ದೊಡ್ಡಬಳ್ಳಾಪುರ: ಗಾಂಧಿ ಕಂಡ ಗ್ರಾಮ ಸ್ವರಾಜ್ಯದ ಕನಸು ನನಸಾಗಬೇಕಾದರೆ ಯುವಕರು ಗ್ರಾಮಗಳ ಅಭಿವೃದ್ಧಿ ಬಗ್ಗೆ ಚಿಂತಿಸಬೇಕು ಎಂದು ರಾಜ್ಯ ಕೊಳೆಗೇರಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಹಾಗೂ ಶಾಸಕ ಜೆ.ನರಸಿಂಹಸ್ವಾಮಿ ಹೇಳಿದರು.
ತಾಲ್ಲೂಕಿನ ಎದ್ದಲಹಳ್ಳಿಯಲ್ಲಿ ದೇವರಾಜ ಅರಸ್ ವ್ಯವಹಾರ ನಿರ್ವಹಣಾ ಮಹಾವಿದ್ಯಾಲಯ ಹಮ್ಮಿಕೊಂಡಿದ್ದ ಎನ್ಎಸ್ಎಸ್ ಶಿಬಿರದ ಸಮಾರೋಪದಲ್ಲಿ ಮಾತನಾಡಿದ ಅವರು, ಪಠ್ಯಗಳಲ್ಲಿ ಓದುವ ಹಳ್ಳಿಗಾಡಿನ ಚಿತ್ರಣ ಮತ್ತು ಹಳ್ಳಿಗಳ ನೈಜ ಸ್ಥಿತಿ ಬೇರೆ ಬೇರೆಯಾಗಿರುತ್ತದೆ.
ಹಳ್ಳಿ ಬದುಕು, ಜೀವನ ಶೈಲಿಯನ್ನು ಅಧ್ಯಯನ ಮಾಡಬೇಕು. ಎನ್ಎಸ್ಎಸ್ ಶಿಬಿರಗಳು ಕೇವಲ ಶ್ರಮದಾನ ಉದ್ದೆೀಶಕ್ಕೆ ಮಾತ್ರ ಸೀಮಿತವಾಗದೆ, ಜನಜಾಗೃತಿ, ಸಾಮಾಜಿಕ ಅರಿವು ಮೂಡಿಸುವ ಉದ್ದೇಶ ಹೊಂದಬೇಕು ಎಂದು ಹೇಳಿದರು.
ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಎಚ್.ಎಸ್.ಅಶ್ವತ್ಥನಾರಾಯಣ ಕುಮಾರ್ ಮಾತನಾಡಿ, ಗ್ರ್ರಾಮೀಣ ಸಂಸ್ಕೃತಿಯ ವಿವೇಚನೆ ಮತ್ತು ಅರಿವು ಯುವಜನರಿಗಿರಬೇಕು. ಬದಲಾಗುತ್ತಿರುವ ಸಾಂಸ್ಕೃತಿಕ ಮತ್ತು ಸಾಮಾಜಿಕ ಸಂದರ್ಭಕ್ಕೆ ತಕ್ಕಂತೆ ಯುವ ಮನಸ್ಸುಗಳು ಗ್ರ್ರಾಮ ಸುಧಾರಣೆಯತ್ತ ಲಕ್ಷ್ಯವಹಿಸಬೇಕು ಎಂದರು.
ಎಸ್ಡಿಯುಐಎಂ ನಿರ್ದೇಶಕ ಜೆ.ರಾಜೇಂದ್ರ, ಜೀವನದಲ್ಲಿ ಶಿಸ್ತು, ಪ್ರಾಮಾಣಿಕತೆ, ಬದ್ದತೆಗಳನ್ನು ಬೆಳೆಸಿಕೊಂಡು ಮಲಿನಗೊಂಡಿರುವ ವ್ಯವಸ್ಥೆಯನ್ನು ಶುದ್ದಿಕರಿಸಬೇಕಿದೆ ಎಂದರು.
ತಾ.ಪಂ ಮಾಜಿ ಉಪಾಧ್ಯಕ್ಷ ಗೋಪಾಲ ನಾಯಕ್, ಕರವೇ ತಾಲ್ಲೂಕು ಕಾರ್ಯಾಧ್ಯಕ್ಷ ಟಿ.ಜಿ.ಮಂಜುನಾಥ್, ಎಸ್ಡಿಯುಐಎಂ ಪ್ರಾಂಶುಪಾಲ ಕೆ.ಎನ್.ಶ್ರೀನಿವಾಸನ್, ಗ್ರಾ. ಪಂ ಉಪಾಧ್ಯಕ್ಷ ವೆಂಕಟೇಶ್, ಎಂಪಿಸಿಎಸ್ ಅಧ್ಯಕ್ಷ ಮುನಿರಾಜು, ಕಾರ್ಯದರ್ಶಿ ಶ್ರೀನಿವಾಸ್, ಗ್ರಾ. ಪಂ ಸದಸ್ಯೆ ಜಯಮ್ಮ, ಮುತ್ತಣ್ಣ, ಮುಖ್ಯ ಶಿಕ್ಷಕ ಮಂಜುನಾಥ್, ಶಿಬಿರಾಧಿಕಾರಿ ಎಂ. ಪ್ರಸನ್ನಕುಮಾರ್, ಸಹ ಶಿಬಿರಾಧಿಕಾರಿ ಕೆ.ಆರ್.ರವಿಕಿರಣ್, ಚಿಕ್ಕಣ್ಣ ಮತ್ತಿತರರು ಹಾಜರಿದ್ದರು.