ರಾಣೆಬೆನ್ನೂರು: ತಾವು ಜೀವಂತ ಇರುವಾಗಲೇ ತಮಗೆ ಮರಣ ಪ್ರಮಾಣ ಪತ್ರ ನೀಡಿದ ಗ್ರಾಮಲೆಕ್ಕಾಧಿರಿ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ನಗರದ ಚಂದ್ರಶೇಖರಯ್ಯ ಗುರುಲಿಂಗಯ್ಯ ಕುಲಕರ್ಣಿ ರಾಜ್ಯಪಾಲ ಎಚ್.ಆರ್.ಭಾರದ್ವಾಜ್, ಮುಖ್ಯ ಮಂತ್ರಿ ಜಗದೀಶ ಶೆಟ್ಟರ್ ಹಾಗೂ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿ ಯೂರಪ್ಪ ಅವರಿಗೆ ಪತ್ರ ಬರೆದಿದ್ದಾರೆ.
2008ರ ವಿಧಾನಸಭಾ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಚಂದ್ರಶೇಖರಯ್ಯ ಅವರಿಗೆ ನೀಡಿದ ಮರಣ ಪ್ರಮಾಣ ಪತ್ರದಲ್ಲಿ ಯಾವಾಗ ಮರಣ ಹೊಂದಿದ್ದಾರೆ ಎಂದು ನಮೂದಿಸಿಲ್ಲ.
ಸುಳ್ಳು ದಾಖಲೆ ಸೃಷ್ಟಿಸಿ ಉದ್ದೇಶ ಪೂರ್ವಕವಾಗಿಯೇ ತಮಗೆ ಮರಣ ಪ್ರಮಾಣ ಪತ್ರ ನೀಡಲಾಗಿದ್ದು, ಜೀವಂತ ಇರುವಾಗಲೇ ಮರಣ ಪ್ರಮಾಣ ಪತ್ರ ನೀಡಿರುವ ಗ್ರಾಮ ಲೆಕ್ಕಾಧಿಕಾರಿ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವ ಕುರಿತು ರಾಣೇಬೆನ್ನೂರು ತಹಶೀಲ್ದಾರ ಹಾಗೂ ಹಾವೇರಿ ಜಿಲ್ಲಾಧಿಕಾರಿಗಳಿಗೆ ಈ ಹಿಂದೆಯೇ ದೂರು ನೀಡಲಾಗಿತ್ತು.
ಅಗತ್ಯ ದಾಖಲೆಗಳೊಂದಿಗೆ ರಾಣೇ ಬೆನ್ನೂರು ತಹಶೀಲ್ದಾರ ಅವರ ಎದುರಿಗೆ ಜನೇವರಿ 1, 2012 ರಂದು ವಿಚಾ ರಣೆಗೆ ಹಾಜರಾಗುವಂತೆ ಜಿಲ್ಲಾಧಿಕಾರಿಗಳ ಆದೇಶದ ಹಿನ್ನೆಲೆಯಲ್ಲಿ ವಿಚಾರಣೆಗೆ ಹಾಜರಾಗಿದ್ದೆ. ಆದರೆ, ವಿಚಾರಣೆ ನಡೆದು ಆರು ತಿಂಗಳು ಕಳೆದರೂ ಜಿಲ್ಲಾಧಿಕಾರಿಗಳು ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ಯಾವುದೇ ಕ್ರಮ ಜರುಗಿಸಿಲ್ಲ ಎಂದು ಆಪಾದಿಸಿದ್ದಾರೆ.
ಈ ಕಾರಣದಿಂದ ಜೀವಂತ ಇರುವಾಗಲೇ ನನಗೆ ಮರಣ ಪ್ರಮಾಣ ಪತ್ರ ನೀಡಿದ ಗ್ರಾಮಲೆಕ್ಕಾಧಿಕಾರಿಗೆ ಶಿಸ್ತು ಕ್ರಮ ಜರುಗಿಸಲು ಜಿಲ್ಲಾಧಿಕಾರಿಗಳಿಗೆ ಆದೇಶಿಸುವಂತೆ ರಾಜ್ಯಪಾಲರು ಹಾಗೂ ಮುಖ್ಯಮಂತ್ರಿಗಳಿಗೆ ಬರೆದ ಪತ್ರದಲ್ಲಿ ಕೋರಿದ್ದಾರೆ.