ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ರಾಮಾಭಿವೃದ್ಧಿಯ ಕನಸು

Last Updated 29 ಫೆಬ್ರುವರಿ 2016, 19:42 IST
ಅಕ್ಷರ ಗಾತ್ರ

ಕೃಷಿಗೆ ಅನುದಾನ ₹47,912 ಕೋಟಿ  (ಈ ಬಾರಿ ), ₹25,988ಕೋಟಿ (ಕಳೆದ ಬಾರಿ)

ಗೊಬ್ಬರ ಸಬ್ಸಿಡಿ ರೈತರ ಖಾತೆಗೆ
ನವದೆಹಲಿ (ಪಿಟಿಐ):
ರಸಗೊಬ್ಬರ ಸಬ್ಸಿಡಿ ಇನ್ನು ಮುಂದೆ ನೇರವಾಗಿ ರೈತರ ಬ್ಯಾಂಕ್‌ ಖಾತೆಗೆ ಜಮಾ ಆಗಲಿದೆ.

ಸಬ್ಸಿಡಿ ಮಧ್ಯವರ್ತಿಗಳ ಪಾಲಾಗುವುದನ್ನು ತಪ್ಪಿಸುವ ಉದ್ದೇಶದಿಂದ ಬ್ಯಾಂಕ್‌ ಖಾತೆಗೆ ಜಮಾ ಮಾಡಲಾಗುತ್ತದೆ ಎಂದು ಬಜೆಟ್‌ನಲ್ಲಿ ಪ್ರಕಟಿಸಲಾಗಿದೆ.

ಅಡುಗೆ ಅನಿಲ ಸಬ್ಸಿಡಿಯನ್ನು ಸದ್ಯ ಗ್ರಾಹಕರ ಬ್ಯಾಂಕ್‌ ಖಾತೆಗೆ ಜಮಾ ಮಾಡಲಾಗುತ್ತಿದೆ. ಅದೇ ಮಾದರಿಯಲ್ಲಿ ರಸಗೊಬ್ಬರ ಸಬ್ಸಿಡಿ ಪಾವತಿಸಲಾಗುತ್ತದೆ. ಈ ಬಾರಿಯ ಬಜೆಟ್‌ನಲ್ಲಿ ಕೃಷಿ ವಲಯಕ್ಕೆ ₹35,984 ಕೋಟಿ ಅನುದಾನ ನೀಡಿದ್ದು, 2022ರ ವೇಳೆಗೆ ರೈತರ ಆದಾಯವನ್ನು ದ್ವಿಗುಣಗೊಳಿಸುವ ಉದ್ದೇಶ ಹೊಂದಲಾಗಿದೆ.

28.5 ಲಕ್ಷ ಹೆಕ್ಟೇರ್‌ಗೆ ನೀರಾವರಿ ಸೌಲಭ್ಯ: ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆಯನ್ನು ಬಲಪಡಿಸುವ ಮೂಲಕ 28.5 ಲಕ್ಷ ಹೆಕ್ಟೇರ್‌ಗೆ ನೀರಾವರಿ ಸೌಲಭ್ಯ ಕಲ್ಪಿಸಲು ನಿರ್ಧರಿಸಲಾಗಿದೆ.

ತ್ವರಿತ ನೀರಾವರಿ ಅಭಿವೃದ್ಧಿ ಯೋಜನೆಯಡಿ 89 ಯೋಜನೆಗಳನ್ನು ಕೈಗೆತ್ತಿಕೊಳ್ಳಲು ಉದ್ದೇಶಿಸಿದ್ದು, 23 ಯೋಜನೆಗಳನ್ನು 2017ರ ಮಾರ್ಚ್‌ 31ರ ಒಳಗೆ ಪೂರ್ಣಗೊಳಿಸಲಾಗುತ್ತದೆ.

ಈ ಯೋಜನೆಗೆ ಪ್ರಸಕ್ತ ವರ್ಷ ₹17 ಸಾವಿರ ಕೋಟಿ ನೀಡಲಾಗಿದೆ. ಮುಂದಿನ 5 ವರ್ಷಗಳಲ್ಲಿ ₹86,500 ಕೋಟಿ ಅನುದಾನ ನೀಡಲಾಗುತ್ತದೆ.

