ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ರಾಪಂ. ಕಚೇರಿಗೆ ಬೀಗ, ಪ್ರತಿಭಟನೆ

Last Updated 16 ಮಾರ್ಚ್ 2011, 8:50 IST
ಅಕ್ಷರ ಗಾತ್ರ

ಕೊಣನೂರು: ಉದ್ಯೋಗ ಖಾತ್ರಿ ಯೋಜನೆಯಡಿ ದುಡಿದ ಕಾರ್ಮಿಕರಿಗೆ ಕೂಲಿ ಹಣ ಪಾವತಿಸದೆ ವಂಚಿಸಲಾಗುತ್ತಿದೆ ಎಂದು ಆರೋಪಿಸಿ ಗ್ರಾಮಸ್ಥರು ಮಂಗಳವಾರ ಬನ್ನೂರು ಗ್ರಾ.ಪಂ. ಅಧ್ಯಕ್ಷರು, ಉಪಾಧ್ಯಕ್ಷರು, ಪಿಡಿಓ ಹಾಗೂ ಸದಸ್ಯರನ್ನು ಕಚೇರಿಯೊಳಗೆ ಕೂಡಿಹಾಕಿ ಬೀಗ ಜಡಿದು ದಿಢೀರ್ ಪ್ರತಿಭಟಿಸಿದ ನಡೆಸಿದರು.

ಗ್ರಾ.ಪಂ. ಅಧ್ಯಕ್ಷ ಎ.ಜೆ. ವೇದಮೂರ್ತಿ ಅಧ್ಯಕ್ಷತೆಯಲ್ಲಿ ಸಾಮಾನ್ಯ ಸಭೆ ನಡೆಯುತ್ತಿದ್ದ ವೇಳೆಯೇ ಕಚೇರಿಗೆ ನುಗ್ಗಿದ ಗ್ರಾಮಸ್ಥರು ಉದ್ಯೋಗ ಖಾತ್ರಿ ಯೋಜನೆಯಡಿ ದುಡಿದ ಕೂಲಿ ಕಾರ್ಮಿಕರಿಗೆ ತಕ್ಷಣ ಹಣ ಬಿಡುಗಡೆಗೆ ಒತ್ತಾಯಿಸಿದರು. ಈ ಬಗ್ಗೆ ಅಗತ್ಯ ಕ್ರಮಕ್ಕೆ ಮುಂದಾಗುವಂತೆ ಪಿ.ಡಿ.ಓ. ಹಾಗೂ ಕೆಲ ಸದಸ್ಯರೊಡನೆ ಮಾತಿನ ಚಕಮಕಿ ನಡೆಸಿದರು.

ತಾಂತ್ರಿಕ ತೊಂದರೆಯಿಂದ ನಡೆದಿರುವ ಕಾಮಗಾರಿಗೆ ಹಣ ಬಿಡುಗಡೆಯಾಗಿಲ್ಲ. ನಿಯಮ ಉಲ್ಲಂಘನೆ ಮಾಡಿ ಹಣ ಪಾವತಿಗೆ ಮುಂದಾದರೆ ನಾವು ಜೈಲಿಗೆ ಹೋಗಬೇಕಾಗುತ್ತದೆ ಎಂದು ಅಧ್ಯಕ್ಷರು ಹಾಗೂ ಪಿಡಿಓ ಉತ್ತರ ನೀಡಿದರು. ಈ ಮಾತಿಗೆ ಸಿಟ್ಟಾದ ಗ್ರಾಮಸ್ಥರು ಎಲ್ಲ ಸದಸ್ಯರನ್ನು ಕಚೇರಿಯೊಳಗೆ ಕೂಡಿಟ್ಟು ಬಿಗ ಜಡಿದು ಪ್ರತಿಭಟನೆ ಆರಂಭಿಸಿ ಅಧಿಕಾರಿಗಳ ವಿರುದ್ದ ಘೋಷಣೆ ಕೂಗಿದರು.

