‘ಬೆಂಗಳೂರು: ‘ಗೋವಂಶಾದಿ ಜಾನುವಾರುಗಳ ಸಂರಕ್ಷಣೆಗಾಗಿ ವಿಶೇಷ ಪ್ಯಾಕೇಜ್ ರೂಪಿಸಬೇಕು’ ಎಂದು ಗೋವಂಶ ಹತ್ಯೆ ಮುಕ್ತ ಕರ್ನಾಟಕ ನಿರ್ಮಾಣ ಸಂಘಟನೆಗಳ ಒಕ್ಕೂಟ, ಗೋವಂಶ ರಕ್ಷಾದಳ ಮತ್ತು ಸರ್ವಧರ್ಮ ಸಂಸತ್ ಆಗ್ರಹಿಸಿವೆ.
‘ಗೋವುಗಳ ಸಂರಕ್ಷಣೆ, ಸಂವರ್ಧನೆ ಮತ್ತು ಅವುಗಳ ಉಪಯೋಗ ಪಡೆಯಲು ವ್ಯಾಪಕ ಕ್ರಿಯಾ ಯೋಜನೆ ರೂಪಿಸುವ ಅಗತ್ಯವಿದೆ. ಗೋಶಾಲೆ ಹಾಗೂ ಪ್ರಾಣಿ ಸಂರಕ್ಷಣಾ ಕೇಂದ್ರಗಳಿಗೆ ಅವಶ್ಯಕವಿರುವಷ್ಟು ಜಮೀನು ಖರೀದಿಸಲು ಕಾನೂನಿನಲ್ಲಿ ಅವಕಾಶ ಕಲ್ಪಿಸಬೇಕಿದೆ’ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
‘ಗೋ ಸಂರಕ್ಷಣಾ ಕಾಯ್ದೆಯನ್ನು ಕಟ್ಟು ನಿಟ್ಟಾಗಿ ಜಾರಿಗೆ ತಂದು ಜಾನುವಾರು ಹತ್ಯೆ ತಡೆಯಬೇಕು. ಪ್ರಾಣಿ ರಕ್ಷಾ ಕೇಂದ್ರಗಳನ್ನು ತೆರೆಯಲು ರಾಜ್ಯದಲ್ಲಿ ಐಟಿ ಬಿಟಿ ಮಾದರಿಯಲ್ಲಿ ಸೂಕ್ತ ವಾತಾವರಣ ನಿರ್ಮಿಸಬೇಕಿದೆ. ರಾಜ್ಯ ಮಂಡಿಸುತ್ತಿರುವ ಕೃಷಿ ಬಜೆಟ್ ರಾಷ್ಟ್ರಕ್ಕೇ ಮಾದರಿಯಾಗಿರಬೇಕು’ ಎಂದು ಕೋರಿದೆ.
‘ಗೋಹತ್ಯೆ ನಿಷೇಧ ಕಾಯ್ದೆ ಜಾರಿಗೆ ರಾಜ್ಯಪಾಲರು ಅವಕಾಶ ಕೊಡದೇ ಇರುವುದು ವಿಷಾದದ ಸಂಗತಿಯಾಗಿದ್ದು ರಾಜ್ಯದಲ್ಲಿ ಶಾಂತಿ ಸುವ್ಯವಸ್ಥೆಗೆ ಭಂಗ ಉಂಟಾದರೆ ಅದಕ್ಕೆ ಅವರೇ ಹೊಣೆಗಾರರಾಗುತ್ತಾರೆ’ ಎಂದು ಒಕ್ಕೂಟದ ಸಹ ಸಂಚಾಲಕ ಉತ್ತಮ ಚಂದ್ ಚಾಜೇಡ್ ಹಾಗೂ ಸಂಚಾಲಕ ದಯಾನಂದ ಸ್ವಾಮೀಜಿ ಪ್ರಕಟಣೆಯಲ್ಲಿ ಎಚ್ಚರಿಕೆ ನೀಡಿದ್ದಾರೆ.