ನಬಾರ್ಡ್‌ ನೆರವಿನಡಿ ದೀರ್ಘಾವಧಿ ನೀರಾವರಿ ಯೋಜನೆಗಳನ್ನು ಕೈಗೆತ್ತಿಕೊಳ್ಳಲು ₹20 ಸಾವಿರ ಕೋಟಿ ನಿಧಿ ಸ್ಥಾಪನೆ. ಬಜೆಟ್‌ ಮೂಲಕ ₹12,517 ಕೋಟಿ ಅನುದಾನ. ಅಲ್ಲದೆ ಮಾರುಕಟ್ಟೆಯಲ್ಲಿ ಬಾಂಡ್‌ಗಳ ಮೂಲಕ ಹಣ ಸಂಗ್ರಹಿಸಲು ತೀರ್ಮಾನಿಸಲಾಗಿದೆ.

ಅಂತರ್ಜಲದ ಸಮರ್ಥ ನಿರ್ವಹಣೆಗೆ ₹6 ಸಾವಿರ ಕೋಟಿ ಅನುದಾನ ನೀಡಲಾಗಿದೆ. ಕೃಷಿ ಹೊಂಡಗಳ ನಿರ್ಮಾಣಕ್ಕೆ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ಅನುದಾನ ಬಳಕೆಗೆ ಅವಕಾಶ ನೀಡಲಾಗಿದೆ.

2017ರ ಮಾರ್ಚ್‌ ಒಳಗೆ 14 ಕೋಟಿ ರೈತರ ಹೊಲಗಳ ಮಣ್ಣಿನ ತಪಾಸಣೆ. ಮಣ್ಣಿನ ಆರೋಗ್ಯ ಮತ್ತು ಫಲವತ್ತತೆ ಯೋಜನೆಯಡಿ ಇದಕ್ಕಾಗಿ ₹368 ಕೋಟಿ ಅನುದಾನ ಹಂಚಿಕೆ.

ಏಕೀಕೃತ ಕೃಷಿ ಮಾರುಕಟ್ಟೆ : ಏ.14ರಂದು ಚಾಲನೆ
ಎಪಿಎಂಸಿಗಳಲ್ಲಿ ಆನ್‌ಲೈನ್‌ ಆಧಾರಿತ ಮಾರಾಟ ವಹಿವಾಟು ನಡೆಸುವ ಏಕೀಕೃತ ಕೃಷಿ ಮಾರುಕಟ್ಟೆ ಯೋಜನೆಗೆ ಡಾ.ಬಿ.ಆರ್. ಅಂಬೇಡ್ಕರ್ ಅವರ ಜನ್ಮದಿನವಾದ ಏಪ್ರಿಲ್ 14ರಂದು ಚಾಲನೆ ನೀಡಲಾಗುತ್ತದೆ.

ಆನ್‌ಲೈನ್‌ ಮಾರಾಟ–ಖರೀದಿ ಯೋಜನೆಯು ಈಗಾಗಲೇ ಕರ್ನಾಟಕದಲ್ಲಿ ಜಾರಿಯಲ್ಲಿದೆ. ಇದನ್ನು ರಾಷ್ಟ್ರವ್ಯಾಪಿ ಅನುಷ್ಠಾನಗೊಳಿಸಲು ಕೇಂದ್ರ ಮುಂದಾಗಿದೆ. ದೇಶದ ಆಯ್ದ 585 ನಿಯಂತ್ರಿತ ಸಗಟು ಮಾರಾಟ ಮಾರುಕಟ್ಟೆಗಳಲ್ಲಿ ಈ ಯೋಜನೆ ಜಾರಿಯಾಗಲಿದೆ.
ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ತಂದಿರುವ 12 ರಾಜ್ಯಗಳು ಈ ಯೋಜನೆಯಡಿ ಬಂದಿವೆ. ಮುಂದಿನ ದಿನಗಳಲ್ಲಿ ಉಳಿದ ರಾಜ್ಯಗಳೂ ಕಾಯ್ದೆಗೆ ತಿದ್ದುಪಡಿ ತಂದು ಯೋಜನೆಯಡಿ ಸೇರಿಕೊಳ್ಳಲಿವೆ ಎಂಬ ವಿಶ್ವಾಸವನ್ನು ಜೇಟ್ಲಿ ವ್ಯಕ್ತಪಡಿಸಿದ್ದಾರೆ.

ರೈತರಿಗೆ ಏನೇನು...
* ರೈತರಿಗಾಗಿ ಜಾರಿಗೊಳಿಸಿರುವ  ‘ಫಸಲ್‌ ಭಿಮಾ  ಯೋಜನೆ’ಗೆ ₹ 5,500 ಕೋಟಿ.