2009- 10ನೇ ಸಾಲಿನಲ್ಲಿ ಈ ಯೋಜನೆಯಡಿ ದುಡಿದ ಕಾರ್ಮಿಕರಿಗೆ ಇದುವರೆಗೂ ಕೂಲಿ ಹಣ ಪಾವತಿಸಿಲ್ಲ. ಹೆಸರು ನೋಂದಾಯಿಸಿ ಕಾನೂನು ಪ್ರಕಾರ ದುಡಿದರೂ ನೂರಾರು ಕಾರ್ಮಿಕರು ಕೂಲಿ ಹಣಕ್ಕಾಗಿ ಪಂಚಾಯಿತಿಗೆ ನಿತ್ಯ ಅಲೆಯುತ್ತಿದ್ದಾರೆ ಎಂದು ದೂರಿದರು.ತಾವು ಅಧಿಕಾರ ವಹಿಸಿಕೊಳ್ಳುವ ಮುಂಚೆ ಅಂದಿನ ಪಿಡಿಓ ಯೋಜನೆಯಡಿ ನಡೆಸಿರುವ ಕಾಮ ಗಾರಿಯ ಎಂ.ಬಿ. ತಯಾರಿಸಿದ್ದಾರೆ. ಆದರೆ ಕೂಲಿ ಮಾಡಿದ ಕಾರ್ಮಿಕರ ದಿನದ ಹಾಜರಾತಿ ದಾಖಲಿಸಿಲ್ಲ. ಈ ನಡುವೆ ಕಾಮಗಾರಿ ಎಂ.ಬಿ. ಬರೆಸಿ ಕೊಂಡು ಸಹಿ ಹಾಕಿದ ಸಂಬಂಧಪಟ್ಟ ಇಲಾಖೆಯ ಎಂಜಿನಿಯರ್ ಕೂಡ ವರ್ಗವಾಗಿದ್ದಾರೆ. ತಾಂತ್ರಿಕ ತೊಂದರೆ ಕಾರಣ ಬಿಡುಗಡೆ ಮಾಡಲು ಬರುವು ದಿಲ್ಲ. ಹೀಗಾಗಿ ಯಾವುದೇ ಕಾರಣಕ್ಕೂ ಕೂಲಿ ಹಣ ಪಾವತಿಸಲು ಸಾಧ್ಯವಿಲ್ಲ ಎಂದು ಪಿಡಿಓ ಸಂತೋಷ್ ಕುಮಾರ್ ಹಾಗೂ ಅಧ್ಯಕ್ಷ ವೇದಮೂರ್ತಿ ‘ಪ್ರಜಾವಾಣಿ’ಗೆ ತಿಳಿಸಿದರು.

ತಾ.ಪಂ. ಇ.ಓ. ನಾಗರಾಜು ಸಂಜೆ 6ಕ್ಕೆ ಸ್ಥಳಕ್ಕೆ ಧಾವಿಸಿ ಪೊಲೀಸರ ಸಮ್ಮುಖದಲ್ಲಿ ಕಚೇರಿ ಬೀಗ ತೆರೆದರು. ಯೋಜನೆಯಡಿ ನಡೆದ ಕಾಮಗಾರಿಗಳಲ್ಲಿ ನಿಯಮ ಉಲ್ಲಂಘಿಸಲಾಗಿದೆ. ಹೀಗಾಗಿ ತಾಂತ್ರಿಕ ತೊಂದರೆ ಕಾಣಿಸಿಕೊಂಡು ಹಣ ಬಿಡುಗಡೆ ಮಾಡಲು ಸಾಧ್ಯವಾಗಿಲ್ಲ ಎಂದು ಗ್ರಾಮಸ್ಥರನ್ನು ಸಮಾಧಾನ ಪಡಿಸಲು ಯತ್ನಿಸಿದರು.
ಇ.ಓ. ಮಾತಿಗೆ ಒಪ್ಪದ ಗ್ರಾಮಸ್ಥರು ಯೋಜನೆಯಡಿ ದುಡಿದಿರುವ ಕೂಲಿ ಕಾರ್ಮಿಕರಿಗೆ ತಕ್ಷಣ ಹಣ ಪಾವತಿ ಮಾಡಬೇಕು ಎಂದು ಪಟ್ಟುಹಿಡಿದರು. ರಾತ್ರಿ ಏಳು ಗಂಟೆವರೆಗೆ ಗ್ರಾಮಸ್ಥರು ಮತ್ತು ಅಧಿಕಾರಿಗಳ ನಡುವೆ ಮಾತಿನ ಚಕಮಕಿ ಸಾಗಿತ್ತು. ಶೀಘ್ರ ಕೂಲಿ ಹಣ ಬಿಡುಗಡೆ ಮಾಡದಿದ್ದರೆ ಮುಂದೆ ಹೋರಾಟ ತೀವ್ರಗೊಳಿಸುವುದಾಗಿ ಎಚ್ಚರಿಸಿದ ಗ್ರಾಮಸ್ಥರು ಪ್ರತಿಭಟನೆಯನ್ನು ತಾತ್ಕಾಲಿಕವಾಗಿ ಹಿಂಪಡೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT