ಶಿವಮೊಗ್ಗ: ಗೌರಿ-ಗಣೇಶ, ರಂಜಾನ್ ಹಬ್ಬಕ್ಕೆ ನಗರ ಸಕಲ ಸಿದ್ಧತೆಯಲ್ಲಿ ತೊಡಗಿದೆ.
ಎಲ್ಲರ ವಿಘ್ನಗಳನ್ನು ನಿವಾರಿಸುವ ವಿನಾಯಕನ ಹಬ್ಬ ಆಚರಣೆಗೆ ಬೆಲೆ ಏರಿಕೆ ಬಿಸಿಯ ವಿಘ್ನ ಎದುರಾಗಿದೆ.
ಹೆಚ್ಚಿನ ಗಣೇಶನಮೂರ್ತಿಗಳು ನ್ಯಾಮತಿ, ಹಾರ್ನಳ್ಳಿಯಿಂದ ಮಾರುಕಟ್ಟೆಗೆ ಬಂದಿದ್ದು, 3ರಿಂದ 4 ಅಡಿ ಗಣಪಮೂರ್ತಿಗೆ 1,500 ರೂ. ನಿಂದ 2,000 ವರೆಗೂ ದರ ನಿಗದಿಪಡಿಸಲಾಗಿದೆ. ಗೌರಿಮೂರ್ತಿಯೂ ದುಬಾರಿಯಾಗಿದ್ದು, 50 ರೂ ನಿಂದ 70 ರೂ ಬೆಲೆ ಇದೆ. ಗೌರಿ ಗಣಪನ ತರಹೇವಾರಿ ಮೂರ್ತಿಗಳು ನಗರದ ಸೈನ್ಸ್ ಮೈದಾನದಲ್ಲಿ ಮಾರಾಟಕ್ಕಿದ್ದು, ನಾಗಸರ್ಪದ ಮೇಲೆ ವಿರಾಜಮಾನನಾದ ಗಣಪ, ಸಾಯಿಬಾಬಾ ಗಣಪ, ಲಕ್ಷ್ಮೀ ಗಣೇಶ ಸರಸ್ವತಿಯರು ಇರುವ ಮೂರ್ತಿಗಳು ಸಹ ಮಾರುಕಟ್ಟೆಯಲ್ಲಿ ಲಭ್ಯ.
ಅಲ್ಲದೇ ಈ ಬಾರಿ ಪರಿಸರ ಸ್ನೇಹಿ ವಾಟರ್ಪೇಂಟ್ ಗಣಪಮೂರ್ತಿಗಳೇ ಹೆಚ್ಚಾಗಿ ಕಂಡುಬಂದಿವೆ. ಇನ್ನೂ ಗೌರಿ- ಗಣೇಶರಿಗೆ ಬೇಕಾದ ಫಲ-ಪುಷ್ಪಗಳು, ಮೆರವಣಿಗೆಗೆ ಬಳಸುವ ಅಲಂಕಾರಿಕ ವಸ್ತುಗಳ ಬೆಲೆಗಳು ಹೆಚ್ಚಳವಾಗಿದ್ದು, ಸೇಬು ಕೆ.ಜಿ.ಗೆ 100ರೂ ಗಡಿ ದಾಟಿದೆ.
ದಾಳಿಂಬೆ 120 ರೂ, ದ್ರಾಕ್ಷಿ 100 ರೂ, ಸೀತಾಫಲ 60 ರೂ, ಕಿತ್ತಲೆ 30 ರೂ, ಪೇರಲಹಣ್ಣು 30 ರೂ, ಬಾಳೆಹಣ್ಣು ಕೆ.ಜಿ.ಗೆ 25 ರಿಂದ 40 ರೂ ಮುಟ್ಟಿದ್ದು, ಇನ್ನೂ ಹೆಚ್ಚಾಗುವ ನಿರೀಕ್ಷೆ ಇದೆ ಎನ್ನುತ್ತಾರೆ ಹಣ್ಣಿನ ವ್ಯಾಪಾರಿ ಮುರುಗೇಶಪ್ಪ.
ಹಬ್ಬಕ್ಕೆ ಬೇಕಾದ ಬಾಳೆಕಂಬ, ಹೂವಿನ ಬೆಲೆಯೂ ತುಟ್ಟಿಯಾಗಿವೆ. ರಂಜಾನ್ ಹಬ್ಬಕ್ಕೂ ಭರದ ಸಿದ್ಧತೆಗಳು ನಡೆದಿದ್ದು, ಮುಸ್ಲಿಂ ಬಾಂಧವರು ಹಣ್ಣು-ಹಂಪಲು ಖರೀದಿಸುವಲ್ಲಿ ನಿರತರಾಗಿದ್ದರು.