ಕೊಪ್ಪಳ: ಸಮರ್ಪಕ ಕುಡಿಯುವ ನೀರು ಪೂರೈಸುವಂತೆ ಒತ್ತಾಯಿಸಿ ತಾಲ್ಲೂಕಿನ ಬಹದ್ದೂರಬಂಡಿ ಗ್ರಾಮದಲ್ಲಿ ಶನಿವಾರ ಮಹಿಳೆಯರು ಪ್ರತಿಭಟನೆ ನಡೆಸಿದರು.
ಖಾಲಿ ಕೊಡಗಳೊಂದಿಗೆ ಗ್ರಾಮ ಪಂಚಾಯಿತಿ ಕಚೇರಿ ಮುಂದೆ ಧರಣಿ ನಡೆಸಿದ ಮಹಿಳೆಯರು, ಹಲವಾರು ಬಾರಿ ಮನವಿ ಮಾಡಿದರೂ ಗ್ರಾಪಂ ನೀರು ಪೂರೈಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. 15 ದಿನಗಳಿಂದ ಗ್ರಾಮದಲ್ಲಿ ನೀರು ಪೂರೈಕೆಯಾಗುತ್ತಿಲ್ಲ. ಈ ಬಗ್ಗೆ ಕೇಳಿದರೆ ಗ್ರಾಮ ಪಂಚಾಯಿತಿಯಿಂದ ಯಾವುದೇ ಪ್ರತಿಕ್ರಿಯೆ ಸಿಗುತ್ತಿಲ್ಲ ಎಂದು ದುರುಗಮ್ಮ ಕರಮುಡಿ, ಮಮ್ತಾಜ್ ಹಿರೇಮನ್ನಾಪುರ ಆಕ್ರೋಶ ವ್ಯಕ್ತಪಡಿಸಿದರು.
ಉದ್ಯೋಗ ಖಾತರಿ ಮತ್ತು ಬರ ಪರಿಹಾರ ಹೋರಾಟ ಸಮಿತಿ ಸಂಚಾಲಕರಾದ ಮಹ್ಮದ್ರಫಿ ಹಿರೇಮಸೂತಿ, ವೀರಭದ್ರಯ್ಯ ಗಣಾಚಾರ, ಬಸವರಾಜ ಕುರಿ ಹಾಗೂ ಪ್ರಭು ಹೊಸಮನಿ ಇದೇ ಆರೋಪ ಮಾಡಿದರು.
ನೀರು ಪೂರೈಕೆ ಸ್ಥಗಿತಗೊಂಡ ಬಗ್ಗೆ ಕೇಳಿದರೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಮತ್ತು ಕಾರ್ಯದರ್ಶಿಗಳಿಂದ ಸಮರ್ಪಕ ಉತ್ತರ ಸಿಗುತ್ತಿಲ್ಲ. ನೀರು ಪೂರೈಕೆಗೆ ಬಜೆಟ್ ಇಲ್ಲ ಎಂಬ ಎನ್ನುತ್ತಾರೆಯೇ ಹೊರತು ಸಮಸ್ಯೆ ನಿವಾರಣೆಗೆ ಮುಂದಾಗುತ್ತಿಲ್ಲ ಎಂದು ದೂರಿದರು.
ಧರಣಿ ನಡೆಯುತ್ತಿದ್ದ ಸ್ಥಳಕ್ಕೆ ಧಾವಿಸಿದ ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಎಂ.ಎಂ.ಹುಸೇನ್, ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡುವುದಾಗಿ ಭರವಸೆ ನೀಡಿದ ನಂತರ ಮಹಿಳೆಯರು ಪ್ರತಿಭಟನೆಯನ್ನು ಹಿಂದಕ್ಕೆ ಪಡೆದರು. ರೇಣುಕಮ್ಮ ಹಲಗೇರಿ, ಹುಲಿಗೆಮ್ಮ ಪೂಜಾರ, ಮೆಹಬೂಬಿ, ಹುಸೇನಬಿ ಪ್ರತಿಭಟನೆಯ ನೇತೃತ್ವ ವಹಿಸಿದ್ದರು.