ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ರಾಮಸಭೆ ರದ್ದು: ಮನಗುಂಡಿ ಪಂಚಾಯ್ತಿಗೆ ಬೀಗ

Last Updated 12 ಅಕ್ಟೋಬರ್ 2012, 8:55 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಬೆಲೆ ಏರಿಕೆಗೆ ಅನುಗುಣವಾಗಿ ಮಧ್ಯಂತರ ಗೌರವಧನ ಹೆಚ್ಚಿಸಬೇಕು, ಕನಿಷ್ಠ ವೇತನವಾಗಿ ರೂ 10 ಸಾವಿರ ಜಾರಿಗೆ ತರಬೇಕು ಮತ್ತಿತರ ಪ್ರಮುಖ ಬೇಡಿಕೆಗಳನ್ನು ಮುಂದಿಟ್ಟು ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಒಕ್ಕೂಟದ (ಎಐಟಿಯುಸಿ) ಹುಬ್ಬಳ್ಳಿ ಗ್ರಾಮೀಣ ಘಟಕದ ವತಿಯಿಂದ ನಗರ ಮಿನಿವಿಧಾನಸೌಧದ ಮುಂಭಾಗದಲ್ಲಿ ಗುರುವಾರ ಧರಣಿ ನಡೆಯಿತು.

`ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರನ್ನು `ಸಿ~ ಗ್ರೂಪ್ ಮತ್ತು `ಡಿ~ ಗ್ರೂಪ್ ನೌಕರರೆಂದು ಕಾಯಂಗೊಳಿಸಬೇಕು, ಸೇವಾ ಅವಧಿಯ ಆಧಾರದಲ್ಲಿ ಹೆಚ್ಚುವರಿಯಾಗಿ ವರ್ಷಕ್ಕೆ ರೂ 200 ಕೊಡಬೇಕು, ಅಂಗನವಾಡಿ ಕೇಂದ್ರಗಳು ಸಂಜೆ 4 ಗಂಟೆವರೆಗೆ ನಡೆಸುತ್ತಿರುವುದರಿಂದ ಮಕ್ಕಳಿಗೆ ನೀಡಲಾಗುವ ಪೌಷ್ಟಿಕ ಆಹಾರದ ಪ್ರಮಾಣ ಹೆಚ್ಚಿಸಬೇಕು,   ಕೇಂದ್ರ ಸರ್ಕಾರದ ಆದೇಶದಂತೆ ಆರು ತಿಂಗಳ ಹೆರಿಗೆ ರಜೆ ಮತ್ತು ಎಲ್ಲ ರೀತಿಯ ಭತ್ತೆಗಳನ್ನು ನೀಡಬೇಕು ಎಂಬುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಈ ಧರಣಿ ನಡೆಯಿತು.

`ಕೇಂದ್ರ ಮತ್ತು ರಾಜ್ಯ ಸರ್ಕಾರ ನಮ್ಮ ಬೇಡಿಕೆಗಳನ್ನು ಕಡೆಗಣಿಸುತ್ತಿದೆ. ಈ ಹಿನ್ನೆಲೆಯಲ್ಲಿ ಹೋರಾಟ ತೀವ್ರಗೊಳಿಸುವ ಭಾಗವಾಗಿ ಮೊದಲ ಹಂತದಲ್ಲಿ ರಾಜ್ಯದಾದ್ಯಂತ ಎಲ್ಲ ತಾಲ್ಲೂಕು ಕೇಂದ್ರಗಳಲ್ಲಿ ಈ ರೀತಿಯ ಧರಣಿ ಹಮ್ಮಿಕೊಳ್ಳಲಾಗಿದೆ. ಇದೇ ಬೇಡಿಕೆ ಮುಂದಿಟ್ಟು ನವೆಂಬರ್ 9ರಂದು ಅಂಗನವಾಡಿ ಬಂದ್ ಮಾಡಿ ಎರಡನೇ ಹಂತದ ಹೋರಾಟ ಮತ್ತು ಎಲ್ಲ ತಾಲ್ಲೂಕಿನವರು ಒಟ್ಟು ಸೇರಿ ಡಿ. 15ರಂದು ಜಿಲ್ಲಾ ಕೇಂದ್ರಗಳಲ್ಲಿ ಮೂರನೇ ಹಂತದ ಹೋರಾಟ ನಡೆಸಲಾಗುವುದು. ಡಿ.23ರಂದು ರಾಜ್ಯ ಸಮಿತಿಯ ನೇತೃತ್ವದಲ್ಲಿ ಪ್ರತಿಭಟನಾ ರ‌್ಯಾಲಿ, ಬಹಿರಂಗ ಸಭೆ ನಡೆಸಲು ನಿರ್ಧರಿಸಲಾಗಿದೆ~ ಎಂದು ಸಂಘಟನೆಯ ಸಂಚಾಲಕ ಎನ್.ಎ.ಖಾಜಿ ತಿಳಿಸಿದರು. ಧರಣಿಯಲ್ಲಿ ಪ್ರೇಮಾ ಮಿರಜಕರ ಮತ್ತಿತರರು ಇದ್ದರು.

ನವಲಗುಂದ ವರದಿ
ನವಲಗುಂದ: ರಾಜ್ಯ ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಫೆಡರೇಷನ್ ವತಿಯಿಂದ ಇಲ್ಲಿನ ತಹಶೀಲ್ದಾರ್ ಕಾರ್ಯಾಲಯದ ಎದುರು ಗುರುವಾರ ಎರಡು ದಿನಗಳ ಧರಣಿ ಸತ್ಯಾಗ್ರಹ ಆರಂಭವಾಯಿತು.

ಕಾರ್ಯಕರ್ತೆ ಹಾಗೂ ಸಹಾಯಕಿಯರನ್ನು ಸಿ ಹಾಗೂ ಡಿ ಗ್ರುಪ್ ಖಾಯಂ ಸರಕಾರಿ ನೌಕರರೆಂದು ಪರಿಗಣಿಸಬೇಕು. ಕನಿಷ್ಠ ವೇತನ ರೂ.10 ಸಾವಿರ ಜಾರಿಗೆ ತರಬೇಕು ಎಂಬುದು ಸೇರಿದಂತೆ ವಿವಿಧ ಬೇಡಿಕೆಗಳುಳ್ಳ ಮನವಿಯನ್ನು ತಹಶೀಲ್ದಾರ್ ಮೂಲಕ ಸರ್ಕಾರಕ್ಕೆ ಸಲ್ಲಿಸಲಾಯಿತು.

ಸಂಘದ ತಾಲ್ಲೂಕು ಘಟಕದ ಅಧ್ಯಕ್ಷೆ ಎನ್.ಎಫ್.ಸಮುದ್ರಿ, ಕಾರ್ಯದರ್ಶಿ ಲತೀಫ ಬಾಗಲಕೋಟೆ, ಸಂಚಾಲಕರಾದ ಎನ್.ಖಾಜಿ, ಗಂಗಮ್ಮ ಬಸಾಪುರ, ಕಲಾವತಿ ಪಿರಗಣ್ಣವರ, ಅಕ್ಕಮ್ಮೋ ಅಂಗಡಿ, ರೇಣುಕಾ ಪೂಜಾರ, ಗಿರಿಜಾ ಹುಲ್ಲೂರ, ಜಯಶ್ರೀ ಭೋವಿ, ಮಂಜುಳಾ ಒಂಟೇಲಿ, ಶಂಕ್ರಮ್ಮ ಹಿರೇಮಠ,       ಐ.ಜಿ.ಸುಂಕದ, ಶಾರದಾ ಅಂತನವರ ಇತರರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT