ದೊಡ್ಡಬಳ್ಳಾಪುರ: `ಬಿಬಿಎಂಪಿ ವ್ಯಾಪ್ತಿಯಲ್ಲಿ ಸಂಗ್ರಹವಾಗುವ ಕಸವನ್ನು ಹೊರವಲಯದ ಗ್ರಾಮಗಳಲ್ಲಿ ಸುರಿಯಲು ಆಸ್ಪದ ನೀಡುವುದ್ಲ್ಲಿಲ. ಈ ಮೂಲಕ ಮಹಾನಗರದ ಸುತ್ತಲಿನ ಗ್ರಾಮಗಳನ್ನು ಕಸದ ತೊಟ್ಟಿಯಾಗಲು ಬಿಡುವುದಿಲ್ಲ' ಎಂದು ಕೇಂದ್ರ ಪೆಟ್ರೋಲಿಯಂ ಸಚಿವ ಎಂ.ವೀರಪ್ಪ ಮೊಯಿಲಿ ಎಚ್ಚರಿಸಿದರು.
ತಾಲ್ಲೂಕಿನ ಸಾಸಲು ಹೋಬಳಿ ಹೊಸಹಳ್ಳಿಯಲ್ಲಿ ಶನಿವಾರ ನಡೆದ ಜನಸಂಪರ್ಕ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
`ಮುಂಬೈ, ಪುಣೆಯಂತಹ ಮಹಾನಗರಗಳಲ್ಲಿ ಪ್ರತಿ ವಾರ್ಡ್ಗಳ ಕಸವನ್ನು ಅಲ್ಲಿಯೇ ಸಂಸ್ಕರಿಸುವ ಹೊಸ ತಂತ್ರಜ್ಞಾನವನ್ನು ಅನುಷ್ಠಾನಕ್ಕೆ ತರಲಾಗಿದೆ. ಇಂತಹುದೇ ತಂತ್ರಜ್ಞಾನವನ್ನು ಬೆಂಗಳೂರು ಸೇರಿದಂತೆ ಇತರೆ ಮಹಾನಗರಗಳೂ ಆಳವಡಿಸಿಕೊಳ್ಳಲು ಮುಂದಾಗಬೇಕು' ಎಂದು ಅವರು ಸೂಚಿಸಿದರು.
ಈ ವಿಷಯವಾಗಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಜೊತೆ ಶೀಘ್ರವೇ ಚರ್ಚಿಸುವುದಾಗಿ ಅವರು ತಿಳಿಸಿದರು.
ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಎಚ್.ಎಸ್.ಅಶ್ವತ್ಥ್ ನಾರಾಯಣ ಕುಮಾರ್ ಮಾಡಿದ ಮನವಿಯ ಹಿನ್ನೆಲೆಯಲ್ಲಿ ಮೊಯಿಲಿ ಬಿಬಿಎಂಪಿಗೆ ಈ ಎಚ್ಚರಿಕೆ ಮಾತುಗಳನ್ನು ರವಾನಿಸಿದರು.
`ದೊಡ್ಡಬೆಳವಂಗಲ ಸಮೀಪದ ಗುಂಡ್ಲಹಳ್ಳಿ ಸಮೀಪದ ಟೆರ್ರಾ ಫರ್ಮಾದಲ್ಲಿ ಕಸ ತಂದು ಹಾಕಿರುವುದರಿಂದ ಈಗ ಉಂಟಾಗಿರುವ ಸಮಸ್ಯೆಯೇ ದೊಡ್ಡದಾಗಿದೆ. ಮತ್ತೆ 2ನೇ ಹಂತದಲ್ಲಿ ಆರೂಢಿ ಸಮೀಪ ಕಸ ತಂದು ಸುರಿಯಲು 250 ಎಕರೆ ಪ್ರದೇಶ ಗುರುತಿಸಲಾಗಿದೆ. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು' ಎಂಬ ಅಶ್ವತ್ಥ್ ನಾರಾಯಣಕುಮಾರ್ ಮನವಿಯ ಅಂಶವನ್ನು ಪ್ರಸ್ತಾಪಿಸಿದ ಮೊಯಿಲಿ ಅವರು, `ಮಹಾನಗರದ ಸುತ್ತಲಿನ ಗ್ರಾಮಗಳೆಲ್ಲಾ ಕಸದ ತೊಟ್ಟಿಗಳಾದರೆ ಗತಿಯೇನು' ಎಂದು ಪ್ರಶ್ನಿಸಿದರು.