* ದೇಶದ ವಿವಿಧ ಭಾಗಗಳ ರೈತರಿಗೆ ಕನಿಷ್ಠ ಬೆಂಬಲ ಬೆಲೆ ಒದಗಿಸಲು ಮೂರು ನಿರ್ದಿಷ್ಟ ಕಾರ್ಯಕ್ರಮ
1. ವಿಕೇಂದ್ರೀಕರಣ ಖರೀದಿ ವ್ಯವಸ್ಥೆ ಹೊಂದಿರದ ರಾಜ್ಯಗಳಲ್ಲಿ ಯೋಜನೆ ಅನುಷ್ಠಾನ.
2. ಭಾರತ ಆಹಾರ ನಿಗಮದ ಮೂಲಕ ‘ಆನ್‌ಲೈನ್‌ ಖರೀದಿ ವ್ಯವಸ್ಥೆ ’. ಇದರಿಂದ ಪಾರದರ್ಶಕತೆ, ರೈತರು ಆನ್‌ಲೈನ್‌ನಲ್ಲಿ ನೋಂದಣಿ ಮಾಡಿಕೊಳ್ಳಲು ಮತ್ತು ಮಾಹಿತಿ ಪಡೆಯಲು ಅನುಕೂಲವಾಗಲಿದೆ.
3. ದ್ವಿದಳ ಧಾನ್ಯಗಳ ಖರೀದಿಗೆ ಪರಿಣಾಮಕಾರಿ ವ್ಯವಸ್ಥೆ  ಜಾರಿ

* ರೈತರಿಗೆ ಸಕಾಲದಲ್ಲಿ ಸಾಲ ಒದಗಿಸಲು ಪ್ರಸಕ್ತ ವರ್ಷದಲ್ಲಿ ₹ 9 ಲಕ್ಷ ಕೋಟಿ ಮೀಸಲು.

* ರೈತರು ಉಪಕಸುಬುಗಳನ್ನು ಕೈಗೊಳ್ಳಲು ಪ್ರೋತ್ಸಾಹ. ಹೈನುಗಾರಿಕೆ ಉತ್ತೇಜನಕ್ಕೆ ‘ಪಶುಧನ ಸಂಜೀವಿನಿ’ (ಸಾಕುಪ್ರಾಣಿಗಳ ಆರೋಗ್ಯ ರಕ್ಷಣೆ), ‘ಆಧುನಿಕ ತಳಿ ಅಭಿವೃದ್ಧಿ’, ‘ಇ–ಪಶುಧನ ಹಾತ್‌’ (ತಳಿ ಅಭಿವೃದ್ಧಿಪಡಿಸುವವರು ಮತ್ತು ರೈತರ ನಡುವೆ ಸಂಪರ್ಕ), ದೇಶೀಯ ತಳಿ ಜಾನುವಾರುಗಳ ಅಭಿವೃದ್ಧಿಗೆ ರಾಷ್ಟ್ರೀಯ ತಳಿ ಕೇಂದ್ರ ಸ್ಥಾಪನೆ.

₹ 850 ಕೋಟಿ ವೆಚ್ಚದಲ್ಲಿ ಮುಂದಿನ ಕೆಲವು ವರ್ಷಗಳಲ್ಲಿ ಈ  ಎಲ್ಲ ಯೋಜನೆಗಳ ಜಾರಿ.

* 2014–15 ನೇ ಸಾಲಿನಲ್ಲಿ ಜೇನು ಉತ್ಪಾದನೆ ಪ್ರಮಾಣ 76,150 ಮೆಟ್ರಿಕ್‌ ಟನ್‌ನಿಂದ 86,500 ಮೆಟ್ರಿಕ್‌ ಟನ್‌ಗೆ ಹೆಚ್ಚಿದೆ. ಶೇಕಡ 90ರಷ್ಟು ಜೇನು ರಫ್ತು ಮಾಡಲಾಗುತ್ತಿದೆ.

* ಬೇಳೆಕಾಳುಗಳ ಉತ್ಪಾದನೆಯನ್ನು ಉತ್ತೇಜಿಸಲು ರಾಷ್ಟ್ರೀಯ ಆಹಾರ ಭದ್ರತೆ ಮಿಷನ್‌ ಮೂಲಕ ₹ 500 ಕೋಟಿ ಅನುದಾನ. 622 ಜಿಲ್ಲೆಗಳಿಗೆ ಈ ಯೋಜನೆ ವಿಸ್ತರಣೆ.

* 674 ಕೃಷಿ–ವಿಜ್ಞಾನ ಕೇಂದ್ರಗಳ ಕಾರ್ಯನಿರ್ವಹಣೆ ಮತ್ತು ದಕ್ಷತೆ ಹೆಚ್ಚಿಸಲು ರಾಷ್ಟ್ರಮಟ್ಟದ ಸ್ಪರ್ಧೆ. ಪ್ರಶಸ್ತಿಯ ಒಟ್ಟು ಮೊತ್ತ ₹ 50 ಲಕ್ಷ.

