ಹಿರೇಕೆರೂರ: ಸರ್ಕಾರದ ಸಹಾಯಧನದ ಅಡಿಯಲ್ಲಿ ನೀಡುವ ಗೋವಿನ ಜೋಳದ ಬೀಜ ವಿತರಣೆ ಕೇಂದ್ರಗಳ ಎದುರು ಮಂಗಳವಾರ ಬೀಜ ಪಡೆಯಲು ನೂರಾರು ರೈತರು ಜಮಾಯಿಸಿದ್ದರು. ಬೆಳಿಗ್ಗೆ ಸುರಿದ ಧಾರಾಕಾರ ಮಳೆಯಿಂದ ಉಲ್ಲಾಸಗೊಂಡಿರುವ ರೈತರು ಬೀಜಕ್ಕಾಗಿ ಬಿತ್ತನೆ ಕೇಂದ್ರಗಳ ಕಡೆಗೆ ಧಾವಿಸಿದ್ದಾರೆ.
ತಾಲ್ಲೂಕಿನಲ್ಲಿ 9 ಮಾರಾಟ ಕೇಂದ್ರಗಳನ್ನು ತೆರೆಯಲಾಗಿದೆ. ಪರವಾನಿಗೆ ಪತ್ರ ಹಾಗೂ ಗುರುತಿನ ಚೀಟಿ ತಂದ ಸಣ್ಣ ಮತ್ತು ಅತೀಸಣ್ಣ ರೈತರಿಗೆ ಬೀಜ ವಿತರಿಸಲಾಯಿತು.
ಕನಕ ಹತ್ತಿ ಬೀಜಕ್ಕೆ ಬಂದ ಬೇಡಿಕೆಯಂತೆ ಸಿ.ಪಿ. ಕಂಪೆನಿ ಗೋವಿನ ಜೋಳದ ಬೀಜಕ್ಕೆ ಭಾರಿ ಬೇಡಿಕೆ ಬಂದಿದೆ. ಬಹುತೇಕ ಎಲ್ಲ ರೈತರು ಸಿ.ಪಿ. ಕಂಪೆನಿಯ ಬೀಜಗಳನ್ನೇ ಕೇಳುತ್ತಿದ್ದಾರೆ. ಎಲ್ಲರೂ ಒಂದೇ ಕಂಪೆನಿಯ ಬೀಜ ಕೇಳಿದರೆ ಸರಬರಾಜು ಮಾಡಲು ತೊಂದರೆಯಾಗುತ್ತದೆ ಎನ್ನುತ್ತಾರೆ ಕೃಷಿ ಇಲಾಖೆ ಅಧಿಕಾರಿಗಳು.
ಪಟ್ಟಣದ ರೈತ ಸಂಪರ್ಕ ಕೇಂದ್ರ ಹಾಗೂ ಸಾಮರ್ಥ್ಯ ಸೌಧ, ಕೋಡ ಗ್ರಾಮದ ವ್ಯವಸಾಯ ಸೇವಾ ಸಹಕಾರಿ ಸಂಘ, ಮಾಸೂರು ಮತ್ತು ಚಿಕ್ಕೇರೂರು ಗ್ರಾಮ ಪಂಚಾಯಿತಿ ಕಚೇರಿ, ರಟ್ಟೀಹಳ್ಳಿಯ ರೈತ ಸಂಪರ್ಕ ಕೇಂದ್ರ ಮತ್ತು ಅಂಗರಗಟ್ಟಿಯವರ ಮಳಿಗೆ, ಹಂಸಭಾವಿ ಗ್ರಾಮದ ರೈತ ಸಂಪರ್ಕ ಕೇಂದ್ರ ಹಾಗೂ ಹಳ್ಳೂರು ಗ್ರಾಮದ ರಂಗನಾಥಸ್ವಾಮಿ ದೇವಸ್ಥಾನದಲ್ಲಿ ಬೀಜ ವಿತರಣೆ ಮಾಡ ಲಾಗುತ್ತಿದೆ.
`ರೈತರು ಕೇಳುವ ಬೀಜಗಳನ್ನು ಸರ್ಕಾರ ಸಾಕಷ್ಟು ಪ್ರಮಾಣದಲ್ಲಿ ಪೂರೈಸಬೇಕು. ಸಹಾಯಧನದಲ್ಲಿ ಬೀಜ ವಿತರಿಸಲು ಸಣ್ಣ ಮತ್ತು ದೊಡ್ಡ ರೈತರೆಂಬ ಭೇದ-ಭಾವ ಮಾಡದೇ ಎಲ್ಲರಿಗೆ ರಿಯಾಯಿತಿ ದರದ ಬೀಜಗಳ ಪೂರೈಕೆ ಮಾಡಲು ಮುಂದಾಗಬೇಕು~ ಎಂದು ತಾ.ಪಂ. ಮಾಜಿ ಸದಸ್ಯ ದತ್ತಾತ್ರೇಯ ರಾಯ್ಕರ ಒತ್ತಾಯಿಸಿದರು.