಮಹಿಳೆ ಸಾವು

Last Updated 13 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ಬೆಂಗಳೂರು: ನಗರದಲ್ಲಿ ಸುರಿದ ಮಳೆಯಿಂದಾಗಿ ರಾಜರಾಜೇಶ್ವರಿನಗರ ಸಮೀಪದ ಬಂಗಾರಪ್ಪನಗರ ಐದನೇ ಅಡ್ಡರಸ್ತೆಯಲ್ಲಿ ಶುಕ್ರವಾರ ಬೆಳಿಗ್ಗೆ ಮನೆ ಗೋಡೆ ಕುಸಿದು ಸರಸ್ವತಿ (43) ಎಂಬುವರು ಸಾವನ್ನಪ್ಪಿದ್ದಾರೆ.

ನಡುಮನೆಯಲ್ಲಿ ಮಲಗಿದ್ದ ಸರಸ್ವತಿ ಅವರ ಮೇಲೆ ಬೆಳಿಗ್ಗೆ 7.30ರ ಸುಮಾ ರಿಗೆ ಗೋಡೆ ಕುಸಿದು ಬಿದ್ದಿದೆ. ಈ ಸಂದರ್ಭದಲ್ಲಿ ಅವರ ಪತಿ ನೀಲೇಗೌಡ ಹಾಗೂ ಇಬ್ಬರು ಮಕ್ಕಳಾದ ವೆಂಕಟೇಶ್‌ ಮತ್ತು ಮಂಜುನಾಥ್‌ ಕೆಲಸಕ್ಕೆ ಹೋಗಿದ್ದರು. ಸೊಸೆ ರಾಜೇಶ್ವರಿ ಸ್ಥಳೀ ಯರ ನೆರವು ಪಡೆದು ಗೋಡೆಯ ಅವ ಶೇಷಗಳನ್ನು ತೆರವುಗೊಳಿಸಿ ಸರಸ್ವತಿ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿ ಸಿದ್ದಾರೆ. ಬಳಿಕ ಅಲ್ಲಿನ ವೈದ್ಯರ ಶಿಫಾರ ಸಿನಂತೆ ಜಯದೇವ ಆಸ್ಪತ್ರೆಗೆ ಕೊಂಡೊ ಯ್ಯುವಾಗ ಮಾರ್ಗಮಧ್ಯೆ ಅವರು ಕೊನೆ ಯುಸಿರೆಳೆದರು ಎಂದು ಪೊಲೀಸರು ತಿಳಿಸಿದ್ದಾರೆ.

‘ಮೂಲತಃ ಮಂಡ್ಯದವರಾದ ನೀಲೇ ಗೌಡ ಹೊಸಕೆರೆಹಳ್ಳಿಯ ಟೆಲಿಫೋನ್ ಎಕ್ಸ್‌ಚೇಂಜ್‌ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದಾರೆ. 25 ವರ್ಷಗಳ ಹಿಂದೆ ನಗರಕ್ಕೆ ಬಂದಿದ್ದ ಅವರು ಬಂಗಾರಪ್ಪ ನಗರದಲ್ಲಿ ನಿವೇಶನ ಪಡೆದು ಮೂರು ಮನೆಗಳನ್ನು ಕಟ್ಟಿಸಿದ್ದರು. ನೀಲೇಗೌಡ ದಂಪತಿ ಕಿರಿಯ ಮಗನೊಂದಿಗೆ ಒಂದು ಮನೆಯಲ್ಲಿ ವಾಸ ವಾಗಿದ್ದರೆ, ಮತ್ತೊಬ್ಬ ಮಗ ವೆಂಕಟೇಶ್, ಪತ್ನಿಯೊಂದಿಗೆ ಮತ್ತೊಂದು ಮನೆಯಲ್ಲಿ ನೆಲೆಸಿದ್ದಾರೆ’ ಎಂದು ಪೊಲೀಸರು ಹೇಳಿದರು.