* ಪ್ರಸಕ್ತ ವರ್ಷದಲ್ಲಿ ಗೋದಾಮುಗಳಲ್ಲಿ 97 ಲಕ್ಷ ಮೆಟ್ರಿಕ್‌ಟನ್‌ ವರೆಗೆ ಶೇಖರಣಾ ಸಾಮರ್ಥ್ಯ ಹೆಚ್ಚಳ.

* ಪ್ರಧಾನಮಂತ್ರಿ ಗ್ರಾಮೀಣ ಸಡಕ್‌ ಯೋಜನೆಗೆ ಪ್ರಸಕ್ತ ಸಾಲಿನಲ್ಲಿ ₹ 19,000 ಕೋಟಿ ಅನುದಾನ. ರಾಜ್ಯಗಳ ಅನುದಾನವೂ ಸೇರಿ ಒಟ್ಟು ಮೊತ್ತ ₹ 27,000 ಕೋಟಿ ವೆಚ್ಚ. 2.23 ಲಕ್ಷ ಕಿ.ಮೀ ರಸ್ತೆ ನಿರ್ಮಿಸಿ 65,000 ಗ್ರಾಮೀಣ ವಸತಿ ಪ್ರದೇಶಗಳಿಗೆ ಸಂಪರ್ಕ.

ರಾಷ್ಟ್ರೀಯ ಗ್ರಾಮ ಸ್ವರಾಜ್ಯ ಅಭಿಯಾನಕ್ಕೆ ₹655 ಕೋಟಿ
ರಾಷ್ಟ್ರೀಯ ಗ್ರಾಮ ಸ್ವರಾಜ್ಯ ಅಭಿಯಾನಕ್ಕೆ ₹655 ಕೋಟಿ ಅನುದಾನ ನೀಡಲಾಗುತ್ತದೆ ಎಂದು ಬಜೆಟ್‌ನಲ್ಲಿ ಪ್ರಕಟಿಸಲಾಗಿದೆ.  ಸುಸ್ಥಿರ ಅಭಿವೃದ್ಧಿ ಗುರಿ ಸಾಧಿಸುವ ಉದ್ದೇಶದಿಂದ ಪಂಚಾಯತ್ ರಾಜ್ಯ ಸಂಸ್ಥೆಗಳ ಆಡಳಿತ ಸಾಮರ್ಥ್ಯ ಹೆಚ್ಚಿಸಲು ಈ ಆಂದೋಲನ ಹಮ್ಮಿಕೊಳ್ಳಲಾಗುತ್ತದೆ.

ಹಳ್ಳಿಗಳು ಮತ್ತು ಪಟ್ಟಣಗಳಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಅನುಷ್ಠಾನ ಗೊಳಿಸಲು 14ನೇ ಹಣಕಾಸು ಆಯೋಗದ ಶಿಫಾರಸಿನಂತೆ ಬಜೆಟ್ ಅನುದಾನವನ್ನು ಹೆಚ್ಚಿಸಲಾಗಿದೆ. 2016–17ನೇ ಹಣಕಾಸು ವರ್ಷದಲ್ಲಿ ಒಟ್ಟು ₹287 ಲಕ್ಷ ಕೋಟಿ ಅನುದಾನ ಹಂಚಿಕೆ ಮಾಡಲಾಗಿದೆ. ಈ ಯೋಜನೆಯಡಿ ಪ್ರತಿ ಗ್ರಾಮ ಪಂಚಾಯಿತಿಗೆ ₹80 ಲಕ್ಷ ಮತ್ತು ಪ್ರತಿ ನಗರ ಸ್ಥಳೀಯಾಡಳಿತ ಸಂಸ್ಥೆಗಳಿಗೆ ₹21 ಕೋಟಿ ಅನುದಾನ ನೀಡಲಾಗುತ್ತದೆ ಎಂದು ಜೇಟ್ಲಿ ತಿಳಿಸಿದ್ದಾರೆ.

ಈ ಅನುದಾನ ಬಳಕೆಯ ಮಾರ್ಗದರ್ಶಿ ಸೂತ್ರಗಳನ್ನು ಪಂಚಾಯತ್‌ರಾಜ್‌ ಇಲಾಖೆಯು ರಾಜ್ಯ ಸರ್ಕಾರಗಳ ಜತೆ ಸಮಾಲೋಚಿಸಿ ರೂಪಿಸಲಿದೆ.

