ಗೌರಿಬಿದನೂರು: ಎಚ್ಐವಿ ಮತ್ತು ಏಡ್ಸ್ ಎಲ್ಲೆಡೆ ವ್ಯಾಪಕವಾಗಿ ಹರಡುತ್ತಿದ್ದು, ಇದರ ಕುರಿತು ಪ್ರತಿಯೊಬ್ಬರು ಜಾಗೃತರಾಗಬೇಕಿದೆ. ತಾಲ್ಲೂಕಿನಲ್ಲಿ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸುವುದರ ಮೂಲಕ ಜನರಲ್ಲಿ ರೋಗದ ಅರಿವು ಮೂಡಿಸಬೇಕಿದೆ ಎಂದು ಶಾಸಕ ಎನ್.ಎಚ್.ಶಿವಶಂಕರ ರೆಡ್ಡಿ ತಿಳಿಸಿದರು.
ಎಚ್ಐವಿ ಮತ್ತು ಏಡ್ಸ್ ಕುರಿತು ಜಾಗೃತಿ ಮೂಡಿಸುವ ಉದ್ದೇಶದಿಂದ ಪಟ್ಟಣದಲ್ಲಿ ಮಂಗಳವಾರ ಸಾರ್ವಜನಿಕ ಆಸ್ಪತ್ರೆ ಸಹಯೋಗದಲ್ಲಿ ಆಚಾರ್ಯ ಪ್ರಥಮ ದರ್ಜೆ ಕಾಲೇಜು ಆಯೋಜಿಸಿದ್ದ ಕಾಲೇಜು ವಿದ್ಯಾರ್ಥಿನಿಯರ ಬೃಹತ್ ಜಾಥಾಗೆ ಚಾಲನೆ ನೀಡಿ ಮಾತನಾಡಿದ ಅವರು, ಎಚ್ಐವಿ ಮತ್ತು ಏಡ್ಸ್ ನಿಯಂತ್ರಣಕ್ಕೆ ಈವರೆಗೆ ಲಸಿಕೆ ಕಂಡು ಹಿಡಿಯಲಾಗಿಲ್ಲ.
ರೋಗ ಹರಡದಂತೆ ತಡೆಯಲು ಪ್ರತಿಯೊಬ್ಬರು ಜಾಗೃತರಾಗಬೇಕಿದೆ ಎಂದರು.
ಅಸುರಕ್ಷಿತ ಲೈಂಗಿಕ ಸಂಪರ್ಕ, ಸೋಂಕಿತ ಸೂಜಿ, ಸಿರಂಜು, ಹರಿತ ಸಲಕರಣೆಗಳನ್ನು ಸಂಸ್ಕರಿಸದೆ ಬಳಕೆ ಮಾಡಿದಲ್ಲಿ ರೋಗ ಹರಡುತ್ತದೆ. ರಕ್ತಪರೀಕ್ಷೆ, ರಕ್ತದಾನ ಮತ್ತು ರಕ್ತ ಪಡೆಯುವಾಗ ಎಚ್ಚರ ವಹಿಸಬೇಕು ಎಂದು ಅವರು ತಿಳಿಸಿದರು.
ಪುರಸಭೆ ಅಧ್ಯಕ್ಷೆ ಪ್ರಮೀಳಾ ಬಾಲಾಜಿ, ಉಪಾಧ್ಯಕ್ಷ ವಿ.ರಮೇಶ್, ಪುರಸಭೆ ಸದಸ್ಯ ಇಸ್ತೂರಿ ಸತೀಶ್, ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ವೆಂಕಟರವಣ, ಸಾರ್ವಜನಿಕ ಆಸ್ಪತ್ರೆಯ ವೈದ್ಯ ಡಾ,ಶಾಂಸುಂದರ್, ಆಸ್ಪತ್ರೆಯ ಆಪ್ತ ಸಮಾಲೋಚಕ ಅರೀಪುಲ್ಲಾ,ಆಚಾರ್ಯ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಪ್ರಾಂಶುಪಾಲ ಸಂಪತ್ಕುಮಾರ್, ಪ್ರಾಧ್ಯಾಪಕರಾದ ಅಶ್ವತ್ಥರೆಡ್ಡಿ, ವರಹಾಮೂರ್ತಿ ಮತ್ತಿತರರು ಪಾಲ್ಗೊಂಡಿದ್ದರು.