ಹಳೇಬೀಡು: ಜಾನುವಾರುಗಳ ಕುಡಿಯುವ ನೀರಿನ ಉದ್ದೇಶಕ್ಕಾಗಿ ಪ್ರಾಚೀನ ಕಾಲದಲ್ಲಿ ನಿರ್ಮಿಸಿದ್ದ ತಿಮ್ಮನಹಳ್ಳಿ ಕಟ್ಟೆ ಎಂದು ಕರೆಯುವ ಹಳೇಬೀಡಿನ ಗೋವಿನಕೆರೆ ಈಗ ನಿವೇಶನ, ಹೆದ್ದಾರಿ ನಿರ್ಮಾಣ ಹಾಗೂ ಅಭಿವೃದ್ದಿ ಹೆಸರಿನಿಂದ ಸೊರಗುತ್ತಿದೆ.
ಕೆರೆ ಸುತ್ತಮುತ್ತಲಿನ ಜಮೀನುಗಳು ನಿವೇಶನಗಳಾಗಿ ಮಾರ್ಪಾಟಾ ಗುತ್ತಿದ್ದು, ಭೂಮಿಗೆ ಬಂಗಾರದ ಬೆಲೆ ಬಂದಿದೆ. ಇಲ್ಲಿ ಒಂದು ಎಕರೆ ಭೂಮಿ ಕೋಟಿರೂಪಾಯಿಗೂ ಹೆಚ್ಚು ಬೆಲೆಬಾಳುತ್ತದೆ. ಜಮೀನು ಖರೀದಿಸಿ ನಿವೇಶನಗಳನ್ನಾಗಿ ಪರಿವರ್ತನೆ ಮಾಡಿ ಮಾರಾಟ ಮಾಡುವ ರಿಯಲ್ ಎಸ್ಟೇಟ್ ಉದ್ಯಮಿಗಳು ಕೆರೆ ಏರಿ ಜತೆಗೆ ಕೆರೆಯ ಭಾಗವನ್ನೆ ಸಂಪರ್ಕ ರಸ್ತೆಯನ್ನಾಗಿ ಮಾಡುತ್ತಿದ್ದಾರೆ.
`ದಾಖಲೆಗಳ ಪ್ರಕಾರ 9 ಎಕರೆ 11ಗುಂಟೆ ವಿಸ್ತಿರ್ಣದ ಈ ಕೆರೆ ಈಗ ಐದಾರು ಎಕರೆ ಮಾತ್ರ ಉಳಿದಿರಬಹುದು. ಜೊತೆಗೆ ಕೆರೆಯಲ್ಲಿ ಹೂಳು ತುಂಬಿಕೊಂಡಿರುವುದರಿಂದ ನೀರು ಸಂಗ್ರಹಣಾ ಸಾಮರ್ಥ್ಯ ಕಡಿಮೆಯಾಗಿದೆ. ಕೋಡಿ ಸಹ ಸರಿಯಾಗಿಲ್ಲದೆ ಮಳೆಗಾಲದಲ್ಲಿ ಕೆರೆ ತುಂಬಿದರೂ ನೀರು ಬೇಗ ಖಾಲಿಯಾಗುತ್ತದೆ. ಹೀಗಾಗಿ ಜಾನುವಾರುಗಳಿಗೆ ಕುಡಿಯುವ ನೀರಿನ ಆಸರೆ ಇಲ್ಲದಂತಾಗಿದೆ~ ಎನ್ನುತ್ತಾರೆ ಸ್ಥಳೀಯರು.
ನಿವೇಶನ ಜಮೀನು ಮಾತ್ರವಲ್ಲದೆ ಕೆರೆ ಪಕ್ಕದ ಬೇಲೂರು ರಸ್ತೆ ಮಂಗಳೂರು- ತಿರುವಣ್ಣಾಮಲೈ ರಾಷ್ಟ್ರೀಯ ಹೆದ್ದಾರಿಯಾಗಿ ವಿಸ್ತರಣೆ ಆಗಲಿದೆ. ರಸ್ತೆ ವಿಸ್ತರಣೆಗೂ ಕೆರೆಯ ಸ್ವಲ್ಪ ಭಾಗ ಬಲಿಯಾಗಲಿದೆ. ಹಿಂದೆ ನಾಲ್ಕೈದು ಕಿ.ಮೀ. ದೂರದ ಗೋಮಾಳಕ್ಕೆ ಹೋಗಿ ಮೇಯುತ್ತಿದ್ದ ಜಾನುವಾರುಗಳು ಸಂಜೆ ಮರಳಿ ಬರುವಾಗ ಊರು ಸಮೀಪಿಸುತ್ತಿದ್ದಂತೆ ಕೆರೆಯಲ್ಲಿ ನೀರು ಕುಡಿದು ಮನೆಗೆ ಹಿಂದಿರುಗುತ್ತಿದ್ದವು. ಇಂಥ ಚಿತ್ರಣ ಮರುಕಳಿಸಲು ಸಾಧ್ಯವಿಲ್ಲ. ಮುಂದಿನ ದಿನದಲ್ಲಿ ಕೆರೆ ಇತಿಹಾಸ ಸೇರಬಹುದು ಎಂಬುದು ಈಗಿನ ರೈತರ ಆತಂಕ.
ಬಸ್ ನಿಲ್ದಾಣ, ಕಾಲೇಜು ಕಟ್ಟಡ ಮೊದಲಾದ ಉದ್ದೇಶಗಳಿಗೆ ಜನರು ಕೆರೆಯನ್ನು ಗುರುತಿಸಿದಾಗ ಜಿಲ್ಲಾಡಳಿತ ಯಾವ ಉದ್ದೇಶಕ್ಕೂ ನೀಡದೆ ಗೋವಿನ ಕಟ್ಟೆಯನ್ನು ಉಳಿಸಿದೆ. ಆದರೆ ಬೇರೆ ಉದ್ದೇಶಗಳಿಂದ ಕಾಲಕ್ರಮೇಣ ಕೆರೆ ಮುಳುಗುತ್ತದೆಯೇ ಎಂಬುದು ಆತಂಕದ ಸಂಗತಿಯಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.