ನರೇಗಾಕ್ಕೆ ಹೆಚ್ಚುವರಿ ₹3,800 ಕೋಟಿ
ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಗೆ  (ನರೇಗಾ) ಈ ವರ್ಷ ₹3,800 ಕೋಟಿ ಹೆಚ್ಚಿಗೆ ಅನುದಾನ ನೀಡಲಾಗಿದೆ.

ಕಳೆದ ವರ್ಷದ ಬಜೆಟ್‌ನಲ್ಲಿ ನರೇಗಾಕ್ಕೆ ₹34,699 ಕೋಟಿ ಮೀಸಲಿಡಲಾಗಿತ್ತು. ಅದನ್ನು ₹38,500 ಕೋಟಿಗೆ ಏರಿಸಲಾಗಿದೆ. ಇದರ ಜತೆಗೆ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ನಿಧಿಯ ವಾಸ್ತವ ಬಳಕೆಯ ಆಧಾರದಲ್ಲಿ  ₹5 ಸಾವಿರ ಕೋಟಿ ಒದಗಿಸುವ ಭರವಸೆ ನೀಡಲಾಗಿದೆ.

ಯುಪಿಎ ಸರ್ಕಾರ ಜಾರಿಗೊಳಿಸಿದ್ದ ಈ ಯೋಜನೆಯನ್ನು ಹಿಂದೆ ಬಿಜೆಪಿ ಟೀಕಿಸಿತ್ತು. ಆದರೆ, ಈಗ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ ನರೇಗಾಕ್ಕೆ ಹೆಚ್ಚಿನ ಅನುದಾನ ನೀಡಿದೆ. ಇತ್ತೀಚೆಗೆ ಪ್ರಧಾನಿ ಅವರು ಉದ್ಘಾಟಿಸಿರುವ ಶಾಂ ಪ್ರಸಾದ್ ಮುಖರ್ಜಿ ರೂರಲ್‌ ಅರ್ಬನ್ (ಹಳ್ಳಿ ಪಟ್ಟಣ ಅಭಿವೃದ್ಧಿ) ಯೋಜನೆಯಡಿ 300 ಕೇಂದ್ರಗಳು ಹಳ್ಳಿಗಳ ಅಭಿವೃದ್ಧಿ ಯೋಜನೆಗಳನ್ನು ಅನುಷ್ಠಾನಗೊಳಿಸಲಿವೆ.

ಪರಂಪರಾಗತ್‌ ಕೃಷಿ ವಿಕಾಸ ಯೋಜನೆ
ಸಾವಯವ ಕೃಷಿಗೆ ಒತ್ತು ನೀಡುವ ಉದ್ದೇಶದಿಂದ ಎರಡು ಹೊಸ ಯೋಜನೆಗಳನ್ನು ಪ್ರಕಟಿಸಲಾಗಿದೆ.

‘ಪರಂಪರಾಗತ್‌ ಕೃಷಿ ವಿಕಾಸ ಯೋಜನೆ’ಯಡಿ ಮುಂದಿನ ಮೂರು ವರ್ಷಗಳಲ್ಲಿ 5 ಲಕ್ಷ ಹೆಕ್ಟೇರ್‌ನಲ್ಲಿ ಸಾವಯವ ಬೆಳೆಗಳನ್ನು ಬೆಳೆಯಲು ಉತ್ತೇಜನ ನೀಡಲಾಗುತ್ತದೆ. ಈಶಾನ್ಯ ವಲಯದಲ್ಲಿ ಸಾವಯವ ಕೃಷಿಗೆ ಉತ್ತೇಜನ, ರಫ್ತಿಗೆ ಉತ್ತೇಜನ ನೀಡಲು ನಿರ್ಧರಿಸಿದ್ದು, ಇದಕ್ಕಾಗಿ ₹412 ಕೋಟಿ ಅನುದಾನ ನೀಡಲಾಗಿದೆ.

