ಶಹಾಪುರ: ಸರ್ಕಾರದ ಆದೇಶದಂತೆ ಹೊಸ ಪರಿಷ್ಕೃತ ವೇತನ ಜಾರಿಗೆಗೊಳಿಸಬೇಕು ಎಂಬುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಸೋಮವಾರ ಗ್ರಾಮ ಪಂಚಾಯಿತಿ ನೌಕರರ ಸಂಘದ ಸದಸ್ಯರು ಧರಣಿ ನಡೆಸಿದರು.
ಸರ್ಕಾರದ ಆದೇಶದಂತೆ ಗ್ರಾಮ ಪಂಚಾಯಿತಿ ಪ್ರತ್ಯೇಕ ಖಾತೆ ತೆರೆದು ಬಿಡುಗಡೆಯಾದ ಅನುದಾನವನ್ನು ಜಮಾ ಮಾಡಿ ವೇತನ ಪಾವತಿಸಬೇಕು. ಪ್ರತಿ ಗ್ರಾಮ ಪಂಚಾಯಿತಿಯಿಂದ ಸಿಬ್ಬಂದಿ ಪ್ರಸ್ತಾವನೆ ತರಿಸಿ ತಾಲ್ಲೂಕು ಪಂಚಾಯಿತಿ ಮೂಲಕ ಜಿಲ್ಲಾ ಪಂಚಾಯಿತಿಗೆ ಅನುಮೋದನೆಗಾಗಿ ಸಲ್ಲಿಸಬೇಕು. ಬಿಲ್ ಕಲೆಕ್ಟರ್ ವೃಂದದಿಂದ ಗ್ರೇಡ್-2 ಕಾರ್ಯದರ್ಶಿ ಹುದ್ದೆಗೆ ಶೇ.100ರಷ್ಟು ಮುಂಬಡ್ತಿ ನೀಡಬೇಕು.ಸೇವಾ ಜೇಷ್ಠತೆ ಆಧಾರದ ಮೇಲೆ ನೇಮಕಾತಿ ನಡೆಸಬೇಕೆಂದು ಧರಣಿ ನಿರತರು ಆಗ್ರಹಿಸಿದರು.
ಧರಣಿಯಲ್ಲಿ ಗ್ರಾಮ ಪಂಚಾಯಿತಿ ನೌಕರ ಸಂಘದ ತಾಲ್ಲೂಕು ಅಧ್ಯಕ್ಷ ಚಂದಪ್ಪ ಕಿಲಾರಿ, ಕಾರ್ಯದರ್ಶಿ ಗೋವಿಂದ.ಎನ್. ಖಾನಾಪುರ, ಜಿಲ್ಲಾ ಉಪಾಧ್ಯಕ್ಷ ಅಬ್ದುಲಬಾಷಾ ಚೌದ್ರಿ ಮತ್ತಿತರರು ಭಾಗವಹಿಸಿದ್ದರು.