ಅರಸೀಕೆರೆ: ಎತ್ತುಗಳ ಕೊರತೆ, ನಿರೀಕ್ಷಿತ ಬೆಳೆಯ ಅಲಭ್ಯತೆ, ರೈತರ ಸೋಮಾರಿತನ, ಒಕ್ಕಲು ಯಂತ್ರಗಳಿಗೆ ಬಾಡಿಗೆ ತೆರಲು ಸಾಧ್ಯವಾಗದ ಅಸಹಾಯಕತೆಯ ನಡುವೆಯೂ ಕೆಲವು ಗ್ರಾಮ ಗಳಲ್ಲಿ `ಕಣಸುಗ್ಗಿ~ ಸಂಭ್ರಮ ಗರಿಗೆದರುತ್ತಿದೆ.
ಗ್ರಾಮೀಣ ಭಾಗದಲ್ಲಿ ತನ್ನ ಸಂಭ್ರಮ ಕಳೆದುಕೊಂಡಿದೆಯಾದರೂ ಕೆಲವು ಗ್ರಾಮಗಳಲ್ಲಿ ಇನ್ನೂ ಹಳೆಯ ಸಂಸ್ಕೃತಿ ಉಳಿಸಿಕೊಂಡಿರುವುದು ಹಳ್ಳಿಗಳಲ್ಲಿ ಕಂಡು ಬರುತ್ತಿದೆ. ವರ್ಷಪೂರ್ತಿ ಮೈ ಬೆವರಿಳಿಸಿ ದುಡಿದ ಪ್ರತಿಫಲ `ಕಣಸುಗ್ಗಿ~ಯದ್ದು. ರೈತ ಮನೆ ಮಂದಿಯೊಂದಿಗೆ ಶ್ರಮವಹಿಸಿ ಧಾನ್ಯ ಸಂಗ್ರಹಿಸುವ ಮಹತ್ವದ ಕಾರ್ಯ ಸುಗ್ಗಿಯಲ್ಲಿದೆ. ಇದು ರೈತರ ಸಂತಸದ ಸಮಯ. ಕಣಸುಗ್ಗಿ ಮಾತ್ರ ತಮ್ಮ ಸಾಧನೆಯ ಬಲ ಪ್ರದರ್ಶಿಸುವ ವೇದಿಕೆಯಾಗಿದೆ ಎಂಬುದು ರೈತರ ಮಾತು.
ಹೊಸ ವರ್ಷದ ನಂತರ ಹಿಂದೂ ಬಾಂಧವರಿಗೆ ಮೊದಲು ಆರಂಭ ವಾಗುವ ಹಬ್ಬವೇ ಸಂಕ್ರಾಂತಿ, ಸಂಕ್ರಾಂತಿ ಹಬ್ಬ ಎಂದರೆ ಸಾಮಾನ್ಯವಾಗಿ ರೈತರ ಕಣಸುಗ್ಗಿ ಹಬ್ಬ ಎಂದು ಕರೆಯುವ ವಾಡಿಕೆ. ಈ ಹಬ್ಬ ಬರುವ ಒಂಬತ್ತು ತಿಂಗಳ ಮೊದಲು ರೈತರು ತಮ್ಮ ಜಮೀನಿನಲ್ಲಿ ಜೀವನಕ್ಕೆ ಆಧಾರ ವಾಗುವ ಮುಂಗಾರು ಹಾಗೂ ಹಿಂಗಾರು ಬೀಜಗಳನ್ನು ಬಿತ್ತನೆ ಮಾಡು ತ್ತಾರೆ. ತಾವು ಬಿತ್ತನೆ ಮಾಡಿದ ಬೆಳೆಗೆ ಗೊಬ್ಬರ ಹಾಕಿ ಕುಂಟೆ ಹೊಡೆದು ಪೋಷಿಸುತ್ತಾರೆ. ಡಿಸೆಂಬರ್ ಅಂತ್ಯದ ವೇಳೆಗೆ ಕಟಾವು ಮಾಡುತ್ತಾರೆ.
ತಾವು ಕಟಾವು ಮಾಡಿದ ಬೆಳೆಗಳನ್ನು ಜಮೀನಲ್ಲಿ ಮೆದೆ ಮಾಡಿ ಸಂಗ್ರಹಿಸಿ ನಂತರ ಗ್ರಾಮದ ಬಳಿ ಕಣ ಮಾಡಿ ಬಣವೆ ಒಟ್ಟುತ್ತಾರೆ. ಬಿಸಿಲು ಚೆನ್ನಾಗಿ ಬಿದ್ದಾಗ ಕಣಸುಗ್ಗಿ ಆರಂಭಿಸುತ್ತಾರೆ. ಈ ಹಿಂದೆ ಎಲ್ಲ ಸಂಕ್ರಾಂತಿ ನಂತರವೇ ರಾಗಿ, ಹುರುಳಿ ಮುಂತಾದ ಬೆಳೆಗಳ ಸುಗ್ಗಿ ಮಾಡುತ್ತಿದ್ದರು. ಆದರೆ ಇತ್ತೀಚಿನ ವರ್ಷಗಳಲ್ಲಿ ಕಟಾವು ಮಾಡಿದ ಒಂದೆರಡು ದಿನಗಳಲ್ಲಿ ಕೆಲವರು ಯಂತ್ರ ಗಳಿಂದ ಮುಗಿಸುತ್ತಾರೆ. ಇನ್ನು ಕೆಲವರು ಮಾಮೂಲಿ ಪದ್ಧತಿಯಿಂದಲೇ ಮುಗಿಸುತ್ತಾರೆ.
ಆದರೆ ತಾಲ್ಲೂಕಿನ ಕಸಬಾ ಹೋಬಳಿಯ ಪನ್ನಸಮುದ್ರ ಗ್ರಾಮ ದಲ್ಲಿನ ರೈತರು ರಸ್ತೆಯಲ್ಲಿ ಒಕ್ಕಣೆ ಮಾಡದೇ ಹಳೆಯ ಪದ್ಧತಿಯಾದ ಜಮೀನುಗಳಲ್ಲಿ ಕಣ ಮಾಡಿಕೊಂಡು ಕಣಸುಗ್ಗಿ ಮಾಡುತ್ತಿರುವುದು ಕಂಡು ಬರುತ್ತಿದೆ. ಈ ಗ್ರಾಮದ ಜಯಣ್ಣ, ಮಹೇಶ್ ಮತ್ತು ಕುಮಾರ ಎಂಬ ಮೂರು ಮಂದಿ ಅಣ್ಣ- ತಮ್ಮಂದಿ ರಿದ್ದು, ಇವರು ವ್ಯವಸಾಯವನ್ನು ಅವಿಭಕ್ತ ಕುಟುಂಬದ ರೀತಿಯಲ್ಲಿಯೇ ಒಟ್ಟಿಗೆ ಮಾಡುತ್ತಾರೆ. ಮಳೆ ಅಭಾವದಿಂದ ಬೆಳೆ ಕೈಕೊಟ್ಟಿದ್ದರೂ ಈ ವರ್ಷ ಅವರು ಸುಮಾರು 125 ಚೀಲ ರಾಗಿ ಬೆಳೆದಿದ್ದಾರೆ ಎಂದರೆ ಅವರು ಎಷ್ಟು ಶ್ರಮಪಟ್ಟು ಕೆಲಸ ಮಾಡಿದ್ದಾರೆ ಎಂಬುದು ತಿಳಿಯುತ್ತದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.