ಗ್ರಾಮೀಣ ಭಾರತದತ್ತ ಒಲವು
ಸ್ವಚ್ಛ ಭಾರತಕ್ಕೆ ₹11,300 ಸಾವಿರ ಕೋಟಿ
ಪ್ರಸಕ್ತ ಸಾಲಿನಲ್ಲಿ ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಸ್ವಚ್ಛ ಭಾರತ ಆಂದೋಲನಕ್ಕೆ ₹11,300 ಸಾವಿರ ಕೋಟಿ ಮೀಸಲಿಡಲಾಗಿದೆ. ಮುಖ್ಯವಾಗಿ ಗ್ರಾಮೀಣ ಭಾರತದಲ್ಲಿ ಶೌಚಾಲಯ ಮತ್ತು ಸ್ವಚ್ಛತೆಯನ್ನು ಸುಧಾರಿಸಲು ಈ ಯೋಜನೆಗೆ ಹೆಚ್ಚಿನ ಹಣ ಒದಗಿಸಲಾಗಿದೆ.
‘ಸ್ವಚ್ಛತೆಯ ವಿಷಯವು ರಾಷ್ಟ್ರಪಿತ ಮಹಾತ್ಮ ಗಾಂಧಿ ಅವರ ಹೃದಯಕ್ಕೆ ತುಂಬಾ ಹತ್ತಿರವಾಗಿತ್ತು’ ಎಂದು ಜೇಟ್ಲಿ ಹೇಳಿದರು.

ವಿದ್ಯುತ್ ಸಂಪರ್ಕ
ದೀನದಯಾಳ್ ಉಪಾಧ್ಯಾಯ ಗ್ರಾಮ ಜ್ಯೋತಿ ಮತ್ತು ಸಮಗ್ರ ಇಂಧನ ಅಭಿವೃದ್ಧಿ ಯೋಜನೆಯನ್ವಯ  ₹8,500 ಕೋಟಿ ವೆಚ್ಚದಲ್ಲಿ 2018ರ ಮೇ ವೇಳೆಗೆ ಗ್ರಾಮೀಣ ಪ್ರದೇಶದಲ್ಲಿ ಶೇ 100ರಷ್ಟು ವಿದ್ಯುತ್ ಸಂಪರ್ಕ ಕಲ್ಪಿಸುವ ಗುರಿ ಹೊಂದಲಾಗಿದೆ. 2015ರ ಏಪ್ರಿಲ್ 1ರವರೆಗೂ 18,542 ಗ್ರಾಮಗಳಿಗೆ ವಿದ್ಯುತ್ ಸೌಕರ್ಯವಿರಲಿಲ್ಲ. ಫೆಬ್ರುವರಿ 23ರವರೆಗೆ 5,542 ಹಳ್ಳಿಗಳಿಗೆ ವಿದ್ಯುತ್ ಸೌಲಭ್ಯ ಕಲ್ಪಿಸಲಾಗಿದೆ.

ಗ್ರಾಮೀಣರಿಗೆ ಡಿಜಿಟಲ್‌ ಸಾಕ್ಷರತೆ
ರಾಷ್ಟ್ರೀಯ ಡಿಜಿಟಲ್‌ ಸಾಕ್ಷರತಾ ಯೋಜನೆ ಮತ್ತು ಡಿಜಿಟಲ್ ಸಾಕ್ಷರತಾ ಅಭಿಯಾನಗಳಿಗೆ (ದಿಶಾ) ಈಗಾಗಲೇ ಅನುಮತಿ ನೀಡಿದ್ದು, ಗ್ರಾಮೀಣ ಭಾರತಕ್ಕಾಗಿ ನೂತನ ಡಿಜಿಟಲ್ ಸಾಕ್ಷರತಾ ಯೋಜನೆ ಪ್ರಾರಂಭಿಸುವ ಉದ್ದೇಶ ಪ್ರಕಟಿಸಲಾಗಿದೆ. ಈ ಯೋಜನೆಯು ಮುಂದಿನ ಮೂರು ವರ್ಷಗಳ ಒಳಗೆ ಸುಮಾರು ಆರು ಕೋಟಿ ಗ್ರಾಮೀಣ ಮನೆಗಳನ್ನು ಒಳಗೊಳ್ಳಲಿದೆ.

ಭೂ ದಾಖಲೆ ಆಧುನೀಕರಣ
ಭೂ ದಾಖಲೀಕರಣಗಳನ್ನು ವಿವಾದ ಮುಕ್ತಗೊಳಿಸಲು ಆಧುನೀಕರಣದ ಅಗತ್ಯತೆಯನ್ನು ಪ್ರತಿಪಾದಿಸಿರುವ ಕೇಂದ್ರ, ಇದಕ್ಕಾಗಿ ಬಜೆಟ್‌ನಲ್ಲಿ  ₹150 ಕೊಟಿ ಅನುದಾನ ನೀಡಿದೆ.

