ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಆಯುಕ್ತ ಡಾ. ರಜನೀಶ್ ಗೋಯಲ್ ಅವರಿಗೆ 15 ದಿನಗಳ ಕಡ್ಡಾಯ ರಜೆಯನ್ನು ನೀಡಿರುವ ರಾಜ್ಯ ಸರ್ಕಾರ, ಆ ಹುದ್ದೆಯ ಹೊಣೆಯನ್ನು ಹಿರಿಯ ಐಎಎಸ್ ಅಧಿಕಾರಿ ಸಿದ್ದಯ್ಯ ಅವರಿಗೆ ವಹಿಸಿದೆ. ಸಿದ್ದಯ್ಯ ಈ ಹಿಂದೆ ಬಿಬಿಎಂಪಿ ಆಯುಕ್ತರಾಗಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸೋಮವಾರ ಸಂಜೆಯೇ ಅವರು ಅಧಿಕಾರ ಸ್ವೀಕಾರ ಮಾಡಿದ್ದಾರೆ.
ತ್ಯಾಜ್ಯ ವಿಲೇವಾರಿ ವೈಫಲ್ಯಕ್ಕಾಗಿ ಹೈಕೋರ್ಟ್ನಿಂದ ಮೇಲಿಂದ ಮೇಲೆ ಛೀಮಾರಿಗೆ ಒಳಗಾಗಿದ್ದ ಸರ್ಕಾರ, ಗೋಯಲ್ ಅವರನ್ನು ವರ್ಗಾವಣೆ ಮಾಡಲು ತೀರ್ಮಾನಿಸಿತ್ತು. ಮತದಾರರ ಪಟ್ಟಿ ಪರಿಷ್ಕರಣೆ ನಡೆದ ಈ ಹಂತದಲ್ಲಿ ವರ್ಗಾವಣೆ ಮಾಡಲು ಅವಕಾಶ ಇಲ್ಲದ ಕಾರಣ ಕಡ್ಡಾಯದ ರಜೆ ಮೇಲೆ ಕಳುಹಿಸಲಾಗಿದೆ ಎಂದು ಗೊತ್ತಾಗಿದೆ.
`ಕಸ ನಿರ್ವಹಣೆಯಲ್ಲಿ ಸಂಪೂರ್ಣ ವಿಫಲವಾಗಿರುವ ಆಯುಕ್ತರು, ಅಭಿವೃದ್ಧಿ ಕೆಲಸಗಳಲ್ಲೂ ಹಿಂದೆ ಬಿದ್ದಿದ್ದಾರೆ. ಅವರ ಸೇವೆ ನಮಗೆ ಬೇಡ' ಎಂದು ಬಿಬಿಎಂಪಿ ಸದಸ್ಯರು ಕಳೆದ ಸಾಮಾನ್ಯ ಸಭೆಯಲ್ಲಿ ಪಕ್ಷಭೇದ ಮರೆತು ರಾಜ್ಯ ಸರ್ಕಾರಕ್ಕೆ ಒತ್ತಾಯ ಮಾಡಿದ್ದರು.