ಚಿಕ್ಕಮಗಳೂರು: ಅಂಗನವಾಡಿ ಕಾರ್ಯಕರ್ತೆಯರಿಗೆ ಗೌರವಧನ ಬದಲು ಸಂಬಳ ನಿಗದಿಪಡಿಸಬೇಕು; ಸಮಾಜಕ್ಕೆ ಉತ್ತಮ ಸೇವೆ ಸಲ್ಲಿಸುತ್ತಿರುವ ಕಾರ್ಯಕರ್ತೆಯರಿಗೆ ಸೂಕ್ತ ಸಾಮಾಜಿಕ ಭದ್ರತೆ ಹಾಗೂ ಆರ್ಥಿಕ ಸೌಲಭ್ಯ ನೀಡಬೇಕು ಎಂದು ಎಐಟಿಯುಸಿ ರಾಜ್ಯ ಪ್ರಧಾನ ಕಾರ್ಯದರ್ಶಿ ರಾಧಾ ಸುಂದರೇಶ್ ಆಗ್ರಹಿಸಿದರು.
ನಗರದ ಎಂಇಎಸ್ ಕಾಲೇಜು ಸಭಾಂಗಣದಲ್ಲಿ ಅಂಗನವಾಡಿ ಕಾರ್ಯಕರ್ತೆಯರ-ಸಹಾಯಕಿಯರ ಫೆಡರೇಷನ್ ಮತ್ತು ಎಐಟಿಯುಸಿ ಸಮಾವೇಶವನ್ನು ಶನಿವಾರ ಉದ್ಘಾಟಿಸಿ ಅವರು ಮಾತನಾಡಿದರು.
ಅಂಗನವಾಡಿ ಕೆಲಸಗಳನ್ನು ಕಾರ್ಯಕರ್ತೆಯರು ಅತ್ಯಂತ ಶಿಸ್ತಿನಿಂದ ನಿರ್ವಹಿಸುತ್ತಿದ್ದರೂ ಸಾಕಷ್ಟು ತೊಂದರೆ ಎದುರಿಸುತ್ತಿದ್ದಾರೆ. ಸ್ಥಳೀಯ ರಾಜಕೀಯ ಪ್ರಭಾವ ಇವರ ಮೇಲೆ ಬೀಳುತ್ತಿದೆ. ಇಲಾಖೆ ಅಧಿಕಾರಿಗಳು ಕಾರ್ಯಕರ್ತೆಯರನ್ನು ವರ್ಗ ಮಾಡಿ ಶೋಷಿಸುತ್ತಿದ್ದಾರೆ. ಸಮೀಕ್ಷೆ ಕೆಲಸಗಳಿಗೂ ಇವರನ್ನು ಬಳಸಿಕೊಂಡು ಸಂಘವನ್ನು ಒಡೆಯುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇದೆಲ್ಲದರ ವಿರುದ್ಧ ಕಾರ್ಯಕರ್ತೆಯರು ಒಟ್ಟಾಗಿ ನಿಂತು ಹೋರಾಡಬೇಕು ಎಂದರು.
ಅಂಗನವಾಡಿ ಕಾರ್ಯಕರ್ತೆಯೊಬ್ಬರು ಇತ್ತೀಚೆಗೆ ಕೊಲೆಯಾಗಿದ್ದು, ಹಂತಕರನ್ನು ಈವರೆಗೂ ಪತ್ತೆ ಹಚ್ಚಿಲ್ಲ. ಪೊಲೀಸ್ ಇಲಾಖೆ ವೈಫಲ್ಯ ಎದ್ದು ಕಾಣುತ್ತಿದೆ. ಕಾರ್ಯಕರ್ತೆಯರಿಗೆ ಸೂಕ್ತ ರಕ್ಷಣೆ ಸರ್ಕಾರ ಒದಗಿಸಬೇಕು ಎಂದು ಆಗ್ರಹಿಸಿದರು.
ಜಿಲ್ಲಾ ಘಟಕ ಅಧ್ಯಕ್ಷ ಅಬ್ದುಲ್, ಕಮ್ಯುನಿಷ್ಟ್ ಮುಖಂಡ ರೇಣುಕಾರಾಧ್ಯ, ತಾಲ್ಲೂಕು ಕಾರ್ಯದರ್ಶಿ ಮಂಗಳ, ಉಪಾಧ್ಯಕ್ಷೆ ಗ್ರೇಟ್ ಫರ್ನಾಂಡೀಸ್, ಸೀತಾಶೆಟ್ಟಿ, ಶೇಷಮ್ಮ, ಜಯಶೇಖರ್ ಇದ್ದರು.