ಡಿಜಿಟಲ್ ಇಂಡಿಯಾ ಯೋಜನೆ ಅಡಿಯಲ್ಲಿ ರಾಷ್ಟ್ರೀಯ ಭೂ ದಾಖಲೆಗಳ ಆಧುನೀಕರಣ ಯೋಜನೆ 2016ರ ಏಪ್ರಿಲ್ 1ರಿಂದ ಜಾರಿಗೆ ಬರಲಿದೆ.

ಪರಮಾಣು ವಿದ್ಯುತ್‌ಗೆ ₹3,000 ಕೋಟಿ
ಪರಮಾಣು ವಿದ್ಯುತ್‌ ಯೋಜನೆಗೆ ಉತ್ತೇಜನ ನೀಡುವ ಉದ್ದೇಶದಿಂದ ಪರಮಾಣು ವಲಯಕ್ಕೆ ವಾರ್ಷಿಕ ₹3 ಸಾವಿರ ಕೋಟಿ  ಹಂಚಿಕೆ ಮಾಡಲಾಗುತ್ತದೆ.

ಪರಮಾಣು ವಿದ್ಯುತ್ ಉತ್ಪಾದನೆಯಲ್ಲಿ ಹೂಡಿಕೆ ವೃದ್ಧಿಸಲು ಮುಂದಿನ 15–20 ವರ್ಷಗಳ ಸಮಗ್ರ ಯೋಜನೆಯನ್ನು ಕೇಂದ್ರ ಸಿದ್ಧಪಡಿಸುತ್ತಿದೆ.

ಮುದ್ರಿತ ಪ್ರತಿ ವಿತರಣೆಗೆ ವಿದಾಯ
ಮೊದಲ ಬಾರಿಗೆ ಬಜೆಟ್‌ನ ಮುದ್ರಿತ ಪ್ರತಿಯನ್ನು ಹಂಚಲಿಲ್ಲ. ಇದುವರೆಗೆ ಪಾಲಿಸುತ್ತ ಬಂದಿದ್ದ ಸಂಪ್ರದಾಯವನ್ನು ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು ಮುರಿದಿದ್ದಾರೆ.

ಪರಿಸರ ಸಂರಕ್ಷಣೆಯ ಕ್ರಮವಾಗಿ ಸಂಸತ್ ಭವನ ಮತ್ತು ನೂತನ ಮಾಧ್ಯಮ ಕೇಂದ್ರದಲ್ಲಿ ಬಜೆಟ್ ಮುದ್ರಿತ ಪ್ರತಿಗಳನ್ನು ಹಂಚಲಿಲ್ಲ.
ಬಜೆಟ್ ಪ್ರತಿಯನ್ನು ಪಿಐಬಿ ಮತ್ತು ಹಣಕಾಸು ಸಚಿವಾಲಯದ ವೆಬ್‌ಸೈಟ್‌ಗೆ ಅಪ್‌ಲೋಡ್‌ ಮಾಡಲಾಗಿತ್ತು.

ಹಣಕಾಸು ಸಚಿವರು ಬಜೆಟ್ ಪ್ರತಿ ಓದಿದ ನಂತರ 15 ಮುದ್ರಿತ ಪ್ರತಿಗಳನ್ನು ಸಂಸತ್ ಸದಸ್ಯರಿಗೆ ವಿತರಿಸಲಾಯಿತು.

ಕಳೆದ ವರ್ಷದವರೆಗೆ ವಿಶೇಷವಾಗಿ ವಿತರಿಸಲಾಗುತ್ತಿದ್ದ ಕೂಪನ್‌ ನೀಡಿದ ನಂತರ ಬಜೆಟ್ ಪ್ರತಿಯನ್ನು ಸಂಸತ್ ಭವನದ ಕೌಂಟರ್ ಮತ್ತು ಮಾಧ್ಯಮ ಕೇಂದ್ರದಲ್ಲಿ ವಿತರಿಸಲಾಗುತ್ತಿತ್ತು.

***
ಸಕಾರಾತ್ಮಕ ಬೆಳವಣಿಗೆ
ಆಸಾವಯವ ಕೃಷಿಯನ್ನು ನೀತಿ ರೂಪದಲ್ಲಿ ಅಳವಡಿಸಿಕೊಂಡಿರುವುದು 12 ರಾಜ್ಯಗಳಲ್ಲಿ ಮಾತ್ರ. ಅದರಲ್ಲಿ ಕರ್ನಾಟಕ ಮೊದಲ ಸ್ಥಾನದಲ್ಲಿದೆ. 

