ಬೆಂಗಳೂರು: ರಾಜ್ಯ ವಿಧಾನಮಂಡಲದಲ್ಲಿ ಅಂಗೀಕರಿಸಿರುವ ಗೋಹತ್ಯೆ ನಿಷೇಧ ಮಸೂದೆಗೆ ರಾಷ್ಟ್ರಪತಿ ಪ್ರತಿಭಾ ಪಾಟೀಲ್ ವಾರದಲ್ಲಿ ಅಂಕಿತ ಹಾಕುವ ವಿಶ್ವಾಸ ಇದೆ ಎಂದು ಮುಖ್ಯಮಂತ್ರಿ ಡಿ.ವಿ ಸದಾನಂದ ಗೌಡ ಹೇಳಿದರು.
ಗೃಹ ಕಚೇರಿ `ಕೃಷ್ಣಾ~ದಲ್ಲಿ ಶುಕ್ರವಾರ ಸುದ್ದಿಗಾರರ ಜೊತೆ ಮಾತನಾಡಿದ, `ಮಧ್ಯಪ್ರದೇಶ ಸರ್ಕಾರ ಅಂಗೀಕರಿಸಿರುವ ಗೋಹತ್ಯೆ ನಿಷೇಧ ಮಸೂದೆಗೆ ರಾಷ್ಟ್ರಪತಿಗಳು ಇತ್ತೀಚೆಗಷ್ಟೇ ಸಹಿ ಮಾಡಿದ್ದಾರೆ. ಅಲ್ಲಿಯ ಮತ್ತು ರಾಜ್ಯದ ಮಸೂದೆಗೆ ಹೆಚ್ಚಿನ ವ್ಯತ್ಯಾಸ ಇಲ್ಲ. ಈ ಹಿನ್ನೆಲೆಯಲ್ಲಿ ಈ ಮಸೂದೆಗೂ ಅಂಕಿತ ದೊರೆಯುವ ವಿಶ್ವಾಸ ಇದೆ~ ಎಂದರು.
ಪ್ರಸಕ್ತ ಸಾಲಿನ ಬಜೆಟ್ನಲ್ಲಿ ವಿವಿಧ ಕ್ಷೇತ್ರಗಳಿಗೆ ಮೀಸಲಿಟ್ಟಿದ್ದ ಹಣ ಎಷ್ಟು ಖರ್ಚಾಗಿದೆ ಎಂಬ ಕುರಿತು ಶ್ವೇತಪತ್ರ ಹೊರಡಿಸಲು ಸಾಧ್ಯವಿಲ್ಲ. ವಿರೋಧ ಪಕ್ಷಗಳು ಎಲ್ಲ ವಿಚಾರಕ್ಕೂ ಶ್ವೇತಪತ್ರಕ್ಕೆ ಆಗ್ರಹಿಸುವುದು ಸರಿಯಲ್ಲ ಎಂದರು.