ಚಾಮರಾಜನಗರ: ತಾಲ್ಲೂಕಿನ ಇರಸವಾಡಿ ಗ್ರಾಮ ಪಂಚಾಯಿತಿಯ ವಿವಿಧ ಯೋಜನೆಗಳಿಗೆ ಮಂಜೂರಾದ ಹಣದಲ್ಲಿ ರೂ. 13.28 ಲಕ್ಷ ದುರುಪಯೋಗ ಮಾಡಿಕೊಂಡಿರುವ ಆರೋಪ ಎದುರಿಸುತ್ತಿರುವ ಅಧ್ಯಕ್ಷ ಹಾಗೂ ಮೂವರು ಪಂಚಾಯಿತಿ ಕಾರ್ಯರ್ಶಿಗಳು ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಚಾಮರಾಜನಗರದ ತ್ವರಿತ ವಿಲೇವಾರಿ ನ್ಯಾಯಾಲಯದ ನ್ಯಾಯಾಧೀಶ ಕೆ.ಎಚ್.ಮಲ್ಲಪ್ಪ ಬುಧವಾರ ತಿರಸ್ಕರಿಸಿದರು.
ತಾಲ್ಲೂಕಿನ ಇರಸವಾಡಿಯ ಅಂಬೇಡ್ಕರ್, ಆಶ್ರಯ, ಇಂದಿರಾ ಆವಾಸ್ ವಸತಿ ಯೋಜನೆಗಳಿಗೆ ಹಾಗೂ ಶೌಚಾಲಯ ನಿರ್ಮಿಸಲು ಮಂಜೂರಾದ ಹಣದ ಪೈಕಿ ಪಂಚಾಯಿತಿ ಅಧ್ಯಕ್ಷ ಶಬರಿಗಿರೀಶ್, ಮಾಜಿ ಅಧ್ಯಕ್ಷ ಮುದ್ದಗಾಂಶೆಟ್ಟಿ, ಕಾರ್ಯದಶಿಗಳಾದ ಕೆ.ಎಸ್.ವೆಂಕಟೇಶ್, ಚನ್ನಬಸವಯ್ಯ ಹಾಗೂ ಚಿಕ್ಕಮಾದಯ್ಯ ನಕಲಿ ದಾಖಲೆ ಸೃಷ್ಟಿಸಿದ್ದರು. ಬಳಿಕ ಫಲಾನುಭವಿಗಳಿಗೆ ಹಣ ನೀಡಿದಂತೆ ತೋರಿಸಿ ಒಟ್ಟು ರೂ. 13.28 ಲಕ್ಷವನ್ನು ದುರುಪಯೋಗ ಮಾಡಿಕೊಂಡಿರುವ ಅಂಶವನ್ನು ಪಂಚಾಯಿತಿ ನೋಡಲ್ ಅಧಿಕಾರಿಗಳು ಪರಿಶೀಲಿಸಿ ತಾಲ್ಲೂಕು ಪಂಚಾಯಿತಿಗೆ ವರದಿ ಸಲ್ಲಿಸಿದ್ದರು.
ಪಂಚಾಯಿತಿ ಅಧ್ಯಕ್ಷ, ಕಾರ್ಯದರ್ಶಿಗಳು 2006-07 ರಿಂದ 2009-10ನೇ ಸಾಲಿನ ಅವಧಿಯಲ್ಲಿ ಅಕ್ರಮವೆಸಗಿ ಹಾಗೂ ಹಣ ದುರುಪಯೋಗ ಮಾಡಿಕೊಂಡಿರುವ ಕುರಿತು ಚಾಮರಾಜನಗರ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಡಾ.ಎಂ.ಕೃಷ್ಣರಾಜು ಅಧ್ಯಕ್ಷ, ಕಾರ್ಯದರ್ಶಿಗಳ ವಿರುದ್ಧ ಚಾಮರಾಜನಗರ ಪೂರ್ವ ಠಾಣೆಗೆ ದೂರು ಸಲ್ಲಿಸಿದ್ದರು. ಎಸ್ಐ ಶ್ರೀಕಾಂತ ತನಿಖೆ ಕೈಗೊಂಡಿದ್ದಾರೆ. ಸರ್ಕಾರದ ಪರವಾಗಿ ಅಭಿಯೋಜಕ ಬಸವರಾಜ ಹಾಡೇದಗಡ್ಡಿ ವಕಾಲುತು ವಹಿಸಿದ್ದರು.