ಯಲಹಂಕ: ಬ್ಯಾಟರಾಯನಪುರ ಕ್ಷೇತ್ರ ವ್ಯಾಪ್ತಿಯ ಜಕ್ಕೂರು ಗ್ರಾಮದ ಶ್ರೀರಾಮ, ಮುನೇಶ್ವರಸ್ವಾಮಿ, ಅಕ್ಕಯಮ್ಮ ದೇವಾಲಯ ಸೇವಾ ಟ್ರಸ್ಟ್ ಆಶ್ರಯದಲ್ಲಿ ದಸರಾ ಮಹೋತ್ಸವದ ಅಂಗವಾಗಿ ಹಮ್ಮಿಕೊಂಡಿದ್ದ ಗ್ರಾಮದೇವರುಗಳ ಉತ್ಸವ ಗುರುವಾರ ವಿಜೃಂಭಣೆಯಿಂದ ನೆರವೇರಿತು.
ಬೆಳಿಗ್ಗೆ 10 ಗಂಟೆಗೆ ದೇವಾಲಯದಿಂದ ಹೊರಟ ಮೆರಣಿಗೆ, ಜಕ್ಕೂರು ಕೆರೆಯಲ್ಲಿ ಗಂಗೆ ಪೂಜೆ ನೆರವೇರಿಸಿ, ಅಲ್ಲಿಂದ ಬನ್ನಿ ಮಂಟಪಕ್ಕೆ ತೆರಳಿ, ಬನ್ನಿ ಮರಕ್ಕೆ ಪೂಜೆಯನ್ನು ಸಲ್ಲಿಸಲಾಯಿತು.
ನಂತರ ನವ್ಯನಗರ, ಸ್ನೇಹನಗರ ಹಾಗೂ ಜಕ್ಕೂರು ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿದ ಮೆರವಣಿಗೆಯು ಸಂಜೆ 4ರ ಹೊತ್ತಿಗೆ ದೇವಾಲಯ ತಲುಪಿತು.
ಚಿಕ್ಕಮಗಳೂರಿನ ಶ್ವೇತಾ ಮತ್ತು ತಂಡದವರ ವೀರಗಾಸೆ ನೃತ್ಯ ಹಾಗೂ ತಮಟೆ ವಾದ್ಯಗಳು ಮೆರವಣಿಗೆಗೆ ವಿಶೇಷ ಮೆರುಗು ನೀಡಿ ನೋಡುಗರನ್ನು ಆಕರ್ಷಿಸಿದವು.
ಜಿಲ್ಲಾ ಪಂಚಾಯಿತಿಯ ಮಾಜಿ ಅಧ್ಯಕ್ಷ ರವಿಕುಮಾರ್, ಮಹಿಳಾ ಸಂಘದ ಅಧ್ಯಕ್ಷೆ ರತ್ನಮ್ಮ, ಉಪಾಧ್ಯಕ್ಷೆ ಜಯಮ್ಮ ರವಿಕುಮಾರ್, ಕಾರ್ಯದರ್ಶಿ ಶ್ರೀದೇವಿ, ಪ್ರಧಾನ ಅರ್ಚಕರಾದ ಜೆ.ರಾಮ ಚಂದ್ರರಾವ್ ಹಾಗೂ ಅಂಬೇಡ್ಕರ್ ಸಂಘದ ಪದಾಧಿಕಾರಿಗಳು ಹಾಜರಿದ್ದರು.