ಹಳೇಕೋಟೆ (ಮೂಡಿಗೆರೆ ತಾಲ್ಲೂಕು): ಗ್ರಾಮಾಂತರ ಪ್ರದೇಶದಲ್ಲಿ ಸಾವಿರಾರು ಸಂಗೀತ,ಕಲೆ ಮತ್ತು ಕಲಾವಿದರು ಇದ್ದು ಸಂಗೀತವನ್ನು ಬಿಡುವಿನ ಸಮಯದಲ್ಲಿ ಆಲಿಸಿ ಕಲೆ ಉಳಿಸಿ ಬೆಳೆಸಲು ಮುಂದಾಗಿ ಎಂದು ನವದೆಹಲಿ ಕೃಷಿಕ್ ಮಂಡಳಿ ನಿರ್ದೇಶಕ ಹಳೇಕೋಟೆ ರಮೇಶ್ ಹೇಳಿದರು.
ತಾಲ್ಲೂಕು ಕನ್ನಡ ಶಕ್ತಿ ಕೇಂದ್ರ,ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಹಳೇಕೋಟೆ ಗ್ರಾಮದ ರಮೇಶ್ ರವರ ಮನೆ ಅಂಗಳದಲ್ಲಿ ಭಾನುವಾರ ಸಂಜೆ ಸಾಂಸ್ಕೃತಿಕ ಸೌರಭ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಆರೋಗ್ಯಕ್ಕಾಗಿ ಸಂಗೀತ, ಮೂಢನಂಬಿಕೆ ಅಳಿಸಲು ಶಿಕ್ಷಣ ಹಾಗೂ ಕಲಾವಿದರನ್ನು ಗುರುತಿಸಿ ಗೌರವಿಸುವ ಕಾರ್ಯವನ್ನು ಸರ್ವರೂ ಮಾಡುವುದು ಅಗತ್ಯ ಸಮಾಜ ಸೇವೆಯ ಜತೆಗೆ ಸರ್ಕಾರಿ ಸೌಲಭ್ಯಗಳನ್ನು ಸದುಪಯೋಗ ಪಡಿಸಿಕೊಂಡು ಅಭಿವೃದ್ಧಿ ಹೊಂದುವಂತೆ ಮನವಿ ಮಾಡಿದರು.
ಇದೇ ಸಂದರ್ಭದಲ್ಲಿ ಬಡತನದಲ್ಲಿ ಉತ್ತಮ ಶಿಕ್ಷಣ ಪಡೆದ ನೇತ್ರಾ, ಸಂಧ್ಯಾ ಹಾಗೂ ಮುಂಬೈ ಕನ್ನಡ ಸಂಘದ ಕಾರ್ಯದರ್ಶಿ ಗಾಯಕಿ ಮನುಶ್ರೀಕುಮಾರ್ ಅವರುಗಳನ್ನು ಅಭಿನಂದಿಸಲಾಯಿತು.
ಇದೇ ಸಂದರ್ಭದಲ್ಲಿಹಾಸನದ ಗೀತ ಸಂಗಮ ಕಲಾವೃಂದ, ರಂಗಯ್ಯ ಮತ್ತು ತಂಡದಿಂದ ಜಾನಪದ ಗೀತೆ, ಅಂಬಳೆ ಗ್ರಾಮದ ರೇಣುಕಾದೇವಿ ತೊಗಲುಗೊಂಬೆ ಮೇಳವನ್ನು ಆಯೋಜಿಸಲಾಗಿತ್ತು.
ಬಿದರಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ವಿದ್ಯಾಪ್ರದೀಪ್ ಅಧ್ಯಕ್ಷತೆ ವಹಿಸಿದ್ದರು.ಉಪಾಧ್ಯಕ್ಷ ಪ್ರಭಾಕರ್,ಸದಸ್ಯ ಮನೋಜ್, ಲಯನೆಸ್ ಅಧ್ಯಕ್ಷೆ ಶೈಲಾ ನಾಗೇಶ್, ಗ್ರಾಮದ ಹಿರಿಯರಾದ ಪುಟ್ಟಮ್ಮಕೃಷ್ಣೇಗೌಡ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಮಾದೇಗೌಡ, ಶಿಕ್ಷಕ ಶಾಂತಕುಮಾರ್ ಇದ್ದರು.