ದೇಶದಲ್ಲಿ ಸಾವಯವ ಕೃಷಿ ಪದ್ಧತಿ ಅಸ್ತಿತ್ವದಲ್ಲಿದ್ದರೂ, ಕೇಂದ್ರ ಸರ್ಕಾರ ಪ್ರತಿ ವರ್ಷ ಸಾವಯವ ಕೃಷಿ ಉತ್ತೇಜನಕ್ಕೆ ಸ್ವಲ್ಪವೇ ಹಣ ತೆಗೆದಿರಿಸುತ್ತಿತ್ತು. ಆದರೆ, ಪ್ರಸಕ್ತ ಸಾಲಿನ ಬಜೆಟ್ಟಿನಲ್ಲಿ 5 ಲಕ್ಷ ಎಕರೆಗೆ ಯೋಜನೆ ವಿಸ್ತರಿಸುತ್ತಿರುವುದು, ಸದ್ಯ ರಾಜ್ಯಗಳಲ್ಲಿರುವ ಸಾವಯವ ಕೃಷಿ ಪದ್ಧತಿಯನ್ನು ಉತ್ತೇಜಿಸಿದಂತಾಗಿದೆ. 

ಈ ಉತ್ತೇಜನದಿಂದ ಸಾವಯವ ಕೃಷಿಕರು ಸ್ವಾವಲಂಬನೆ ಸಾಧಿಸಬಹುದು. ಔಷಧ ಮುಕ್ತ ಆಹಾರ ಉತ್ಪಾದಿಸುವವರ ಸಂಖ್ಯೆ ಹೆಚ್ಚಾಗಲು, ಇದು ಒಂದು ಹೆಜ್ಜೆಯಾಗಬಹುದು. ಇಂಥ ಯೋಜನೆಗಳು ವಿಸ್ತರಣೆಯಾದಲ್ಲಿ ಸಾವಯವ ಕೃಷಿ ಉತ್ಪನ್ನಗಳ ಬೇಡಿಕೆ ಮತ್ತು ಪೂರೈಕೆ ಅಂತರ ಕಡಿಮೆಯಾಗುವ ಸಾಧ್ಯತೆಗಳಿವೆ.

ಕೇಂದ್ರದಲ್ಲಿ ಈ ಸರ್ಕಾರ ಅಸ್ತಿತ್ವಕ್ಕೆ ಬಂದಾಗಿನಿಂದ ಸಾವಯವ ಕೃಷಿಗೆ ಒಂದಲ್ಲ ಒಂದು ರೀತಿ ಉತ್ತೇಜನ ದೊರೆಯುತ್ತಿದೆ. ಮಣ್ಣು, ನೀರು, ಜೈವಿಕ ಗೊಬ್ಬರಗಳ ಬಳಕೆಗೆ ಉತ್ತೇಜನ ನೀಡುವುದು ಪರಂಪರಾಗತ್ ಕೃಷಿ ವಿಕಾಸ ಯೋಜನೆಯ ಉದ್ದೇಶ. ಈಗ ನೇರವಾಗಿ ಸಾವಯವ ಕೃಷಿಯನ್ನೇ ಅನುಷ್ಠಾನಗೊಳಿಸುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ.

ರಾಜ್ಯದಲ್ಲಿ ಸಾವಯವ ಕೃಷಿ ಯೋಜನೆಗಳು ಜಾರಿಯಲ್ಲಿದ್ದರೂ, ಈ ಯೋಜನೆ ತುಸು ಭಿನ್ನವಾಗಿದ್ದು, ಚಾಲ್ತಿಯಲ್ಲಿರುವ ಯೋಜನೆಗೆ ಪೂರಕವಾಗಿದೆ. ಇದರಿಂದ ಸಾಕಷ್ಟು ಸಾವಯವ ಕೃಷಿಕರಿಗೆ ಉತ್ತೇಜನ ದೊರಕಿದಂತಾಗುತ್ತದೆ. ಸಾವಯವ ಕೃಷಿಕರಿಗೆ ನೆರವು, ಸಾವಯವ ಉತ್ಪನ್ನ ಬಳಸುವ ಕುರಿತು ಜನರಲ್ಲಿ ಜಾಗೃತಿ ಮೂಡಿಸುವಂತಹ ಸಾಮಾಜಿಕ ಕಳಕಳಿಯನ್ನು ಈ ಪ್ರಯತ್ನದಲ್ಲಿ ಕಾಣಬಹುದು.

-ಎನ್. ದೇವಕುಮಾರ್,
ಮುಖ್ಯಸ್ಥರು ಸಾವಯವ ಕೃಷಿ ಸಂಶೋಧನಾ ಸಂಸ್ಥೆ,
ಕೃಷಿ ವಿಶ್ವವಿದ್ಯಾಲಯ, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT