ಬೆಂಗಳೂರು: ಅಧಿಕಾರಿಗಳು ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ಸೈನಿಕನೊಬ್ಬ ಮೊಬೈಲ್ ಗೋಪುರವೇರಿ ಆತ್ಮಹತ್ಯೆ ಮಾಡಿಕೊಳ್ಳುವ ಬೆದರಿಕೆ ಹಾಕಿದ ಘಟನೆ ಮಾರುತಿ ಸೇವಾನಗರದಲ್ಲಿ ಗುರುವಾರ ನಡೆದಿದೆ.
ತಮಿಳುನಾಡು ಮೂಲದ ಕೆ.ಮುತ್ತು (32) ಎಂಬುವರು ಆರ್ಮಿ ಡಿಜಿಟಲ್ ಮ್ಯಾಪಿಂಗ್ ಸೆಂಟರ್ನಲ್ಲಿ ಕಳೆದ 15 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದರು. ಐದು ವರ್ಷಗಳಲ್ಲಿ ನಾಲ್ಕು ಬಾರಿ ವರ್ಗಾವಣೆಯಾಗಿದ್ದರಿಂದ ಬೇಸರಗೊಂಡಿದ್ದರು. ಅಧಿಕಾರಿಗಳು ರಜೆ ನೀಡದೇ, ಕಿರುಕುಳ ನೀಡುತ್ತಿದ್ದರು ಎಂದು ಮುತ್ತು ಆರೋಪಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಬೆಳಿಗ್ಗೆ 8 ಗಂಟೆಗೆ ಮುತ್ತು, ಮದ್ರಾಸ್ ಎಂಜಿನಿಯರಿಂಗ್ ಗ್ರೂಪ್ (ಎಂಇಜಿ) ಬಳಿ ಇರುವ 300 ಅಡಿ ಎತ್ತರದ ಮೊಬೈಲ್ ಗೋಪುರವೇರಿ ಕುಳಿತ ಬಗ್ಗೆ ಸಾರ್ವಜನಿಕರು ಬಾಣಸವಾಡಿ ಪೊಲೀಸರಿಗೆ ಮಾಹಿತಿ ನೀಡಿದರು.
ಸ್ಥಳಕ್ಕೆ ಆಗಮಿಸಿದ ಪೊಲೀಸರು ಹಾಗೂ ಅಗ್ನಿ ಶಾಮಕ ದಳದ ಸಿಬ್ಬಂದಿ ಅವರನ್ನು ಕೆಳಗಿಳಿಸುವಲ್ಲಿ ಯಶಸ್ವಿಯಾದರು. ಅವರ ವಿರುದ್ಧ ಯಾವುದೇ ಪ್ರಕರಣ ದಾಖಲಿಸಿಕೊಂಡಿಲ್ಲ.
ಮುಂದಿನ ಕ್ರಮಕ್ಕೆ ಸೇನಾ ಸಿಬ್ಬಂದಿ ವಶಕ್ಕೆ ಒಪ್ಪಿಸಲಾಯಿತು ಎಂದು ಪೊಲೀಸರು ಹೇಳಿದ್ದಾರೆ.