ಘಟನೆ ಬಗ್ಗೆ ಸಂಬಂಧ ‘ಪ್ರಜಾವಾಣಿ’ಯೊಂದಿಗೆ ಮಾತನಾಡಿದ ವೆಂಕಟೇಶ್‌, ‘ಅನಾರೋಗ್ಯದಿಂದ ಹಾಸಿಗೆ ಹಿಡಿದಿದ್ದ ತಾಯಿ, ಒಂದು ವಾರದಿಂದ ದಿನವಿಡೀ ನಡುಮನೆಯ ಮಂಚದ ಮೇಲೆ ಮಲಗಿರುತ್ತಿದ್ದರು. ಮನೆ ಹಳೆಯ ದಾಗಿದ್ದರಿಂದ ಗೋಡೆ ಕೂಡ ಬಿರುಕು ಬಿಟ್ಟಿತ್ತು, ಈ ನಡುವೆ ರಾತ್ರಿ ಸುರಿದ ಮಳೆ ಯಿಂದಾಗಿ ಶಿಥಿಲಗೊಂಡಿದ್ದ ಗೋಡೆಯ ಒಂದು ಭಾಗ ಬೆಳಿಗ್ಗೆ 6.30ಕ್ಕೆ ಕುಸಿದು ಬಿತ್ತು. ಆಗ ಎಚ್ಚರಗೊಂಡ ತಾಯಿ, ಅವಶೇಷಗಳನ್ನು ಹೊರ ಹಾಕುವಂತೆ ತಿಳಿಸಿದ್ದರು’ ಎಂದು ಮಾಹಿತಿ ನೀಡಿದರು,

ಗೋಡೆಯ ಅವಶೇಷಗಳನ್ನು ಹೊರ ಚೆಲ್ಲಿದ ಬಳಿಕ ತಂದೆ, ತಮ್ಮ ಹಾಗೂ ನಾನು ಕೆಲಸಕ್ಕೆ ಹೋದೆವು. 7.45ಕ್ಕೆ ಕರೆ ಮಾಡಿದ ಪತ್ನಿ, ತಾಯಿಯ ಮೇಲೆ ಮನೆ ಮತ್ತೊಂದು ಬದಿಯ ಗೋಡೆ ಬಿದ್ದಿದ್ದಾಗಿ ಹೇಳಿ ದಳು. ವಾಪಸ್‌ ಬರುವ ವೇಳೆಗಾಗಲೇ ತಾಯಿ ಸ್ಥಳೀಯ ಆಸ್ಪತ್ರೆಯಲ್ಲಿ ಕೊನೆ ಯುಸಿರೆಳೆದಿದ್ದರು’ ಎಂದು ಕಣ್ಣೀರಿಟ್ಟರು.

ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಮರಣೊತ್ತರ ಪರೀಕ್ಷೆ ನಡೆಸಿ ಶವವನ್ನು ಕುಟುಂಬಕ್ಕೆ ಒಪ್ಪಿಸಲಾಗಿದೆ ಎಂದು ರಾಜರಾಜೇಶ್ವರಿ ನಗರ ಪೊಲೀಸರು ಹೇಳಿದ್ದಾರೆ. ಪ್ರಕರಣ ದಾಖಲಾಗಿದೆ.

ದಂಪತಿ ದುರ್ಮರಣ
ಯಲಹಂಕ: ಗುರುವಾರ ರಾತ್ರಿ ಸುರಿದ ಭಾರಿ  ಮಳೆಗೆ ಮನೆಯ ಗೋಡೆ ಕುಸಿದು ಬಿದ್ದು ದಂಪತಿ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ರಾಜಾನುಕುಂಟೆ ಠಾಣೆ  ವ್ಯಾಪ್ತಿಯ ತಿಮ್ಮಸಂದ್ರ ಗ್ರಾಮದಲ್ಲಿ ನಡೆದಿದೆ.

ಕೂಲಿ ಕಾರ್ಮಿಕ ಸಿದ್ದಪ್ಪ (60) ಹಾಗೂ ಪತ್ನಿ ಸಂಜೀವಮ್ಮ (50) ಮೃತಪಟ್ಟವರು. ಅವರು ಮೂಲತಃ ಮಧುಗಿರಿ ತಾಲ್ಲೂಕಿನ ಓಬಳಾಪುರ ಗ್ರಾಮದವರು.

