ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೌರಮ್ಮದೇವಿ ದರ್ಶನಕ್ಕೆ ಭಕ್ತಸಾಗರ

Last Updated 8 ಸೆಪ್ಟೆಂಬರ್ 2011, 10:50 IST
ಅಕ್ಷರ ಗಾತ್ರ

ಅರಸೀಕೆರೆ: ಪವಿತ್ರ ಧಾರ್ಮಿಕ ಯಾತ್ರಾಸ್ಥಳ ತಾಲ್ಲೂಕಿನ ಮಾಡಾಳು ಗ್ರಾಮದ ಶಕ್ತಿ ದೇವತೆ ಎಂದೇ ಹೆಸರು ಪಡೆದಿರುವ ಗೌರಮ್ಮ ದೇವಿ ದರ್ಶನಕ್ಕೆ ರಾಜ್ಯ ಹಾಗೂ ಹೊರ ರಾಜ್ಯ ಗಳಿಂದಲೂ ಪ್ರತಿದಿನವೂ ಭಕ್ತಸಾಗರ ಹರಿದು ಬರುತ್ತಿದೆ.

ಗ್ರಾಮದ ಹೃದಯ ಭಾಗದಲ್ಲಿರುವ ಬಸವೇಶ್ವರ ಸ್ವಾಮಿ ದೇವಾಲಯದಲ್ಲಿ ಭಾದ್ರಪದ ಮಾಸದ ತದಿಗೆ ದಿನದಂದು ಹಾರನಹಳ್ಳಿ ಕೋಡಿಮಠ ಶಿವಾನಂದ ಶಿವಯೋಗೀ ರಾಜೇಂದ್ರ ಸ್ವಾಮೀಜಿ ಸಮ್ಮುಖದಲ್ಲಿ ಪ್ರತಿಷ್ಠಾಪಿಸಿದ ದಿನದಿಂದಲೂ ಭಕ್ತರು ಅಪಾರ ಸಂಖ್ಯೆಯಲ್ಲಿ ಗ್ರಾಮಕ್ಕೆ ಆಗಮಿಸಿ ದೇವಿ ದರ್ಶನ ಪಡೆಯುತ್ತಿದ್ದಾರೆ.

ದಿನವಿಡೀ ನಿರಂತರವಾಗಿ ದೇವಿಯ ದರ್ಶನಕ್ಕೆ ಆವಕಾಶ ಕಲ್ಪಿಸಿದ್ದರೂ ಸಹ ಭಕ್ತರ ಸಂಖ್ಯೆಯ ಕಡಿಮೆಯಾಗ ದಿರುವುದು ಮಾತ್ರ ಈ ಬಾರಿಯ ವಿಶೇಷ. ಸೋಮವಾರ ಪಶ್ಚಿಮ ಬಂಗಾಳ, ಗುಜರಾತ್ ಮಂಗಳವಾರ ರಾಜಸ್ತಾನ ಮತ್ತು ರಾಜ್ಯದ ಮೂಲೆ ಮೂಲೆಯಿಂದ ಭಕ್ತರು ತಂಡೋಪ ತಂಡಗಳಲ್ಲಿ ಆಗಮಿಸಿ ದೇವಿಯ ದರ್ಶನ ಪಡೆಯುತ್ತಿದ್ದಾರೆ.

ಪ್ರತಿದಿನ 50 ಸಾವಿರಕ್ಕೂ ಹೆಚ್ಚು ಭಕ್ತರು ಸುಡು ಬಿಸಿಲನ್ನು ಲೆಕ್ಕಿಸದೆ ಸರತಿ ಸಾಲಿನಲ್ಲಿ ಒಂದು ಕಿ.ಮೀಗೂ ಹೆಚ್ಚು ಉದ್ದನೆಯ ಸಾಲಿನಲ್ಲಿ ಗಂಟೆಗಟ್ಟಲೆ ಕಾದು ನಿಂತು ದರ್ಶನ ಪಡೆದು ಹರಕೆ ಸಲ್ಲಿಸುತ್ತಿರುವ ದೃಶ್ಯ ಸಾಮಾನ್ಯವಾಗಿದೆ. ಪ್ರತಿಯೊಬ್ಬರಿಗೂ ದೇವಿ ದರ್ಶನದ ಅವಕಾಶ ಕಲ್ಪಿಸುವ ಉದ್ದೇಶದಿಂದ ಗೌರಮ್ಮ ದೇವಿ ಭಕ್ತ ಮಂಡಳಿಯವರು ವ್ಯವಸ್ಥೆ ಕಲ್ಪಿಸಿದ್ದಾರೆ.

