ಕಾರವಾರದಲ್ಲಿ ಸಾಕಷ್ಟು ಸಮಸ್ಯೆಗಳಿರುವುದು ನಿಜ. ಆದರೆ ಅದಕ್ಕಾಗಿ ಕನ್ನಡ - ಕೊಂಕಣಿ ಭಾಷಾ ಸಾಮರಸ್ಯದ ನಡುವೆ ಹುಳಿ ಹಿಂಡಿ ಕಾರವಾರವನ್ನು ಗೋವಾಕ್ಕೆ ಸೇರಿಸಿ ಎಂದು ಹೇಳುವುದು ಉದ್ಧಟತನ. ಕಾರವಾರವನ್ನು ಗೋವಾಕ್ಕೆ ಸೇರಿಸುವಂತೆ ಪ್ರಚೋದನೆ ಮಾಡುವುದು ಅದಕ್ಕೆ ಪ್ರತಿಯಾಗಿ ಕನ್ನಡ ಸಂಘಟನೆಗಳು ವಿರೋಧಿಸುವುದರಲ್ಲಿ ಅರ್ಥವೇ ಇಲ್ಲ. ಕನ್ನಡ ಮತ್ತು ಕೊಂಕಣಿ ಎರಡೂ ಭಾಷೆಗಳನ್ನು ಮಾತನಾಡುವ ಜನರು ಅನ್ಯೋನ್ಯದಿಂದ ಇರುವಾಗ ಅನಗತ್ಯವಾಗಿ ಗೊಂದಲ ಸೃಷ್ಟಿಸುವುದು ಸರಿಯಲ್ಲ. ಕರ್ನಾಟಕ ಸರ್ಕಾರ ಯಾವುದೇ ರೀತಿಯಲ್ಲೂ ಕೊಂಕಣಿ ಭಾಷೆಗೆ ಅನ್ಯಾಯ ಮಾಡಿಲ್ಲ. ಕರ್ನಾಟಕದ ಪಠ್ಯ ಪುಸ್ತಕಗಳಲ್ಲಿ ಕೊಂಕಣಿಯನ್ನು ಒಂದು ಐಚ್ಚಿಕ ಭಾಷೆಯನ್ನಾಗಿ ಕಲಿಯಲು ಅನುವು ಮಾಡಿಕೊಟ್ಟಿದೆ. ಕೊಂಕಣಿ ಜನರಿಗೆ ರಾಜಕೀಯ - ಆರ್ಥಿಕ - ಸಾಹಿತ್ಯ - ಮನರಂಜನೆ ಎಲ್ಲಾ ಕ್ಷೇತ್ರಗಳಲ್ಲಿ ಇರುವಂತೆ ನ್ಯಾಯ ಒದಗಿಸಿದೆ. ಕರ್ನಾಟಕದಲ್ಲಿ ಕೊಂಕಣಿ ಚಿತ್ರ ಮಾಡುವವರಿಗೆ 5 ಲಕ್ಷ ರೂ. ಸಬ್ಸಿಡಿ ಒದಗಿಸಿದೆ.