ಮಳವಳ್ಳಿ:ಪ್ರತಿ ಮನೆಯಲ್ಲಿಯೂ ಶೌಚಾಲಯ ಇರುವುದು ಅವಶ್ಯ ಎಂದು ಜಿಲ್ಲಾ ಪಂಚಾಯಿತಿ ಪ್ರಭಾರ ಯೋಜನಾಧಿಕಾರಿ ಡಾ. ಎಚ್.ಪಿ.ಮಂಜುಳಾ ಭಾನುವಾರ ತಿಳಿಸಿದರು.ತಾಲ್ಲೂಕಿನ ಕೆಂಬೂತಗೆರೆಯಲ್ಲಿ ಶಾಂತಿ ಪದವಿ ಕಾಲೇಜಿನ ಎನ್ಎಸ್ಎಸ್ ಘಟಕವು ಆಯೋಜಿಸಿರುವ ವಿಶೇಷ ವಾರ್ಷಿಕ ಶಿಬಿರದಲ್ಲಿ ಮಾತನಾಡಿ ಗ್ರಾಮ ನೈರ್ಮಲ್ಯ ಕಾಪಾಡುವಲ್ಲಿ ಸಾಮೂಹಿಕ ಹೊಣೆಗಾರಿಕೆ ಅಗತ್ಯ ಎಂದು ಹೇಳಿದರು.
ತಹಶೀಲ್ದಾರ್ ಬಿ.ವಾಣಿ ಮಾತನಾಡಿ, ಸಾಮೂಹಿಕ ಭಾಗಿತ್ವದಿಂದ ಸರ್ಕಾರದ ಸವಲತ್ತುಗಳನ್ನು ಸಾರ್ವಜನಿಕರಿಗೆ ತಲುಪಿಸಲು ಸಾಧ್ಯವಾಗುತ್ತದೆ.ಯಾವುದೇ ಸೌಲಭ್ಯವನ್ನು ಬಲವಂತವಾಗಿ ನೀಡುವುದಕ್ಕಿಂತ ಮೊದಲು ಅದರ ಬಗ್ಗೆ ಅರಿವು ಮೂಡಿಸಿ ನಂತರ ನೀಡಿದರೆ ಉತ್ತಮ ಫಲಿತಾಂಶ ನಿರೀಕ್ಷಿಸಬಹುದು.ಗ್ರಾಮದಲ್ಲಿ ಶಿಬಿರದ ಮೂಲಕ ವಿದ್ಯಾರ್ಥಿಗಳು ಮಾಡುವ ಸ್ವಚ್ಛತಾ ಕಾರ್ಯವನ್ನು ಗ್ರಾಮಸ್ಥರು ಸಹ ಹೀಗೆಯೇ ಮುಂದುವರಿಸಿಕೊಂಡು ಹೋಗಬೇಕು ಎಂದು ಸಲಹೆ ನೀಡಿದರು.
ಜಿಲ್ಲಾ ಪಂಚಾಯಿತಿ ಮತ್ತು ತಾಲ್ಲೂಕು ಪಂಚಾಯಿತಿ ಸಹಯೋಗದಲ್ಲಿ ಎನ್ಎಸ್ಎಸ್ ವಿದ್ಯಾರ್ಥಿಗಳು ಗ್ರಾಮದಲ್ಲಿ 140ಕ್ಕೂ ಹೆಚ್ಚಿನ ಮನೆಗಳಿಗೆ ಶೌಚಾಲಯ ನಿರ್ಮಿಸಲು ಮುಂದಾಗಿದ್ದು, ಈಗಾಗಲೇ 70 ಮನೆಗಳಲ್ಲಿ ಶೌಚಾಲಯ ನಿರ್ಮಿಸಿದ್ದಾರೆ. ಶಾಲಾಭಿವೃದ್ಧಿಗೆ ಗ್ರಾಮಸ್ಥರು ನೀಡಿದ್ದ ಸ್ಥಳದಲ್ಲಿ ಸ್ವಚ್ಛತಾ ಕಾರ್ಯವನ್ನು ಶಿಬಿರಾರ್ಥಿಗಳು ಕೈಗೊಂಡಿದ್ದಾರೆ.