ಸೀರೆ, ಅಕ್ಕಿ ಹಾಗೂ ಕರ್ಪೂರ ಪ್ರಿಯೆ ದೇವಿಗೆ ತಮ್ಮ ಇಷ್ಟಾರ್ಥ ಸಿದ್ದಿಗೆ ಮಾಡಿಕೊಂಡಿರುವ ಹರಕೆ ತೀರಿಸಲು ದೇವಾಲಯ ಮುಂಭಾಗದಲ್ಲಿರುವ ಕುಂಡದಲ್ಲಿ ಕರ್ಪೂರ ಹಚ್ಚುತ್ತಾರೆ. ದೇವಾಲಯದ ಮುಂಭಾಗದಲ್ಲಿರುವ ಆವರಣದಲ್ಲಿ ಅಕ್ಕಿ ಕೊಡುತ್ತಾರೆ. ಈಗ ಹರಕೆ ರೂಪದಲ್ಲಿ ಬಂದಿರುವ ಅಕ್ಕಿ ಸುಮಾರು 300 ಕ್ವಿಂಟಲ್‌ಗೂ ಅಧಿಕ ಎನ್ನಲಾಗಿದೆ.

ಸೆ.8ರಂದು ಚಂದ್ರ ಮಂಡಲೋತ್ಸವ:
ಸೆ.8ರಂದು ಗುರುವಾರ ಮಧ್ಯರಾತ್ರಿ 3ಗಂಟೆ ಮೇಲೆ ದೇವಾಲಯದ ಮುಂಭಾಗ ಚಂದ್ರಮಂಡಲೋತ್ಸವ ಹಾಗೂ ದುಗ್ಗಳೋತ್ಸವ ಗ್ರಾಮದ ದೇವರು ಗಳಾದ ತಿರುಮಲೇಶ್ವರ ಹಾಗೂ ಬಸವೇಶ್ವರ ಸ್ವಾಮಿ, ಚನ್ನಬಸವಣ್ಣ ದೇವರುಗಳ ಸಮ್ಮುಖದಲ್ಲಿ ವಿಜೃಂಭಣೆಯಿಂದ ಜರುಗಲಿದೆ.

ಸೆ.9 ರಂದು ಗೌರಮ್ಮ ವಿಸರ್ಜನೆ: ಸೆ.9ರಂದು ಬೆಳಿಗ್ಗೆ 8ಗಂಟೆಗೆ ಪುಷ್ಪಾಲಂಕೃತವಾದ ಮಂಟಪದಲ್ಲಿ ಗೌರಿ ದೇವಿ ಕೂರಿಸಿ ಗ್ರಾಮದಲ್ಲಿ ಮಂಗಲ ವಾದ್ಯದೊಂದಿಗೆ ಉತ್ಸವ ನಡೆಸಲಾಗುವುದು. ಸಂಜೆ 6ಗಂಟೆಗೆ ಗ್ರಾಮದ ಕಲ್ಯಾಣಿಯಲ್ಲಿ ದೇವಿಯನ್ನು ವಿಸರ್ಜಿಸಲಾಗುವುದು.

ಪ್ರತಿದಿನ ದೇವಿ ದರ್ಶನಕ್ಕೆ ಬರುವ ಭಕ್ತಾದಿಗಳಿಗೆ ಭಕ್ತ ಮಂಡಳಿ ಅನ್ನ ದಾಸೋಹದ ವ್ಯವಸ್ಥೆ ಮಾಡಿದೆ. ಅಲ್ಲದೆ ಪ್ರತಿ ದಿನ ರಾತ್ರಿ 11 ಗಂಟೆಯವರೆವಿಗೂ ನಡೆಯುತ್ತಿದೆ. ಅಲ್ಲದೆ ಹೆಚ್ಚು ಭಕ್ತರು ಬರುತ್ತಿರುದರಿಂದ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯವರು ವಿಶೇಷ ಬಸ್ ವ್ಯವಸ್ಥೆ ಕಲ್ಪಿಸಿದ್ದಾರೆ. ಜತೆಗೆ ರಕ್ಷಣಾ ಇಲಾಖೆ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT