ಹುಬ್ಬಳ್ಳಿ: ಗೋಹತ್ಯೆಯ ಸಂಪೂರ್ಣ ನಿಷೇಧವನ್ನು ಸುಪ್ರೀಂ ಕೋರ್ಟ್ ಎತ್ತಿ ಹಿಡಿದಿದೆ. ಆದರೂ ಕರ್ನಾಟಕದ ರಾಜ್ಯಪಾಲರು ಮಸೂದೆಗೆ ಒಪ್ಪಿಗೆ ನೀಡದೆ ರಾಜಕೀಯ ಮಾಡುತ್ತಿದ್ದಾರೆ ಎಂದು ಸುಪ್ರೀಂ ಕೋರ್ಟ್ ವಕೀಲ ಜಸರಾಜ್ ಶ್ರೀಮಲ್ ಟೀಕಿಸಿದರು.
ಕರ್ನಾಟಕ ಸರ್ಕಾರದ ಗೋವಂಶ-ಜಾನುವಾರು ಹತ್ಯೆ ನಿಷೇಧ ಮತ್ತು ಸಂರಕ್ಷಣಾ ಮಸೂದೆಗೆ ರಾಷ್ಟ್ರಪತಿಗಳ ಅಂಕಿತಕ್ಕೆ ಆಗ್ರಹಿಸಿ ಗೋವಂಶ, ಜಾನುವಾರು ಹತ್ಯೆ ಮುಕ್ತ ಕರ್ನಾಟಕ ನಿರ್ಮಾಣ ಸಂಘಟನೆಗಳ ಒಕ್ಕೂಟ, ಸೋಮವಾರ ಹಳೇಹುಬ್ಬಳ್ಳಿಯ ಪಿಂಜರಾಪೋಳ ಸಂಸ್ಥೆಯ ಮೈದಾನದಲ್ಲಿ ಆಯೋಜಿಸಿದ್ದ ಸಮಾವೇಶ ಉದ್ದೇಶಿಸಿ ಅವರು ಮಾತನಾಡಿದರು.
ಮಧ್ಯಪ್ರದೇಶ ಹಾಗೂ ಗುಜರಾತ್ ರಾಜ್ಯಗಳಲ್ಲಿ ಗೋ ಹತ್ಯೆ ನಿಷೇಧ ಮಸೂದೆಗೆ ಅಲ್ಲಿಯ ರಾಜ್ಯಪಾಲರು ಒಪ್ಪಿಗೆಯನ್ನು ನೀಡಿದ್ದಾರೆ. ಗೋಹತ್ಯೆ ನಿಷೇಧ ಕಾನೂನಿಗೆ ಸಂವಿಧಾನಕ್ಕೆ ಮಾನ್ಯತೆಯೂ ಇದೆ ಎಂದು ಅವರು ಹೇಳಿದರು.
‘ಗೋ ಹತ್ಯೆ ನಿಷೇಧ ಮಸೂದೆ ಮಂಡಿಸುವ ಮೂಲಕ ರಾಜ್ಯ ಸರ್ಕಾರ ಧೈರ್ಯ ಪ್ರದರ್ಶಿಸಿದೆ. ಆದರೆ, ತಾವೊಬ್ಬ ಬ್ರಾಹ್ಮಣ ಹಾಗೂ ಗೋವು ಭಕ್ತ ಎಂದು ಹೇಳಿಕೊಳ್ಳುವ ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಮಾತ್ರ ತಾವು ಗೋ ಹಂತಕ ಎನ್ನುವುದನ್ನು ಸಾಬೀತುಪಡಿಸಿದ್ದಾರೆ’ ಎಂದು ಪ್ರಮೋದ್ ಮುತಾಲಿಕ್ ಟೀಕಿಸಿದರು.
ಮಸೂದೆಗೆ ರಾಷ್ಟ್ರಪತಿಗಳ ಅಂಕಿತಕ್ಕೆ ಆಗ್ರಹಿಸಿ ದೆಹಲಿ ಚಲೋ ಕಾರ್ಯಕ್ರಮ ಹಮ್ಮಿಕೊಳ್ಳುವುದಾಗಿ ದಯಾನಂದ ಸ್ವಾಮೀಜಿ ತಿಳಿಸಿದರು.ಹುಬ್ಬಳ್ಳಿ ಪಿಂಜರಾಪೋಳದ ಮಹಾಪೋಷಕ ಮೇಘರಾಜ ಕವಾಡ, ಕರ್ನಾಟಕ ರಾಜ್ಯ ರೈತ ಸಂಘದ ಗುರುನಾಥ ಮಾದಾಪುರ, ಆರ್ಎಸ್ಎಸ್ನ ಸುಭಾಸ ಸಿಂಗ್ ಜಮಾದಾರ, ಪ್ರೀತಿ ಬೆಹನ್ ಮೊದಲಾದವರು ಮಾತನಾಡಿದರು.