ಬೆಂಗಳೂರು: ಆರ್ಟಿಐ ಕಾರ್ಯಕರ್ತ ಲಿಂಗರಾಜು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಬಂಧಿಸಿರುವ ಪಾಲಿಕೆಯ ಅಜಾದ್ನಗರ ವಾರ್ಡ್ ಸದಸ್ಯೆ ಗೌರಮ್ಮ ಅವರನ್ನು ಮೂರು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಒಪ್ಪಿಸಿ ನಗರದ ಒಂದನೇ ಎಸಿಎಂಎಂ ನ್ಯಾಯಾಲಯ ಆದೇಶಿಸಿದೆ.
`ಗುರುವಾರ ಬೆಳಿಗ್ಗೆ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ಪ್ರಕರಣ ವಿಚಾರಣೆ ಬಾಕಿ ಇರುವುದರಿಂದ ಆರೋಪಿಯನ್ನು ಪೊಲೀಸರ ವಶಕ್ಕೆ ಒಪ್ಪಿಸುವಂತೆ ನ್ಯಾಯಾಧೀಶ ವೆಂಕಟೇಶ್ ಆರ್. ಹುಲಗಿ ಅವರಲ್ಲಿ ಮನವಿ ಮಾಡಲಾಯಿತು. ಆರೋಪಿಯನ್ನು ಮೂರು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಒಪ್ಪಿಸಿ ಅವರು ಆದೇಶಿಸಿದರು' ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
ಲಿಂಗರಾಜು ಹತ್ಯೆಗೆ ಗೌರಮ್ಮ ಅವರ ಪತಿ ಗೋವಿಂದರಾಜು, ಪ್ರಕರಣದ ಇತರೆ ಆರೋಪಿಗಳಿಗೆ ರೂ 15 ಲಕ್ಷ ಸುಪಾರಿ ಕೊಟ್ಟಿದ್ದ. ಸುಪಾರಿ ಹಣ ಹೊಂದಿಸಲು ಗೌರಮ್ಮ ತಮ್ಮ ಒಡವೆಗಳನ್ನು ಅಡವಿಟ್ಟು, ಹಂತಕರಿಗೆ ಐದು ಲಕ್ಷ ರೂಪಾಯಿ ಮುಂಗಡ ಹಣ ನೀಡಿದ್ದರು. ಹೀಗೆ ಪ್ರಕರಣದಲ್ಲಿ ನೇರವಾಗಿ ಭಾಗಿಯಾಗಿರವ ಗೌರಮ್ಮ ಅವರನ್ನು ಪೊಲೀಸರು ಬುಧವಾರ ತಮಿಳುನಾಡಿನಲ್ಲಿ ಬಂಧಿಸಿ, ತಡರಾತ್ರಿ ನಗರಕ್ಕೆ ಕರೆದುಕೊಂಡು ಬಂದಿದ್ದರು.