ಚಿಕ್ಕಮಗಳೂರು: ಒತ್ತುವರಿ ಆಗಿರುವ ಗೋಮಾಳ ಜಾಗ ತೆರವಿಗೆ ಒತ್ತಾಯಿಸಿ ಬಾಳೆಹಳ್ಳಿ ಕೃಷ್ಣಪ್ಪ ಬಡಾವಣೆ ನಿವಾಸಿಗಳು ಜಿಲ್ಲಾಧಿಕಾರಿ ಕಚೇರಿ ಬಳಿ ಸೋಮವಾರ ಧರಣಿ ನಡೆಸಿದರು.
ಆಲ್ದೂರು ರಾಜಸ್ವ ನಿರೀಕ್ಷರು ಒತ್ತುವರಿ ಮಾಡಿರುವ ಭೂಮಾಲೀಕರ ಪರವಾಗಿ ವರ್ತಿಸುತ್ತಿದ್ದಾರೆ ಎಂದು ಆರೋಪಿಸಿದ ಗ್ರಾಮಸ್ಥರು, ಅಧಿಕಾರಿ ವಿರುದ್ಧ ಧಿಕ್ಕಾರ ಕೂಗಿದರು.
ನಿವೇಶನ, ಸ್ಮಶಾನಕ್ಕೆ ಕಾಯ್ದಿರಿಸಿದ್ದ ಜಾಗವೇ ಒತ್ತುವರಿಯಾಗಿದೆ. ಜಿಲ್ಲಾಡಳಿತ ಕೂಡಲೇ ಭೂಮಿ ತೆರವಿಗೆ ಕ್ರಮ ಕೈಗೊಂಡು ಸ್ಮಶಾನದ ಜಾಗವನ್ನು ಸಾರ್ವಜನಿಕ ಬಳಕೆಗೆ ಉಳಿಸಿಕೊಡಬೇಕು ಎಂದು ಒತ್ತಾಯಿಸಿದ ಗ್ರಾಮಸ್ಥರು, ಹೆಚ್ಚುವರಿ ಜಿಲ್ಲಾಧಿಕಾರಿಗೆ ಮನವಿಪತ್ರ ಸಲ್ಲಿಸಿದರು.
ರಾಜಸ್ವ ನಿರೀಕ್ಷಕರು ಸ್ಮಶಾನ, ನಿವೇಶನ ಹಾಗೂ ಆಟದ ಮೈದಾನದ ನಕ್ಷೆ ನೀಡಲು ವಿಳಂಬ ಮಾಡುತ್ತಿದ್ದಾರೆ. ಸ್ಮಶಾನಕ್ಕೆ ಕಾಯ್ದಿರಿ ಸಿದ ಜಾಗ ಒತ್ತುವರಿಯಾಗಿದ್ದರೂ ತೆರವುಗೊಳಿಸಲು ಕಂದಾಯ ಇಲಾಖೆ ಅಧಿಕಾರಿಗಳು ಮುಂದಾಗಿಲ್ಲ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಗ್ರಾಮದ ಕೆರೆಯ ಹೂಳು ತೆಗೆಸಬೇಕು. ಬಡಾವಣೆಯ ಬಾಕ್ಸ್ ಚರಂಡಿ ಕಾಮಗಾರಿ ಪೂರ್ಣಗೊಳಿಸಬೇಕು. ಬಸ್ ತಂಗುದಾಣ ನಿರ್ಮಿಸಿಕೊಡಬೇಕು. ವಸತಿಹೀನರಿಗೆ ತಕ್ಷಣ ನಿವೇಶನ ನೀಡಬೇಕೆಂದು ಧರಣಿ ನಡೆಸಿದರು.ಎಚ್.ಎಂ.ಲಕ್ಷ್ಮಣ, ರಘು, ದಿನೇಶ, ರವಿ, ಅಶೋಕ, ದಿವಾಕರ ಹಾಗೂ ಹರೀಶ್ ಮತ್ತಿತರರಿದ್ದರು.