ಎರಡು ವರ್ಷದ ಹಿಂದೆ ಕೂಲಿ ಅರಸಿ ನಗರಕ್ಕೆ ಬಂದಿದ್ದ ಅವರು ಸುಮಿತ್ರಮ್ಮ ಎಂಬವರ ಕಲ್ಲುಚಪ್ಪಡಿಯ ಮನೆಯನ್ನು ಬಾಡಿಗೆಗೆ ಪಡೆದಿದ್ದರು. ದಂಪತಿಗೆ ಮೂವರು ಮಕ್ಕಳು. ಹೆಣ್ಣುಮಕ್ಕಳಿಗೆ ಮದುವೆಯಾಗಿದ್ದು, ಹಿಂದೂಪುರದಲ್ಲಿ ನೆಲೆಸಿದ್ದಾರೆ. ಪುತ್ರ ಅಶೋಕ್‌ ಪತ್ನಿಯೊಂದಿಗೆ ತಿಮ್ಮಸಂದ್ರದಲ್ಲಿ ಬೇರೆ ಮನೆಯಲ್ಲಿ ವಾಸವಾಗಿದ್ದಾನೆ.

ರಾತ್ರಿ ಸುರಿದ ಭಾರಿ ಮಳೆಯಿಂದಾಗಿ ಇವರು ವಾಸವಿದ್ದ ಮನೆಯ ಹಿಂಭಾಗದ ಗೋಡೆಯ ಕೆಳಗೆ ನೀರು ನಿಂತಿತ್ತು. ಗೋಡೆ ಕುಸಿದು ಮಲಗಿದ್ದ ಇವರ ಮೇಲೆ  ಬಿತ್ತು. ಸ್ಥಳದಲ್ಲಿಯೇ ದಂಪತಿ ಮೃತಪಟ್ಟರು. ಶುಕ್ರವಾರ ಬೆಳಿಗ್ಗೆ ಪುತ್ರ ಅಶೋಕ್‌ ಪೊಲೀಸರಿಗೆ ದೂರು ಸಲ್ಲಿಸಿದರು. ಪೊಲೀಸರು ಸ್ಥಳ ಪರಿಶೀಲನೆ ನಡೆಸಿದರು. ದೊಡ್ಡಬಳ್ಳಾಪುರ ಸರ್ಕಾರಿ ಆಸ್ಪತ್ರೆಯಲ್ಲಿ ಶವಪರೀಕ್ಷೆ ನಡೆಸಲಾಯಿತು.

ಪರಿಹಾರ ಭರವಸೆ: ಬೆಂಗಳೂರು ಉತ್ತರ ತಾಲ್ಲೂಕು ಉಪ ವಿಭಾಗಾಧಿಕಾರಿ ಮಹೇಶ್‌ಬಾಬು ಹಾಗೂ ತಹಶೀಲ್ದಾರ್‌ ಬಾಳಪ್ಪ ಹಂದಿಗುಂದ ಅವರು, ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

ಘಟನೆಯ ಬಗ್ಗೆ ಜಿಲ್ಲಾಧಿಕಾರಿ ಅವರಿಗೆ ವರದಿ ಸಲ್ಲಿಸಿ  ಮೃತರ ಕುಟುಂಬಕ್ಕೆ ಸೂಕ್ತ ಪರಿಹಾರ  ನೀಡುವುದಾಗಿ ಭರವಸೆ ನೀಡಿದರು.

ಮುನ್ನೆಚ್ಚರಿಕೆಯ ಕ್ರಮವಾಗಿ ಘಟನಾ ಸ್ಥಳದ ಪಕ್ಕದಲ್ಲಿದ್ದ ಸುಮಾರು 60 ವರ್ಷಗಳಷ್ಟು ಹಳೆಯದಾದ ಶಿಥಿಲಗೊಂಡ ಆರು ಮನೆಗಳನ್ನು ತೆರವುಗೊಳಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT