ಪಣಜಿ (ಪಿಟಿಐ): ಗೋವಾದಲ್ಲಿ ಯಾವುದೇ ಅಕ್ರಮ ಗಣಿಗಾರಿಕೆ ನಡೆದಿಲ್ಲ ಎಂದು ಆ ರಾಜ್ಯದ ಮುಖ್ಯಮಂತ್ರಿ ದಿಗಂಬರ ಕಾಮತ್ ಸೋಮವಾರ ಹೇಳಿದ್ದಾರೆ.
ಗೋವಾದಲ್ಲಿ ಬಹು ಕೋಟಿ ರೂಪಾಯಿಗಳ ಅಕ್ರಮ ಗಣಿಗಾರಿಕೆ ನಡೆದಿದೆ ಎಂಬ ವಿವಾದದ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿರುವ ಅವರು, `ನಾನು ಸ್ವತಃ ಕಾನೂನುಬಾಹಿರ ಚಟುವಟಿಕೆಗಳ ವಿರುದ್ಧ ಹೋರಾಟಗಾರನಾದ ಕಾರಣ ರಾಜ್ಯದಲ್ಲಿ ಅಂತಹ ಯಾವುದೇ ಚಟುವಟಿಕೆ ನಡೆಯಲು ಬಿಡುವುದಿಲ್ಲ~ ಎಂದಿದ್ದಾರೆ.
`ಕಳೆದ ಒಂದು ದಶಕದಿಂದ ನಾನೇ ಗಣಿ ಇಲಾಖೆ ಸಚಿವನಾಗಿದ್ದೇನೆ. ಅಕ್ರಮ ಗಣಿಗಾರಿಕೆಯನ್ನು ಯಾವತ್ತೂ ಬೆಂಬಲಿಸಿಲ್ಲ. ಯಾವೊಂದು ಪರವಾನಗಿ ನವೀಕರಿಸಿಲ್ಲ ಅಥವಾ ಹೊಸದಾಗಿ ಯಾವುದೇ ಗುತ್ತಿಗೆ ನೀಡಿಲ್ಲ~ ಎಂದು ಅವರು ಸುದ್ದಿಸಂಸ್ಥೆಗೆ ನೀಡಿರುವ ಸಂದರ್ಶನದಲ್ಲಿ ತಿಳಿಸಿದರು.
ಗೋವಾದಲ್ಲಿ 90 ಗಣಿ ಗುತ್ತಿಗೆಗಳಿದ್ದು, ಇವುಗಳಿಂದ ಅಂದಾಜು 5.4 ಕೋಟಿ ಮೆಟ್ರಿಕ್ ಟನ್ಗಳಷ್ಟು ಅದಿರು ರಫ್ತು ಮಾಡಲಾಗುತ್ತಿದೆ.
ಹೆಗ್ಡೆ ನಕಾರ
ಪಣಜಿ (ಪಿಟಿಐ): `ಗೋವಾದ ಲೋಕಾಯುಕ್ತನಾಗಲು ನಾನು ಆಸಕ್ತಿ ಹೊಂದಿಲ್ಲ~ ಎಂದು ನಿವೃತ್ತ ನ್ಯಾಯಮೂರ್ತಿ ಹಾಗೂ ಕರ್ನಾಟಕದ ಮಾಜಿ ಲೋಕಾಯುಕ್ತ ಸಂತೋಷ್ ಹೆಗ್ಡೆ ಸೋಮವಾರ ಹೇಳಿದ್ದಾರೆ.
`ಈ ಬಗ್ಗೆ ಗೋವಾ ಸರ್ಕಾರದಿಂದ ಪ್ರಸ್ತಾವ ಬಂದರೂ ನಾನು ಅದನ್ನು ಒಪ್ಪುವುದಿಲ್ಲ~ ಎಂದು ಅವರು ಸ್ಪಷ್ಟಪಡಿಸಿದರು.